ಮೈಸೂರು ನಗರಕ್ಕೆ ಲಗ್ಗೆಯಿಟ್ಟ ಚಿರತೆ, ದಂಗಾದ ಜನತೆ
ಮೈಸೂರಿನಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಗೌರಿಶಂಕರ ನಗರ ಸೇರಿದಂತೆ ಹಲವೆಡೆ ಕಾಣಿಸಿಕೊಂಡಿರುವ ಚಿರತೆ, ರಾತ್ರಿವೇಳೆಯಲ್ಲಿ ಜನ ಪ್ರಾಣವನ್ನು ಕೈಯ್ಯಲ್ಲಿಡಿದು ಓಡಾಡುವಂತೆ ಮಾಡಿದೆ.
ಮೈಸೂರು, ನವೆಂಬರ್ 14: ಮೈಸೂರಿನಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಕೇವಲ ಕಾಡಂಚಿನ ಜನರನ್ನು ಕಾಡುತ್ತಿದ್ದ ಚಿರತೆ ಇದೀಗ ನಗರದ ಜನತೆಯನ್ನು ನಿದ್ದೆಗೆಡಿಸಿದೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಗೌರಿಶಂಕರ ನಗರ ಸೇರಿದಂತೆ ಹಲವೆಡೆ ಕಾಣಿಸಿಕೊಂಡಿರುವ ಚಿರತೆ, ರಾತ್ರಿವೇಳೆಯಲ್ಲಿ ಜನ ಪ್ರಾಣವನ್ನು ಕೈಯ್ಯಲ್ಲಿಡಿದು ಓಡಾಡುವಂತೆ ಮಾಡಿದೆ.

ಈ ವ್ಯಾಪ್ತಿಯಲ್ಲಿ ಸಿಕ್ಕಿರುವ ಹಸು ಹಾಗೂ ಹಂದಿಯ ಕೊಳೆತ ಮೃತದೇಹಗಳು ಜನರ ಭಯಕ್ಕೆ ಕಾರಣವಾಗಿದೆ. ಚಾಮುಂಡಿಬೆಟ್ಟದ ಪೊದೆಯಲ್ಲಿ ಆಶ್ರಯ ಪಡೆದಿರುವ ಚಿರತೆ ಬೀದಿ ನಾಯಿಗಳು, ಬೀಡಾಡಿ ದನಗಳ ಮೇಲೆ ದಾಳಿ ಮಾಡಿ ತಿಂದು ಹಾಕುತ್ತಿದೆ.[ಹರಿದ ಬಲೆಯಲ್ಲಿ ಚಿರತೆ ಹಿಡಿದ ಅರಣ್ಯ ಇಲಾಖೆ ಶೂರರು!]
ಇದು ಹಲವು ಸಮಯಗಳಿಂದ ನಡೆಯುತ್ತಿದ್ದರೂ ಯಾರ ಕಣ್ಣಿಗೆ ಬಿದ್ದಿರಲಿಲ್ಲ. ದನ, ಕುರಿ, ನಾಯಿ, ಮೇಕೆಗಳು ಮಾಯವಾಗುತ್ತಿದ್ದವಾದರೂ ಅವುಗಳನ್ನು ಚಿರತೆಯೇ ಬೇಟೆಯಾಡಿ ತಿನ್ನುತ್ತಿದೆ ಎಂಬ ಸಂಶಯ ಜನಕ್ಕೆ ಬಂದಿರಲಿಲ್ಲ. ಆದರೆ ಚಿರತೆ ಗೌರಿಶಂಕರನಗರದ ಬಳಿಯ ಬಂಡೆ ಕಲ್ಲಿನ ಹಿಂದೆ ಕಾಣಿಸಿಕೊಂಡಿತ್ತು. ಇದನ್ನು ನೋಡಿದ ಅಲ್ಲಿನ ಜನ ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಬಡಾವಣೆಯ ಮಂದಿಗೆ ಎಚ್ಚರವಾಗಿರುವಂತೆ ಸೂಚನೆ ನೀಡಿದ್ದರು.

ಅದಾದ ಬಳಿಕ ಅದನ್ನು ಹುಡುಕಲು ಹೋದ ಜನಕ್ಕೆ ಮರದ ಮೇಲೆ ಕುಳಿತಿರುವುದು ಕಂಡು ಬಂದಿತ್ತು. ಇದು ಇನ್ನಷ್ಟು ಭಯಪಡುವಂತೆ ಮಾಡಿತ್ತು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಡ್ಡಾಡಿದವರಿಗೆ ಹಸು ಮತ್ತು ಹಂದಿಯ ಮೃತದೇಹ ದೊರೆತಿದ್ದು ಇದು ಚಿರತೆಯದ್ದೇ ಕೆಲಸ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]

ಅರಣ್ಯ ಇಲಾಖೆ ಮೂಲಗಳ ಪ್ರಕಾರ ಚಾಮುಂಡಿಬೆಟ್ಟದ ಕಾಡಿನಲ್ಲಿ ನಾಲ್ಕು ಚಿರತೆಗಳಿದ್ದು, ಅವು ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಎನ್ನುತ್ತಾರೆ. ಕಾಡಿನಿಂದ ಹೊರಗೆ ಬರುತ್ತಿರುವ ಚಿರತೆಗಳು ನಾಯಿಯನ್ನು ಹಿಡಿಯಲು ಮುಂದಾಗುತ್ತಿವೆ. ಈ ಸಂದರ್ಭ ಮನುಷ್ಯ ಮೇಲೆ ದಾಳಿ ಮಾಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಚಿರತೆಯನ್ನು ಸೆರೆಹಿಡಿದು ದೂರದ ಅರಣ್ಯಕ್ಕೆ ಬಿಡಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications