ಸಿದ್ದುಗೆ ನೀರಿಳಿಸಿದ್ದ ಮರಿಸ್ವಾಮಿಗೆ ಕುಮಾರಸ್ವಾಮಿ ಸನ್ಮಾನ
Recommended Video
ಮೈಸೂರು, ಏಪ್ರಿಲ್ 26 : ಬುಧವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಹಳೆಕೆಸರೆಯ ಬಳಿ ಚುನಾವಣೆ ಪ್ರಚಾರ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಗೆ ಮತ ಹಾಕುವಂತೆ ಕೇಳಿಕೊಂಡಾಗ, ಅವರಿಗೆ ನೀರಿಳಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಮರಿಸ್ವಾಮಿ ಅವರಿಗೆ ಗುರುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸನ್ಮಾನ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ರೋಡ್ ಶೋ ಬಳಿಕ, ಜೆಡಿಎಸ್ ಪಾಲಿಗೆ ಮರಿಸ್ವಾಮಿ ಅವರೇ ತಾರಾ ಪ್ರಚಾರಕರಾದಂತೆ ಕಂಡುಬರುತ್ತಿದೆ. ಗುರುವಾರ ನಗರದ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, ರೋಡ್ ಶೋ ವೇಳೆ ಸಿದ್ದರಾಮಯ್ಯ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದ ಮರಿಸ್ವಾಮಿ ಅವರಿಗೆ ಹಾರ ಹಾಕಿ, ಸನ್ಮಾನಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ರಸ್ತೆಯಲ್ಲೇ ಮಾನ ತೆಗೆದ ಮರಿಸ್ವಾಮಿ
ಸಿದ್ದರಾಮಯ್ಯ ತೆರೆದ ವಾಹನದಲ್ಲಿ ರೋಡ್ ಶೋ ಮಾಡುತ್ತ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ ಸಮೀಪದಲ್ಲೇ ಇದ್ದ ಒಂದು ಕಾಲದ ಬೆಂಬಲಿಗ ಹಾಗೂ ಸದ್ಯ ಗ್ರಾ.ಪಂ.ಸದಸ್ಯ ಆಗಿರುವ ಮರಿಸ್ವಾಮಿಯನ್ನು ಕೂಗಿ ಮಾತನಾಡಿಸಿದ್ದರು. ಕಾಂಗ್ರೆಸ್ ಗೆ ಮತ ಹಾಕುವಂತೆ ಸಲುಗೆಯಿಂದ ಮಾತನಾಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮರಿಸ್ವಾಮಿ, ನಾನು ಜೆಡಿಎಸ್ ನಲ್ಲಿಯೇ ಇದ್ದೀನಿ, ನೀನೇ ಕಾಂಗ್ರೆಸ್ ಗೆ ಹೋಗಿರೋದು ಎಂದು ತಿರುಗುತ್ತರ ಕೊಟ್ಟಿದ್ದರು. ಕೂಡಲೇ ಜತೆಯಲ್ಲಿದ್ದ ಜೆಡಿಎಸ್ ಬೆಂಬಲಿಗರೊಂದಿಗೆ ಜಿ.ಟಿ.ದೇವೇಗೌಡ ಗೆ ಜೈಕಾರ ಹಾಕಿದ್ದರು.
"ನಿಮಗೆ ನಾವು ಓಟ್ ಹಾಕಲ್ಲ, ಜೆಡಿಎಸ್ ಗೆ ಮಾತ್ರ ಓಟ್ ಹಾಕ್ತೀವಿ" ಎಂದು ಜೆಡಿಎಸ್ ಗೆ ಜೈಕಾರ ಕೂಗಿದ್ದರು. ಆಗ ಸಿದ್ದರಾಮಯ್ಯ, ಆಯ್ತು, ನಿನ್ನಿಷ್ಟ ಬಂದಂಗೆ ಮಾಡು, ಜೆಡಿಎಸ್- ಬಿಜೆಪಿ ಎರಡು ಒಂದೇ ನಾಣ್ಯದ ಎರಡು ಮುಖಗಳು ಎಂದು ಸಮಜಾಯಿಷಿ ನೀಡಲು ಮುಂದಾದರು. ಆಗಲೂ ಅದಕ್ಕೆ ಕಿವಿಗೊಡದ ಮರಿಸ್ವಾಮಿ, "ನಾವು ಜೆಡಿಎಸ್ ಗೆ ಓಟ್ ಹಾಕೋದು" ಎಂದು ಜೈಕಾರ ಕೂಗಿದ್ದರು.