ಬೋನಿಟ್ಟರೂ ಬೀಳದ ಚಾಲಾಕಿ ಚಿರತೆ, ಗ್ರಾಮಸ್ಥರ ಚಿಂತೆ
ಮೈಸೂರು, ಮೇ 05 : ಬೋನಿಟ್ಟರೂ ಚಾಲಾಕಿತನದಿಂದ ಬೋನಿಗೆ ಬೀಳದೆ ತಪ್ಪಿಸಿಕೊಳ್ಳುತ್ತಾ ಅಡ್ಡಾಡುತ್ತಿರುವ ಚಿರತೆಯಿಂದ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮ ವ್ಯಾಪ್ತಿಯ ಜನರು ಭಯಭೀತರಾಗಿದ್ದಾರೆ.
ಬಿರು ಬೇಸಿಗೆಯಿಂದಾಗಿ ಕಾಡಿನಲ್ಲಿ ಕೂಡ ನೀರು ಬತ್ತಿ ಹೋಗಿದೆ. ಬಿಸಿಲಿಗೆ ಕಾಡು ಪ್ರಾಣಿಗಳಿಗೂ ಅರಣ್ಯದಲ್ಲಿ ಬದುಕುವುದು ತ್ರಾಸ ಎನಿಸುತ್ತಿದೆ. ಹೀಗಾಗಿ ಚಿರತೆ ಸೇರಿದಂತೆ ಇತರೆ ಪ್ರಾಣಿಗಳು ನೀರು ಮತ್ತು ಆಹಾರ ಅರಸಿಕೊಂಡು ನಾಡಿನತ್ತ ಬರುತ್ತಿವೆ.
ಇತರೆ ಪ್ರಾಣಿಗಳು ಬಂದರೆ ಬೆಳೆಯನ್ನು ನಾಶ ಮಾಡುತ್ತವೆ ಎಂಬ ಭಯವಷ್ಟೆ. ಆದರೆ ಚಿರತೆಯಂತಹ ಪ್ರಾಣಿಗಳು ಅಡ್ಡಾಡಿದರೆ ಗ್ರಾಮದಲ್ಲಿ ವಾಸಿಸುವ ಗ್ರಾಮಸ್ಥರ ಪರಿಸ್ಥಿತಿ ಹೇಗಾಗಬಹುದು? [ಮೈಸೂರು : ಬಿಸಿಲ ತಾಪಕ್ಕೆ ಚಿರತೆ ಬಲಿ]

ಇದೀಗ ನಂಜನಗೂಡು ತಾಲೂಕು ಕೋಣನೂರು ಗ್ರಾಮದ ಹೊರವಲಯದ ದೊಡ್ಡಬೆಟ್ಟದ ವ್ಯಾಪ್ತಿಯಲ್ಲಿ ಚಿರತೆಯೊಂದು ಓಡಾಡುತ್ತಾ ಭಯಹುಟ್ಟಿಸಿದೆ. ತಡರಾತ್ರಿ ಕಾಣಸಿಗುವ ಚಿರತೆ ದನದ ಕೊಟ್ಟಿಗೆ, ನಾಯಿಗಳ ಬೇಟೆಗೆ ಹೊಂಚು ಹಾಕುತ್ತಿದೆ.
ಈ ವ್ಯಾಪ್ತಿಯಲ್ಲೇ ತೋಟದ ಜಮೀನಿನಲ್ಲೇ ವಾಸ ಮಾಡುವ ರೈತ ನಿಂಗರಾಜು ಚಿರತೆ ನೋಡಿ ಆತಂಕಗೊಂಡಿದ್ದಾರೆ. ಈ ಚಿರತೆ ಸುಮಾರು ಮೂರು ತಿಂಗಳಿನಿಂದ ಇಲ್ಲಿ ಓಡಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹೆಜ್ಜೆಗಳು ಕಾಣಸಿಗುತ್ತಿವೆ. ಆದರೆ ಅರಣ್ಯ ಇಲಾಖೆ ಬೋನು ಇಟ್ಟರೂ ಅದಕ್ಕೆ ಬೀಳದೆ ತಪ್ಪಿಸಿಕೊಳ್ಳುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. [ಕಾಡು ಬಿಟ್ಟು ನಾಡಿಗೆ ಚಿರತೆ ನುಗ್ಗಲು ಕಾರಣವೇನು?]

ಈಗಾಗಲೇ ಎರಡು ಬಾರಿ ಬೋನನ್ನು ಇಟ್ಟಿದ್ದರೂ ಅದು ತಪ್ಪಿಸಿಕೊಂಡಿದೆ. ಬಹುಶಃ ಕಳೆದ ಎರಡು ವರ್ಷಗಳ ಹಿಂದೆ ಬೋನಿಗೆ ಬಿದ್ದು, ಇಬ್ಬರನ್ನು ಗಾಯಗೊಳಿಸಿ ತಪ್ಪಿಸಿಕೊಂಡ ಚಿರತೆ ಇದಾಗಿರಬಹುದೆಂದು ರೈತ ನಿಂಗರಾಜು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿದಿನ ನಮ್ಮ ಜಮೀನಿನಲ್ಲಿ ಹೆಜ್ಜೆ ಗುರುತುಗಳು ಕಾಣಿಸಿಕೊಳ್ಳುತ್ತಿದ್ದು, ಜಮೀನಿನಲ್ಲಿ ಕೆಲಸ ಮಾಡಲು ತೊಂದರೆಯಾಗಿದೆ ಕೂಡಲೇ ಅರಣ್ಯ ಇಲಾಖೆ ರಕ್ಷಣೆ ನೀಡಬೇಕೆಂದು ಅವರು ಮತ್ತಿತರ ಗ್ರಾಮಸ್ಥರು ಮನವಿ ಮಾಡಿದ್ದಾರೆ. [ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆ ಸೆರೆ ಸಿಕ್ಕಿದ್ದು ಹೇಗೆ?]












Click it and Unblock the Notifications