ಮೈಸೂರು ಜಿಲ್ಲೆಯಲ್ಲಿ ಕಾಡಿಗೆ ಬಿಟ್ಟರೂ ನಾಡಿಗೆ ಬರುತ್ತಿರುವ ಚಿರತೆಗಳು
ಮೈಸೂರು, ನವೆಂಬರ್. 05:ಎರಡೇ ವರ್ಷದಲ್ಲಿ 22 ಚಿರತೆಗಳನ್ನು ಹಿಡಿದಿರುವ ಅರಣ್ಯ ಇಲಾಖೆ, ಅವುಗಳನ್ನು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದರೂ ಮತ್ತೆ ಕಾಡು ಬಿಟ್ಟು ನಾಡಿನತ್ತ ಹೆಜ್ಜೆ ಹಾಕುತ್ತಿರುವ ಚಿರತೆಗಳ ಹಾವಳಿ ಕಂಡು ಬೆಚ್ಚಿಬಿದ್ದಿದೆ.
ಮೈಸೂರು ವಲಯ ವ್ಯಾಪ್ತಿಗೆ ಬರುವ ಮೈಸೂರು ತಾಲೂಕು, ನಂಜನಗೂಡು, ಎಚ್.ಡಿ.ಕೋಟೆ, ತಿ.ನರಸೀಪುರ ತಾಲೂಕುಗಳಲ್ಲಿ ಚಿರತೆಗಳು ಸೆರೆಯಾಗಿವೆ. ಒಟ್ಟಾರೆ ಎರಡು ವರ್ಷಗಳಲ್ಲಿ 22 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.
ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ವರಕೋಡು ಗ್ರಾಮಗಳ ಸುತ್ತಮುತ್ತ ಅತಿ ಹೆಚ್ಚು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಕಾಡಿನಿಂದ ಆಗಾಗ ಬರುವ ಚಿರತೆಗಳು ಸಾಕು ಪ್ರಾಣಿಗಳನ್ನು ತಿನ್ನುತ್ತಿವೆ. ಇದರಿಂದಾಗಿಯೇ ಮತ್ತೆ ಮತ್ತೆ ಇತ್ತ ಬರಲು ಆರಂಭಿಸುತ್ತಿವೆ.

ಈಗಾಗಲೇ ಸೆರೆ ಹಿಡಿದ ಬಹುತೇಕ ಚಿರತೆಗಳನ್ನು ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳಿಗೆ ಬಿಡಲಾಗಿದೆ. ವಿಪರ್ಯಾಸವೆಂದರೆ, ಅವುಗಳು ಕಾಡಿನಿಂದ ಕಾಡಂಚಿನ ಪ್ರದೇಶಗಳಿಗೆ ಲಗ್ಗೆ ಇಡಲು ಶುರು ಮಾಡಿವೆ.
ಚಿರತೆ ಹಾವಳಿಯಿಂದ ಸಾರ್ವಜನಿಕರ ರಕ್ಷಣೆ ಮಾಡಲು ಈಗಾಗಲೇ ಕ್ಷಿಪ್ರ ಕಾರ್ಯ ನಿರ್ವಹಣೆ ತಂಡ'ವನ್ನು ರಚನೆ ಮಾಡಿದ್ದು, ಸೆರೆ ಹಿಡಿಯಲು ಬೇಕಾದ ಬಲೆ, ಇತರೆ ಸಾಮಗ್ರಿಗಳನ್ನು ತಂಡದವರಿಗೆ ಒದಗಿಸಿದೆ. ಅಲ್ಲದೇ, ಚಿರತೆ ಕಂಡ ಕೂಡಲೇ ಇಲಾಖೆ ಗಮನಕ್ಕೆ ತರುವುದಕ್ಕಾಗಿ ಅರಣ್ಯ ಇಲಾಖೆ ವೆಬ್ ಸೈಟ್ ನಲ್ಲಿ ನಂಬರ್ ಹಾಕಲಾಗಿದೆ. ಸಾರ್ವಜನಿಕರು ತಕ್ಷಣ ಕರೆ ಮಾಡುವಂತೆಯೂ ತಿಳಿಸಲಾಗಿದೆ.

ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆ: ಅರಣ್ಯ ಇಲಾಖೆ ವತಿಯಿಂದ ಕಾಡು ಪ್ರಾಣಿಗಳ ದಾಳಿಗೆ ಒಳಗಾದವರಿಗೆ 2017ರಲ್ಲಿ 2.80 ಲಕ್ಷ ರೂ. ಹಾಗೂ 2018ರಲ್ಲಿ 1.10 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮೈಸೂರು ತಾಲೂಕಿನ 10 ಕಡೆ ಬೋನುಗಳನ್ನು ಇಡಲಾಗಿದೆ. 22 ಮಂದಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications