ಆಷಾಢ ಕೊನೆ ಶುಕ್ರವಾರ ಚಾಮುಂಡೇಶ್ವರಿಗೆ ಸಂಸದೆ ಶೋಭಾ ಪೂಜೆ
ಮೈಸೂರು, ಜುಲೈ 17: ಕೊನೆಯ ಆಷಾಢ ಮಾಸದ ಕೊನೆಯ ಶುಕ್ರವಾರವಾದ ಇಂದು ತುಂತುರು ಮಳೆ ಹಾಗೂ ದಟ್ಟವಾಗಿ ಹರಡಿದ ಮಂಜಿನ ನಡುವೆ ತಾಯಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕೊನೆಯ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ನೆರವೇರಿದ್ದು, ಪೂಜೆ ಬಳಿಕ ಚಾಮುಂಡೇಶ್ವರಿ ದೇವಾಲಯಕ್ಕೆ ಬೀಗ ಹಾಕಲಾಗಿದೆ.
ಕೊನೆಯ ಆಷಾಢ ಶುಕ್ರವಾರ ನಿತ್ಯ ಪೂಜೆ ನಂತರ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿದೆ. ಕೊರೊನಾ ಕಾರಣಕ್ಕಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಪ್ರತಿ ವರ್ಷ ಬೆಳಗ್ಗೆ 5.30ರಿಂದ ರಾತ್ರಿ 10ರವರೆಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುತ್ತಿತ್ತು. ಇಂದು ಬೆಳಿಗ್ಗೆ 7.30ಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿ ಬೀಗ ಹಾಕಲಾಗಿದೆ.
ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆಯು ದೇವಸ್ಥಾನದ ಆವರಣದ ಒಳಗೆ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಬರಿಗಾಲಿನಲ್ಲಿ ಮೆಟ್ಟಿಲುಗಳ ಮೂಲಕ ದೇವಸ್ಥಾನಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.

ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಕಾರಣ ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರು ಯಾರೂ ಅವರ ಜೊತೆ ಕಂಡುಬರಲಿಲ್ಲ. ಅವರು ಒಬ್ಬರೇ ಮೆಟ್ಟಿಲು ಮೂಲಕ ತೆರಳಿದ್ದು, ದೇವಸ್ಥಾನದ ಆಡಳಿತ ಮಂಡಳಿಯವರು ಅವರನ್ನು ಬರಮಾಡಿಕೊಂಡರು.
ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಆಷಾಢ ಮಾಸದ ಪೂಜೆಗೆ ಭಕ್ತರಿಗೆ ಅವಕಾಶ ನೀಡಲಾಗಿಲ್ಲ.












Click it and Unblock the Notifications