ಮಳೆಗಾಗಿ ಚಾಮುಂಡಿ ಬೆಟ್ಟದ ಮಹಾನಂದಿಗೆ ಮಹಾಭಿಷೇಕ
ಮೈಸೂರು, ನವೆಂಬರ್. 14 : ಮಳೆಯಿಲ್ಲದೆ ರೈತರು ಸೇರಿದಂತೆ ಜನಸಾಮಾನ್ಯರು ಕಂಗಾಲಾಗಿದ್ದು, ಚಳಿಗಾಲದಲ್ಲಿಯೂ ಬಿಸಿಲು ನೆತ್ತಿ ಸುಡುತ್ತಿದೆ. ಇದು ತಪ್ಪ ಬೇಕಾದರೆ ಮಳೆಯಾಗಬೇಕೆಂದು ಮಳೆಗಾಗಿ ಹಾಗೂ ಕಾರ್ತಿಕ ಮಾಸದ ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮಹಾನಂದಿಗೆ ಮಜ್ಜನ ಕಾರ್ಯವನ್ನು ನೆರವೇರಿಸಲಾಯಿತು.
ಬೆಟ್ಟದ ಬಳಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಹಾಭಿಷೇಕ ಮಾಡಲಾಯಿತು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸ ಮಠದ ಚಿದಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಮಜ್ಜನ ಕಾರ್ಯಕ್ರಮ ನಡೆಯಿತು. ನಂದಿಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು.

ಅರಿಸಿನ, ಕುಂಕುಮ, ಹಾಲು ಜೇನುತುಪ್ಪ, ಗಂಧ, ಮೊಸರು, ಸಕ್ಕರೆ, ಪಂಚಾಮೃತ, ವಿವಿಧ ಪುಷ್ಪ, ಬಿಲ್ವಪತ್ರೆ ಸೇರಿದಂತೆ 36 ವಿವಿಧ ಸುಗಂಧ ದ್ರವ್ಯಗಳ ಮಜ್ಜನಗೈಯಲಾಯಿತು.
ಈ ಸಂದರ್ಭದಲ್ಲಿ ನಂದಿ ನಾನಾ ಬಣ್ಣಗಳಿಂದ ಮಿಂದು ಭಕ್ತರ ಕಣ್ಮಣ ಸೆಳೆಯಿತು. ಮಹಾಭಿಷೇಕವನ್ನು ಸಾವಿರಾರು ಮಂದಿ ಭಕ್ತರು ಕಣ್ತುಂಬಿಕೊಂಡು ಧನ್ಯರಾದರು.
ಕಳೆದ 12 ವರ್ಷಗಳಿಂದ ಚಾಮುಂಡಿ ಬೆಟ್ಟದಲ್ಲಿ ವಾಸಿಸುವ ಭಕ್ತರು, ಬೆಟ್ಟ ಹತ್ತುವ ವಾಯುವಿಹಾರಿಗಳು ಸೇರಿದಂತೆ ಹಲವು ಜನರು ಕಾರ್ತಿಕ ಮಾಸದ ಪ್ರಯುಕ್ತ ಬೆಟ್ಟದ ನಂದಿಗೆ ಮಹಾಮಜ್ಜನ ಮಾಡುವ ಕಾರ್ಯವನ್ನು ಕೈಗೊಳ್ಳುತ್ತಾ ಬಂದಿದ್ದು, ಈ ಬಾರಿ ಮಹಾಭಿಷೇಕದ ಸಂದರ್ಭ ಮಳೆಯನ್ನು ಕರುಣಿಸುವಂತೆಯೂ ಪ್ರಾರ್ಥಿಸಿರುವುದು ವಿಶೇಷವಾಗಿದೆ.












Click it and Unblock the Notifications