ಮೈಸೂರಲ್ಲಿ ದಸರಾ ಆಫರ್ ಹೆಸರಲ್ಲಿ ಲಕ್ಷಗಟ್ಟಲೆ ವಂಚನೆ, ಎಂಥ ಖತರ್ನಾಕ್ ವಂಚಕರು!
ಮೈಸೂರು, ನವೆಂಬರ್ 10 : ದಸರಾ ಕೊಡುಗೆ ಎಂಬ ನೆಪದಲ್ಲಿ ದುಪ್ಪಟ್ಟು ಕಮಿಷನ್ ನೀಡುವ ಆಸೆ ಹುಟ್ಟಿಸಿದ ನಕಲಿ ಕಂಪನಿಯೊಂದು ಏಳೇ ದಿನಗಳಲ್ಲಿ ಲಕ್ಷಾಂತರ ರುಪಾಯಿಯನ್ನು ಮೊಬೈಲ್ ರೀಚಾರ್ಜ್ ಮಾಡುವ ವ್ಯಾಪಾರಿಗಳಿಗೆ ವಂಚಿಸಿದೆ. ಈ ಜಾಲದ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಕುರಿತು ಪ್ರಾಥಮಿಕ ತನಿಖೆ ಕೈಗೊಂಡಿರುವ ಪೊಲೀಸರು, ವಂಚನೆಗೆ ಒಳಗಾದವರಿಂದ ಸೂಕ್ತ ದಾಖಲೆ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯಕ್ಕೆ ದುಪ್ಪಟ್ಟು ಕಮಿಷನ್ ಆಮಿಷ ನೀಡಿದ ಕಂಪನಿಯು ಬಾಗಿಲು ಮುಚ್ಚಿದೆ. ಅಲ್ಲಿನ ಸಿಬ್ಬಂದಿ ಪರಾರಿಯಾಗಿದ್ದಾರೆ. ಜತೆಗೆ ಅವರ ವೆಬ್ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ಗಳೂ ಸ್ಥಗಿತಗೊಂಡಿವೆ.
ಮಲ್ಟಿ ಮೊಬೈಲ್ ರೀಚಾರ್ಜ್ ಮಾಡುವ ಕಂಪನಿಯೊಂದು ಮೊಬೈಲ್ ರೀಚಾರ್ಜ್ ಮಾಡುವ ವ್ಯಾಪಾರಸ್ಥರಿಗೆ ಶೇ 6ರಷ್ಟು ಕಮಿಷನ್ ನೀಡುವುದಾಗಿ ನಂಬಿಸಿತು. ಸದ್ಯ, ಎಲ್ಲ ಮೊಬೈಲ್ ಕಂಪನಿಗಳು ಶೇ 3.25ರಷ್ಟು ಮಾತ್ರ ಕಮಿಷನ್ ನೀಡುತ್ತಿವೆ. ಅಕ್ತೋಬರ್ 3ರಿಂದ 10ರ ವರೆಗೆ ದಸರಾ ಆಫರ್ ಇದೆ ಎಂದು ನಂಬಿಸಿದೆ.

ಶೇ 6ರಷ್ಟು ಕಮಿಷನ್ ಕೊಡುವ ದಾಳ
ಹೆಚ್ಚು ಕಮಿಷನ್ ನೀಡುವ ಒಪ್ಪಂದವು ವಿವಿಧ ಮೊಬೈಲ್ ಕಂಪನಿಗಳ ಜತೆ ನಡೆದಿದೆ. ಹೀಗಾಗಿ, ಈ ಅವಧಿಯಲ್ಲಿ ವ್ಯಾಪಾರಸ್ಥರು ಕರೆನ್ಸಿ ಖರೀದಿಸಿದರೆ ದುಪ್ಟಟ್ಟು ಕಮಿಷನ್ ನೀಡಲಾಗುವುದು. ಜತೆಗೆ, ಖರೀದಿಸುವ ಕರೆನ್ಸಿಗೆ ಇಷ್ಟೇ ಅವಧಿ ಎಂದು ಇರುವುದಿಲ್ಲ. ಮುಂದೆ ಒಂದು ವರ್ಷಕ್ಕೂ ಹೆಚ್ಚು ಕಾಲದವರೆಗೆ ಗ್ರಾಹಕರ ಮೊಬೈಲ್ಗಳಿಗೆ ರೀಚಾರ್ಜ್ ಮಾಡಬಹುದು. ಆಗಲೂ ಶೇ 6ರಷ್ಟು ಕಮಿಷನ್ ದೊರೆಯುತ್ತದೆ ಎಂಬ ದಾಳ ಉರುಳಿಸಿದ್ದಾರೆ.

ವೆಬ್ ಸೈಟ್ ಹಾಗೂ ಅಪ್ಲಿಕೇಷನ್ ತೋರಿಸಿದ್ದಾರೆ
ವ್ಯಾಪಾರಸ್ಥರು ಸುಲಭವಾಗಿ ನಂಬಲಿ ಎಂದೇ ತಮ್ಮದೊಂದು ವೆಬ್ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ತೋರಿಸಿದ್ದಾರೆ. ವೆಬ್ಸೈಟ್ ಆಕರ್ಷಕವಾಗಿತ್ತು. ಅಲ್ಲಿ ವಂಚಕರು ಹೇಳಿದ ಎಲ್ಲ ನಿಯಮಗಳೂ ಇದ್ದವು. ಇದಕ್ಕಿಂತ ಮಿಗಿಲಾಗಿ ಹಣ ನೀಡುವುದೂ ಮೊಬೈಲ್ ಅಪ್ಲಿಕೇಷನ್ ಮೂಲಕವೇ ಎಂದು ಹೇಳಿದ್ದರಿಂದ ಮೋಸಕ್ಕೆ ಅವಕಾಶವೇ ಇಲ್ಲ ಎಂದು ವ್ಯಾಪಾರಿಗಳು ತಿಳಿದಿದ್ದಾರೆ.
ಮೈಸೂರು ದಸರಾ ಸಮಯದಲ್ಲಿ ಕಿಲಾಡಿ ಕಳ್ಳರು ಕದ್ದಿದ್ದು ಅಷ್ಟಿಷ್ಟಲ್ಲ!

ಲಕ್ಷಗಟ್ಟಲೆ ಹಣ ಹಾಕಿದ ವ್ಯಾಪಾರಿಗಳು
ಇದನ್ನು ನಂಬಿದ ವ್ಯಾಪಾರಸ್ಥರು ಸಾಲ ಮಾಡಿ, ವಂಚಕರ ಮೊಬೈಲ್ ಅಪ್ಲಿಕೇಷನ್ ನಲ್ಲಿ ಲಿಂಕ್ ಮಾಡಿದ್ದ ಬ್ಯಾಂಕ್ ಖಾತೆಗೆ ಹಣ ತುಂಬಿದ್ದಾರೆ. ಕಡಿಮೆ ಹಣ ತುಂಬಿದವರಿಗೆ ವಂಚಕರು ಮೊದಮೊದಲು ಕರೆನ್ಸಿ ನೀಡಿದ್ದಾರೆ. ಇದರಿಂದ ಮತ್ತಷ್ಟು ಉತ್ತೇಜಿತರಾದವರು ಲಕ್ಷಗಟ್ಟಲೆ ಹಣ ಹಾಕಿದ್ದಾರೆ. ಯಾವಾಗ ಹೆಚ್ಚಿನ ಹಣ ಬಂದಿತೋ ಆಗ ವಂಚಕರು ಪರಾರಿಯಾಗಿದ್ದಾರೆ. ಹಣ ಪಡೆಯುತ್ತಿದ್ದ ಅಪ್ಲಿಕೇಷನ್ ಸ್ಥಗಿತಗೊಳಿವಾಗಿದೆ. ವ್ಯಾಪಾರಿಗಳ ಬಳಿ ತಾವು ನೀಡಿದ ಹಣಕ್ಕೆ ದಾಖಲೆಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ
ಒಟ್ಟು 5 ಮಂದಿ ಈ ರೀತಿ ವಂಚನೆ ಮಾಡಿದ್ದಾರೆ. ವಂಚನೆಗೆ ಒಳಗಾದವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಸದ್ಯಕ್ಕೆ ಸರಸ್ವತಿಪುರಂ ಠಾಣೆಯ ಪೊಲೀಸರು ಈ ಕುರಿತು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ವ್ಯಾಪಾರಿಗಳು ವಂಚಕರಿಗೆ ನೀಡಿದ ಹಣದ ಕುರಿತು ಮಾಹಿತಿ ಹಾಗೂ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಪಿರಿಯಾಪಟ್ಟಣದಲ್ಲೇ ಹೆಚ್ಚಿನ ವಂಚನೆ ನಡೆದಿದೆ.












Click it and Unblock the Notifications