ತಿ. ನರಸೀಪುರದಲ್ಲಿ ಚಿರತೆ ದಾಳಿ, ಅರಣ್ಯ ಇಲಾಖೆ ಸಾರ್ವಜನಿಕ ಪ್ರಕಟಣೆ
ಮೈಸೂರು, ಜನವರಿ 23; ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 4 ತಿಂಗಳಿನಲ್ಲಿ ಮೂವರು ಬಲಿಯಾಗಿದ್ದಾರೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶನಿವಾರ ಸಂಜೆ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಚಿರತೆ ಬಾಲಕನನ್ನು ಎಳೆದೊಯ್ದು ಕೊಂದು ಹಾಕಿದೆ. ಗ್ರಾಮದ ನಿವಾಸಿ ದಶಕಂಠ ಅವರ ಪುತ್ರ 11 ವರ್ಷದ ಜಯಂತ್ ಮೃತಪಟ್ಟ ಬಾಲಕ.
Breaking; ತಿ. ನರಸೀಪುರ, ಚಿರತೆ ದಾಳಿಗೆ 11 ವರ್ಷದ ಬಾಲಕ ಬಲಿ
ಮುಖ್ಯ ರಸ್ತೆಯಲ್ಲಿ ಜಯಂತ್ ಮನೆಗೆ ಹೋಗುತ್ತಿದ್ದಾಗ ಚಿರತೆ ದಾಳಿ ಮಾಡಿತ್ತು. ರಾತ್ರಿಯಾದರೂ ಮಗ ಮನೆಗೆ ಬಾರದ ಹಿನ್ನಲೆ ಹುಡುಕಾಟ ನಡೆದಿತ್ತು. ಭಾನುವಾರ ಶವ ಪತ್ತೆಯಾಗಿದ್ದು ಒಂದು ಕೈ, ತಲೆ ಭಾಗ ಬಿಟ್ಟು ದೇಹದ ಉಳಿದ ಭಾಗ ಸಿಕ್ಕಿದೆ.
ಚಿರತೆ ಪ್ರತ್ಯಕ್ಷ: ಜಾಗರೂಕವಾಗಿರುವಂತೆ ಬೆಂಗಳೂರು ವಿವಿ ಸೂಚನೆ
ಚಿರತೆ ದಾಳಿ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಜನರು, ತಾಲೂಕು ಕುರುಬರ ಸಂಘದವರು ಕಪಿಲಾ ಮೇಲ್ಸೇತುವೆ ಬಳಿ ಭಾನುವಾರ ಎರಡು ತಾಸು ಪ್ರತಿಭಟನೆ ನಡೆಸಿದರು. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಕೆಆರ್ಎಸ್ ಬೃಂದಾವನದಲ್ಲಿ ಕೊನೆಗೂ ಬೋನಿಗೆ ಬಿದ್ದ ಚಿರತೆ, ನಷ್ಟದ ವಿವರ ಇಲ್ಲಿದೆ
ಸ್ಥಳೀಯ ಶಾಸಕ ಎಂ. ಅಶ್ವಿನ್ ಕುಮಾರ್, ಮೈಸೂರು ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಗ್ರಾಮದ ಜನರ ಅಹವಾಲುಗಳನ್ನು ಆಲಿಸಿದರು. ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Leopards come out in search of food in the evening. Best to avoid going alone after 6 pm in conflict zones pic.twitter.com/RfGCdpiLgT
— Zoos of Karnataka (@ZKarnataka) January 22, 2023
ಅರಣ್ಯ ಇಲಾಖೆ ಪ್ರಕಟಣೆ; ತಿ. ನರಸೀಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚಿರತೆ ಕಂಡು ಬಂದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಪ್ರಕಟಣೆಯನ್ನು ಹೊರಡಿಸಿದೆ. ತಿ. ನರಸೀಪುರ ತಾಲೂಕಿನ ಕೆಲ ಗ್ರಾಮಗಳಲ್ಲಿ ಚಿರತೆ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಸಾರ್ವಜನಿಕರು ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಯಾವುದೇ ಕಾರಣಕ್ಕೂ ಒಂಟಿಯಾಗಿ ಓಡಾಡತಕ್ಕದ್ದಲ್ಲ. ಸಂಜೆ 6 ಗಂಟೆಯ ಒಳಗೆ ಮನೆ ಸೇರಬೇಕು ಎಂದು ಸೂಚನೆ ನೀಡಲಾಗಿದೆ. ಚಿರತೆಯು ಕಂಡಲ್ಲಿ ಯಾವುದೇ ಕಾರಣಕ್ಕೂ ಹೆಚ್ಚು ಜನರು ಸೇರಿ ಗದ್ದಲ ಮಾಡಬಾರದು ಎಂದು ತಿಳಿಸಲಾಗಿದೆ.
ತಿ. ನರಸೀಪುರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳ ಪ್ರಕಟಣೆಯಲ್ಲಿ ಸಹಾಯವಾಣಿಯ ಸಂಖ್ಯೆಯನ್ನು ಸಹ ತಿಳಿಸಲಾಗಿದೆ. ಸಹಾಯವಾಣಿ ಸಂಖ್ಯೆ 9845772744, 9945921926. ಅರಣ್ಯ ಇಲಾಖೆ ಸಹಾಯವಾಣಿ 1926 ಆಗಿದೆ.
ಮೂರು ತಿಂಗಳಿನಲ್ಲಿ ನಾಲ್ವರು ಬಲಿ; ತಿ. ನರಸೀಪುರ ತಾಲೂಕಿನಲ್ಲಿ ಮೂರು ತಿಂಗಳಿನಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 2022ರ ಅಕ್ಟೋಬರ್ನಲ್ಲಿ ಎಂ. ಎಲ್. ಹುಂಡಿಯ ಮಂಜುನಾಥ್ ಎಂಬ ಯುವಕ ಚಿರತೆ ದಾಳಿಗೆ ಬಲಿಯಾಗಿದ್ದ. ಈ ಘಟನೆ ನಡೆದು ವಾರದ ಬಳಿಕ ಕೆಬ್ಬೆಹುಂಡಿಯ ಮೇಘನಾ ಎಂಬ ಯುವತಿ ಬಲಿಯಾಗಿದ್ದಳು. ಬಳಿಕ ಕನ್ನಾಯಕನಹಳ್ಳಿಯ ಸಿದ್ದಮ್ಮ ಎಂಬುವವರು ಚಿರತೆ ದಾಳಿಗೆ ಬಲಿಯಾಗಿದ್ದರು. ಈಗ ಜಯಂತ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ.
ಜಿಲ್ಲಾಧಿಕಾರಿಗಳು ಚಿರತೆ ದಾಳಿ ನಡೆದ ಗ್ರಾಮಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿ, "ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ. ಮೃತನ ಕುಟುಂಬಕ್ಕೆ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತದೆ. ತ್ವರಿತವಾಗಿ ಕಬ್ಬು ಕಟಾವು ಮಾಡಿಸಲಾಗುವುದು ಹಾಗೂ ಜಮೀನುಗಳಲ್ಲಿನ ಪೊದೆಗಳನ್ನು ತೆರವುಗೊಳಿಸಲಾಗುವುದು. ಚಿರತೆಯನ್ನು ಕಂಡಲ್ಲಿ ಗುಂಡಿಕ್ಕುವ ಹಂತಕ್ಕೆ ತಲುಪಿದ್ದೇವೆ" ಎಂದು ಹೇಳಿದರು.
ಇನ್ನೂ ಸುತ್ತೂರು ಜಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ತ್ವರಿತವಾಗಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದರು.