ಮೈಸೂರಿನಲ್ಲಿ ಶಿವನಾಮ ಸ್ಮರಣೆ :ತ್ರಿನೇಶ್ವರ ಸ್ವಾಮಿಗೆ ಚಿನ್ನದ ಕೊಳಗ ಧಾರಣೆ
ಮೈಸೂರು, ಮಾರ್ಚ್ 4:ಶಿವನಾಮ ಸ್ಮರಣೆಯೊಂದಿಗೆ ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಆಚರಣೆ ಕಳೆಗಟ್ಟಿದೆ. ಇತ್ತ ಸಾಂಸ್ಕೃತಿಕ ನಗರಿಯಲ್ಲಿ ಶಿವರಾತ್ರಿ ಸಂಭ್ರಮ ಸಡಗರ ಮನೆ ಮಾಡಿದೆ. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ಸ್ವಾಮಿ ದರ್ಶನ ಪಡೆಯುತ್ತಿದ್ದಾರೆ.
ಇಂದು ಮುಂಜಾನೆ 5 ಗಂಟೆಯಿಂದಲೇ ತ್ರಿನೇಶ್ವರ ಸ್ವಾಮಿ ದೇವಾಲಯದ ಶಿವನ ಮೂರ್ತಿಗೆ 11 ಕೆಜಿ ತೂಕದ ಚಿನ್ನದ ಮುಖವಾಡ ಧಾರಣೆ ಮಾಡಿ, ವಿವಿಧ ಪೂಜಾ ಕೈಂಕರ್ಯವನ್ನು ದೇವಸ್ಥಾನದ ಆಡಳಿತ ಮಂಡಳಿ ನೆರವೇರಿಸುತ್ತಿದೆ.
ವರ್ಷಕೊಮ್ಮೆ ಮುಜರಾಯಿ ಇಲಾಖೆಯವರು ತ್ರಿನೇಶ್ವರ ದೇವಸ್ಥಾನಕ್ಕೆ ಚಿನ್ನದ ಮುಖವಾಡವನ್ನು ನೀಡುತ್ತಾರೆ. ಭಕ್ತರಿಗೆ ಸ್ವರ್ಣಲೇಪಿತ ಶಿವನನ್ನು ಕಣ್ತುಂಬಿಕೊಳ್ಳಲು ಇಂದು ರಾತ್ರಿ 12ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಜಯಚಾಮರಾಜೇಂದ್ರ ಒಡೆಯರ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದ ಸಂದರ್ಭದಲ್ಲಿ ತ್ರೀನೇತ್ರ ಸ್ವಾಮಿಗೆ 11 ಕೆಜಿ ತೂಕದ ಚಿನ್ನದ ಕೊಳಗ ಮುಖವಾಡವನ್ನು ಹರಕೆ ರೂಪದಲ್ಲಿ ನೀಡಿದ್ದರಂತೆ. ಈ ಮುಖವಾಡ ಈಗ ಜಿಲ್ಲಾಡಳಿತದ ವಶದಲ್ಲಿದ್ದು, ಪ್ರತಿ ಶಿವರಾತ್ರಿ ದಿನದಂದು ಪೂಜೆಗೆಂದು ನೀಡಲಾಗುತ್ತದೆ. ಹೀಗಾಗಿ ಚಿನ್ನದ ಮುಖವಾಡ ಧರಿಸಿರುವ ಶಿವನನ್ನು ನೋಡಲು ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಓಂ ನಮಃ ಶಿವಾಯ ಎಂದು ಶಿವನನ್ನು ನೆನೆಯುತ್ತಾ ದೇವರ ದರ್ಶನ ಪಡೆದರು.
ಆರೋಗ್ಯಾಧಿಕಾರಿಗಳಿಂದ ಪ್ರಸಾದ ಪರೀಕ್ಷೆ
ಶಿವರಾತ್ರಿ ಹಬ್ಬಕ್ಕೆ ಸುಳ್ವಾಡಿ ಪ್ರಸಾದ ದುರಂತದ ಬಿಸಿ ತಟ್ಟಿದ್ದು, ಪ್ರಮುಖ ದೇವಾಲಯಗಳಲ್ಲಿ ನೀಡುವ ಪ್ರಸಾದದ ಮೇಲೆ ಕಣ್ಣಿಟ್ಟಿರುವ ಆರೋಗ್ಯಾಧಿಕಾರಿಗಳು ದೇವಾಲಯಗಳಲ್ಲಿ ಪ್ರಸಾದ ಪರಿಶೀಲನೆ ನಡೆಸುತ್ತಿದ್ದಾರೆ.

ಮೈಸೂರಿನ ವಿವಿಧ ದೇವಾಲಯಗಳಲ್ಲಿ ಪ್ರಸಾದದ ಆಹಾರ ಪದಾರ್ಥಗಳು ಹಾಗೂ ತಯಾರಿಕಾ ಸ್ಥಳಗಳಿಗೆ ತೆರಳಿ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಸುಳ್ವಾಡಿ ಪ್ರಕರಣ ಮತ್ತೊಮ್ಮೆ ಮರುಕಳಿಸದಂತೆ ಎಚ್ಚರಿಕೆ ವಹಿಸಿದ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ಮೈಸೂರು ಅರಮನೆಯ ತ್ರಿನೇಶ್ವರ ಸ್ವಾಮಿ ದೇಗುಲದಲ್ಲಿ ಪಾಲಿಕೆ ಆರೋಗ್ಯ ಅಧಿಕಾರಿ ಡಾ. ನಾಗರಾಜ್ ಹಾಗೂ ಪ್ರಭಾಕರ್ ತಂಡ ಸ್ವತಃ ಪ್ರಸಾದ ಸೇವಿಸಿ ಪರಿಶೀಲನೆ ನಡೆಸಿದರು.












Click it and Unblock the Notifications