ಜಾನುವಾರು ಭಕ್ಷಿಸಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆ
ಮೈಸೂರು, ಜನವರಿ 16: ಒಂದು ತಿಂಗಳಿನಿಂದ ಗ್ರಾಮದ ಜಮೀನುಗಳಿಗೆ ನುಗ್ಗಿ ಜಾನುವಾರುಗಳನ್ನು ಭಕ್ಷಿಸಿ ಜನರಲ್ಲಿ ಭಯ ಭೀತಿ ಹುಟ್ಟಿಸಿದ್ದ ಚಿರತೆಯು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಲಸೂರು ಗ್ರಾಮದಲ್ಲಿ ದಿನನಿತ್ಯ ಹಾವಳಿ ಮಾಡುತಿದ್ದ ಚಿರತೆ, ಜಾನುವಾರುಗಳನ್ನು ಭಕ್ಷಿಸುತಿತ್ತು. ಅಲ್ಲದೆ ನಾಯಿಗಳನ್ನೂ ಕೂಡ ತಿಂದಿತ್ತು. ಚಿತರೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದರು.
ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಎರಡು-ಮೂರು ಸ್ಥಳಗಳಲ್ಲಿ ಬೋನನ್ನು ಇಟ್ಟಿದ್ದರು. ಆದರೆ ಜಾಣ ಚಿರತೆ ತಪ್ಪಿಸಿಕೊಳ್ಳುತ್ತಿತ್ತು. ಮೊನ್ನೆ ಹಲಸೂರಿನ ಶಂಭುಲಿಂಗ ನಾಯ್ಕ್ ಎಂಬುವವರ ಹೊಲದಲ್ಲಿ ಬೋನಿಗೆ ನಾಯಿಯನ್ನು ಕಟ್ಟಿ ಇಟ್ಟಿದ್ದರು.

ನಾಯಿಯನ್ನು ತಿನ್ನಲು ಬಂದ ಚಿರತೆ ನಿರಾಯಾಸವಾಗಿ ಸೆರೆಯಾಗಿದೆ. ಚಿರತೆಯನ್ನು ಬಂಡೀಪುರ ಅರಣ್ಯಕ್ಕೆ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸರಗೂರು ತಾಲ್ಲೂಕಿನ ವ್ಯಾಪ್ತಿಯಲ್ಲಿಯೇ ಒಂದು ತಿಂಗಳಲ್ಲಿ ಒಟ್ಟು ನಾಲ್ಕು ಚಿರತೆಗಳು ಸೆರೆಯಾಗಿವೆ.












Click it and Unblock the Notifications