ಮೈಸೂರು; ಶಿವರಾತ್ರಿಗಾಗಿ 21 ಅಡಿ ತೆಂಗಿನಕಾಯಿ ಶಿವಲಿಂಗ
ಮೈಸೂರು, ಮಾರ್ಚ್ 07: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾಶಿವರಾತ್ರಿ ಸಂಭ್ರಮ ಆರಂಭವಾಗಿದೆ. ಶಿವನ ಭಕ್ತರು ದರ್ಶನ ಪಡೆಯಲು ಸಾಂಸ್ಕೃತಿಕ ನಗರಿಯಲ್ಲಿ 21 ಅಡಿ ಎತ್ತರದ ʻತೆಂಗಿನಕಾಯಿ ಶಿವಲಿಂಗʼ ನಿರ್ಮಾಣ ಮಾಡಲಾಗಿದೆ.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಮೈಸೂರಿನಲ್ಲಿ ಪ್ರಥಮ ಬಾರಿಗೆ ಶಿವರಾತ್ರಿ ಸಪ್ತಾಹ ಮಹೋತ್ಸವ ಆಯೋಜನೆ ಮಾಡಲಾಗಿದೆ. ಲಲಿತ ಮಹಲ್ ಮೈದಾನದಲ್ಲಿ ಭಾನುವಾರದಿಂದ ಜನರು ಮಾರ್ಚ್ 13ರ ತನಕ ತೆಂಗಿನಕಾಯಿ ಶಿವಲಿಂಗ ದರ್ಶನ ಪಡೆಯಬಹುದು.
ತೆಂಗಿನಕಾಯಿಗಳನ್ನು ಬಳಸಿಕೊಂಡು 21 ಅಡಿ ಎತ್ತರದ ಶಿವಲಿಂಗ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸುಮಾರು 8 ಸಾವಿರ ತೆಂಗಿನಕಾಯಿ ಬಳಸಲಾಗಿದೆ. 15 ಮಂದಿ ಕೆಲಸಗಾರರು ಈ ಶಿವಲಿಂಗವನ್ನು ನಿರ್ಮಾಣ ಮಾಡಿದ್ದಾರೆ.

ಒಂದು ವಾರದ ಅವಧಿಯಲ್ಲಿ ತೆಂಗಿನಕಾಯಿ ಶಿವಲಿಂಗವನ್ನು ನಿರ್ಮಿಸಲಾಗಿದೆ. ಮಹಾಶಿವರಾತ್ರಿ ಸಪ್ತಾಹಕ್ಕೆ ಭಾನುವಾರ ಚಾಲನೆ ಸಿಕ್ಕಿದೆ. ಇಂದಿನಿಂದಲೇ ಜನರು ಶಿವಲಿಂಗದ ದರ್ಶನವನ್ನು ಪಡೆಯಬಹುದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಸನ ಜಿಲ್ಲೆಯ ಮುಖ್ಯ ಸಂಚಾಲಕಿ ಬಿ. ಕೆ. ಮೀನಾ, "ಮಹಾಶಿವರಾತ್ರಿ ಸಪ್ತಾಹ ಸಮಾರಂಭಕ್ಕೆ ಇಂದು ಚಾಲನೆ ದೊರೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬಹುದು" ಎಂದು ಹೇಳಿದರು.
ಮಾರ್ಚ್ 11ರ ಗುರುವಾರ ಈ ಬಾರಿ ಮಹಾಶಿವರಾತ್ರಿ ಹಬ್ಬವಿದೆ. ಅಂದು ಶಿವನ ಧ್ಯಾನ ಮಾಡಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.












Click it and Unblock the Notifications