ಕೆಎಸ್ಆರ್ಟಿಸಿ ಡಿಪೋದಲ್ಲೇ ಮೆಕ್ಯಾನಿಕ್ ಆತ್ಮಹತ್ಯೆ
ಮೈಸೂರು, ಮೇ 11 : ಕೆಎಸ್ಆರ್ಟಿಸಿ ಬಸ್ ಡಿಪೋನಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ಡಿಪೋದಲ್ಲೇ ಸರಪಳಿ ಬಿಗಿದುಕೊಂಡು ನೇಣಿಗೆ ಶರಣಾದ ಘಟನೆ ಕೆ.ಆರ್.ನಗರದಲ್ಲಿ ಸೋಮವಾರ ರಾತ್ರಿ ನಡೆದಿದ್ದು ಮಂಗಳವಾರ ಬೆಳಕಿಗೆ ಬಂದಿದೆ.
ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಗ್ರಾಮದ ನಿವಾಸಿ ರಾಜೇಶ್ ಮಠಪತಿ(27) ಡಿಪೋನಲ್ಲೇ ನೇಣಿಗೆ ಶರಣಾದ ದುರ್ದೈವಿ. ಈತ ಸುಮಾರು ಏಳು ವರ್ಷಗಳಿಂದ ಕೆ.ಆರ್.ನಗರ ಘಟಕದಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ವಿವಾಹಿತನಾಗಿದ್ದ ಈತನಿಗೆ ಪತ್ನಿ ಮತ್ತು ಓರ್ವ ಪುತ್ರಿ ಇದ್ದಾರೆ.
ಸೋಮವಾರ ಇವನಿಗೆ ರಜೆಯಿದ್ದರೂ ಈತ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿಕೊಂಡು ಡಿಪೋನ ಒಳ ನುಗ್ಗಿದ್ದಾನೆ. ಇದಾದ ಬಳಿಕ ಯಾರಿಲ್ಲದ ಸಂದರ್ಭದಲ್ಲಿ ನೇಣಿಗೆ ಶರಣಾಗಿದ್ದಾನೆ. ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರೂ ಯಾರಿಗೂ ಗೊತ್ತಾಗಲಿಲ್ಲ. ಮಂಗಳವಾರ ಬೆಳಗ್ಗೆ 5 ಗಂಟೆಯ ಸಮಯದಲ್ಲಿ ಎಂದಿನಂತೆ ಇತರೆ ಸಿಬ್ಬಂದಿ ಕೆಲಸಕ್ಕೆ ತೆರಳಿದಾಗ ರಾಜೇಶ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಗೋಚರಿಸಿದೆ. [ಕೆಆರ್ ನಗರದ ನಿವಾಸಿಗಳ ನಿದ್ದೆಕೆಡಿಸಿದ ಕಾಡುಬೆಕ್ಕು]

ಸುದ್ದಿ ತಿಳಿದು ಕೆ.ಆರ್.ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಕಾಂತ್ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಂತರ ಶವದ ಮರಣೋತ್ತರ ಪರೀಕ್ಷೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.
ಆತ್ಮಹತ್ಯೆಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಈ ಹಿಂದೆ ಬಸ್ ಚಾಲಕನೊಬ್ಬ ಬಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದನು. [ಅವಳು ತಾಳಿ ಕಟ್ಟಿದವನನ್ನು ಜೈಲ್ ಸೇರಿಸಿದಳು]












Click it and Unblock the Notifications