ಗಜಪಡೆಗಳ ರಿಂಗ್ ಮಾಸ್ಟರ್ ಮಾವುತರದು ಹೀನಾಯ ಬದುಕು
ಮೈಸೂರು, ಸೆಪ್ಟೆಂಬರ್.21: ದಸರಾದ ಸೂತ್ರಧಾರಿಗಳಾದ ಗಜಪಡೆಗಳನ್ನು ಸಾಕಿ ಸಲಹುತ್ತಿರುವ ವಿವಿಧ ಆನೆ ಶಿಬಿರಗಳಲ್ಲಿ ವಾಸ ಮಾಡುವ ಮಾವುತರು ಮತ್ತು ಕಾವಾಡಿಗಳ ಕುಟುಂಬಗಳು ಇವತ್ತು ಶೋಚನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಈ ಪೈಕಿ ಕೊಡಗಿನ ದುಬಾರೆ ಮತ್ತು ಆನೆಕಾಡು ಶಿಬಿರದಲ್ಲಿರುವ ಮಾವುತ, ಕಾವಾಡಿಗರು ಸ್ವಂತ ಸೂರಿಲ್ಲದೆ ಗುಡಿಸಲುಗಳಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದು, ಇವರಿಗೊಂದು ಶಾಶ್ವತ ನೆಲೆಯನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಎದ್ದು ಕಾಣುತ್ತಿದೆ.
ಮೈಸೂರು ದಸರಾ ರೂವಾರಿಯಾದ ಗಜಪಡೆಯನ್ನು ವರ್ಷಾನುಗಟ್ಟಲೆ ಸಾಕಿ ಸಲಹುತ್ತಾ ಅವುಗಳೊಂದಿಗೆ ಬದುಕು ಸವೆಸುತ್ತಾ ಬಂದಿರುವ ಮಾವುತ ಮತ್ತು ಕಾವಾಡಿಗಳ ಸಮಸ್ಯೆ ಹೇಳ ತೀರದಾಗಿದೆ.

ಪ್ರತಿವರ್ಷವೂ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಸಲುವಾಗಿ ಆನೆಗಳೊಂದಿಗೆ ಮೈಸೂರಿಗೆ ತೆರಳುವ ಮಾವುತರು ಮತ್ತು ಕಾವಾಡಿಗಳು ಒಂದು ತಿಂಗಳ ಕಾಲ ಭೂರಿ ಬೋಜನ ಸವಿಯುವ, ವೈದ್ಯಕೀಯ ಇನ್ನಿತರ ಸೌಲಭ್ಯಗಳನ್ನು ಪಡೆಯುವ ಮೂಲಕ ವೈಭವದ ಜೀವನ ನಡೆಸುತ್ತಾರೆ.
ಅದು ಮುಗಿದ ಬಳಿಕ ಮತ್ತೆ ಅದೇ ಮುರುಕಲು ಗುಡಿಸಲಿಗೆ ಹಿಂತಿರುಗಿ ನಿತ್ಯದ ಬದುಕನ್ನು ಸಾಗಿಸಬೇಕಾಗುತ್ತದೆ. ಈ ರೀತಿಯ ಬದುಕನ್ನು ಅವರು ಹಲವು ವರ್ಷಗಳಿಂದ ನಡೆಸುತ್ತಾ ಬಂದಿದ್ದು ತಮಗೊಂದು ಸೂರು ಕಲ್ಪಿಸಿಕೊಡಿ ಎಂದು ಒತ್ತಾಯಿಸುತ್ತಾ ಬಂದಿದ್ದರೂ ಅವರು ಮನವಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಾಗಲೀ, ಸರ್ಕಾರವಾಗಲೀ ಕಿವಿಗೆ ಹಾಕಿಕೊಂಡಂತೆ ಕಾಣುತ್ತಿಲ್ಲ.

ಹೀಗಾಗಿ ಗುಡಿಸಲ ಜೀವನ ಅವರಿಗೆ ಖಾಯಂ ಆಗಿಬಿಟ್ಟಿದೆ. ಇವತ್ತು ದುಬಾರೆ ಮತ್ತು ಆನೆಕಾಡಿನಲ್ಲಿ ವಾಸಿಸುವ ಮಾವುತರು ಮತ್ತು ಕಾವಾಡಿಗಳ ಬದುಕು ಮೂರಾಬಟ್ಟೆಯಾಗಿದೆ. ಆಧುನಿಕ ಬದುಕನ್ನು ಎಲ್ಲರೂ ಕಂಡು ಕೊಂಡಿರುವಾಗ ಇವರು ಮಾತ್ರ ಆದಿ ಮಾನವರಂತೆ ಸೌಲಭ್ಯ ವಂಚಿತರಾಗಿ ಬದುಕನ್ನು ಸವೆಸುತ್ತಿದ್ದಾರೆ.
ಈ ಬಾರಿಯ ಮಹಾಮಳೆಗೆ ಅವರು ಅನುಭವಿಸಿದ ಸಂಕಷ್ಟ ಅವರಿಗೆ ಮಾತ್ರ ಗೊತ್ತು. ಆದರೂ ಎಲ್ಲವನ್ನೂ ಎದುರಿಸಿ ಕಾಡಿನ ನಡುವೆ ಜೀವನ ಸಾಗಿಸುತ್ತಿದ್ದಾರೆ. ಇಷ್ಟಕ್ಕೂ ಇಲ್ಲಿ ವಾಸಿಸುವ ಇವರಿಗೆ ಸ್ವಂತದ್ದು ಎನ್ನುವ ಭೂಮಿ ಇಲ್ಲ. ಎಲ್ಲವೂ ಅರಣ್ಯ ಇಲಾಖೆಯ ಅಧೀನದಲ್ಲಿದೆ. ಹೀಗಾಗಿ ಸೌಲಭ್ಯ ನೀಡಲು ಕಷ್ಟವಾಗಿದೆ.

ಕೊನೆ ಪಕ್ಷ ಅರಣ್ಯ ಇಲಾಖೆಯಾದರೂ ವಸತಿ ಗೃಹಗಳನ್ನು ನಿರ್ಮಿಸಿ ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಆದರೆ ಆ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ. ಸದ್ಯದ ಮಟ್ಟಿಗೆ ದುಬಾರೆಯಲ್ಲಿ 87, ಆನೆಕಾಡಿನಲ್ಲಿ 21 ಗಿರಿಜನ ಕುಟುಂಬಗಳು ವಾಸಿಸುತ್ತಿದ್ದು, ಇವು ಮೂಲಭೂತ ಸೌಲಭ್ಯ ವಂಚಿತವಾಗಿವೆ.
ಇವರಿಗೆ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳೇ ಅರಮನೆಯಾಗಿವೆ. ಹಾಗೆ ನೋಡಿದರೆ ಆನೆ ಶಿಬಿರಗಳಲ್ಲಿ ಕೆಲಸ ಮಾಡುವ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ವಸತಿಗೃಹ, ನೀರು, ವಿದ್ಯುತ್ ಹೀಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಮಾಡಿಕೊಡಲಾಗಿದೆ.
ಆದರೆ ಆನೆಗಳನ್ನು ನೋಡಿಕೊಳ್ಳುವ ಮಾವುತ ಮತ್ತು ಕಾವಾಡಿಗಳಿಗೆ ಯಾವುದೇ ಸೌಲಭ್ಯ ನೀಡದೆ ಮುರುಕಲು ಗುಡಿಸಲಲ್ಲಿ ಇಟ್ಟಿರುವುದು ಮಾತ್ರ ಅಚ್ಚರಿ ಹುಟ್ಟಿಸುತ್ತಿದೆ. ಅವರಿಗೊಂದು ಒಳ್ಳೆಯ ಬದುಕನ್ನು ಕಟ್ಟಿಕೊಡಲು ನಮ್ಮ ಆಡಳಿತ ರೂಢರಿಗೆ ಏಕೆ ಸಾಧ್ಯವಾಗಿಲ್ಲ ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.












Click it and Unblock the Notifications