ಮೈಸೂರು: ಅಂತೂ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ ಸ್ಥಳ ನಿಗದಿ
ಮೈಸೂರು, ಏಪ್ರಿಲ್ 9: ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಜಯಲಕ್ಷ್ಮಿ ವಿಲಾಸದಲ್ಲೇ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಆರಂಭಿಸಲಾಗುವುದು ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಶನಿವಾರ ಜಯಲಕ್ಷ್ಮಿ ವಿಲಾಸ ಅರಮನೆಯಲ್ಲಿ ಸ್ಥಳ ಪರಿಶೀಲಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, 2105ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿತು. ಆದರೆ 7 ವರ್ಷವಾದರೂ ಸ್ವಂತ ಕಟ್ಟಡವಾಗಲಿ, ಸೌಲಭ್ಯಗಳಾಗಲಿ ಇಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ, ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿದ್ದಾಗ ಇದನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವ ಉದ್ದೇಶ ಇತ್ತು. ಆದರೆ, ಮೈಸೂರಿನಲ್ಲೇ ಇದನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿತ್ತು ಎಂದರು.
ಪ್ರಸ್ತುತ ನಾನು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅವರು ಕೇಂದ್ರ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದೇವೆ. ಸದ್ಯ ಜಯಲಕ್ಷ್ಮಿ ವಿಲಾಸದ ಜಾಗ ಚೆನ್ನಾಗಿದೆ. ಏ.13ರಂದು ಸಚಿವ ಸುನೀಲ್ ಕುಮಾರ್ ಅವರು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕನ್ನಡದ ಭಾಷೆ ಬೆಳವಣಿಗೆಗೆ ಕೇಂದ್ರ ಸರ್ಕಾರ ಅನುದಾನ ಕೊಡುತ್ತದೆ. ಆದರೆ, ಕಟ್ಟಡಕ್ಕೆ ರಾಜ್ಯ ಸರ್ಕಾರ ಸಹಯೋಗ ಕೊಡಬೇಕು. ಹಾಗಾಗಿ ಶಿಥಿಲಾವಸ್ಥೆಯಲ್ಲಿರುವ ಜಯಲಕ್ಷ್ಮಿ ವಿಲಾಸವನ್ನು ಉಳಿಸುವ ಜೊತೆಗೆ ಇಲ್ಲೇ ಶಾಸ್ತ್ರೀಯ ಕೇಂದ್ರವನ್ನು ತೆರೆಯಲಾಗುವುದು. ಇದಕ್ಕಾಗಿ 20ರಿಂದ 25 ಕೋಟಿ ರೂಪಾಯಿ ವೆಚ್ಚ ತಗುಲುತ್ತದೆ ಎಂದರು.
ಶಾಸಕ ಎಲ್.ನಾಗೇಂದ್ರ, ಸಿಎಐಎಲ್ ನಿರ್ದೇಶಕ ಶೈಲೇಂದ್ರ ಮೋಹನ್, ಶಾಸ್ತ್ರೀಯ ಅಧ್ಯಯನ ಕೇಂದ್ರದ ಶಿವರಾಮ್ ಶೆಟ್ಟಿ, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್. ಶಿವಪ್ಪ, ಮೈಸೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಚೇತನ್ ಸೇರಿದಂತೆ ಇತರರು ಹಾಜರಿದ್ದರು.
ನಾನು ನಾಗೇಂದ್ರ ಅಣ್ಣ-ತಮ್ಮ ಇದ್ದಂತೆ: ಪ್ರತಾಪ್ ಸಿಂಹ
ಮೈಸೂರು ನಗರದ ಗ್ಯಾಸ್ ಪೈಪ್ಲೈನ್ ವಿಚಾರದಲ್ಲಿ ಸ್ವಪಕ್ಷೀಯರು ಎಂದು ನೋಡದೆ ಕಚ್ಚಾಡಿಕೊಂಡಿದ್ದ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್. ನಾಗೇಂದ್ರ ಇದೀಗ ಭಾಯಿ ಭಾಯಿ ಎನ್ನುತ್ತಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮನೆಯೊಳಗೆ ಅಣ್ಣತಮ್ಮಂದಿರು ಜಗಳ ಆಡೇ ಆಡುತ್ತಾರೆ. ಹಾಗಂತ ಇದು ವೈಯಕ್ತಿಕ ದ್ವೇಷ ಅಲ್ಲ. ನಾವು ಒಂದೇ ಪಕ್ಷದವರು. ಎಷ್ಟೇ ಅಭಿಪ್ರಾಯ ಭೇದವಿದ್ದರೂ, ಭೋಲೋ ಭಾರತ್ ಮಾತಾಕೀ ಎಂದು ಘೋಷಣೆ ಕೂಗಿದರೆ ನಾವು ಜೈ ಎನ್ನುತ್ತೇವೆ. ಸಣ್ಣಪುಟ್ಟ ಗೊಂದಲಗಳನ್ನು ನಾವೇ ಕೂತು ಬಗೆಹರಿಸಿಕೊಂಡಿದ್ದೇವೆ ಎಂದರು.
ನಗರದ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬರುತ್ತಿದೆ, ಡಾಂಬರೀಕರಣ ಮಾಡಿ ರಸ್ತೆ ಅಗೆದರೆ ಹಾಳಾಗುತ್ತದೆ. 2023ರಲ್ಲಿ ಚುನಾವಣೆ ಎಂಬುದು ಶಾಸಕರ ಕಾಳಜಿ ಆಗಿತ್ತು. ಅದಕ್ಕಾಗಿ ನಾವೀಗ ಗ್ಯಾಸ್ ಪೈಪ್ಲೈನ್ ಕಾಮಗಾರಿಯನ್ನು ಸ್ವಲ್ಪ ದಿನ ಮುಂದಕ್ಕೆ ಹಾಕಿದ್ದೇವೆ. ಮೈಸೂರಿನ ಚಾಮರಾಜ ಕ್ಷೇತ್ರದಲ್ಲೇ ಗ್ಯಾಸ್ ಪೈಪ್ಲೈನ್ ಅಳವಡಿಸಲಾಗುತ್ತದೆ. ಮೋದಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.












Click it and Unblock the Notifications