BL Santosh: ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಕರುಣೆ ಇದೆ: ಸಿದ್ದರಾಮಯ್ಯ ಮೊಮ್ಮಗನ ಬಗ್ಗೆ ಬಿಎಲ್ ಸಂತೋಷ್ ಮಾತು
ಬೆಂಗಳೂರು, ಏಪ್ರಿಲ್ 22: ನಾನು ಸ್ಪರ್ಧಿಯಾಗಲು ಬಯಸುವುದಿಲ್ಲವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಹೇಳಿದ್ದಾರೆ. ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಈ ವಿಚಾರವನ್ನು ಆಫ್ ದಿ ರೆಕಾರ್ಡ್ ಹಂಚಿಕೊಂಡರು.
ಮಾಧ್ಯಮಗಳ ಮುಂದೆ ಮಾತನಾಡುವುದಕ್ಕೆ ಇಷ್ಟಪಡದ ಬಿಎಲ್ ಸಂತೋಷ್ ಅವರು, ' ಬಿಜೆಪಿಯಲ್ಲಿ ಹಲವು ಶಕ್ತ ನಾಯಕರಿದ್ದಾರೆ ಮತ್ತು ನಾನು ಅವರಿಗೆ ಪ್ರತಿಸ್ಪರ್ಧಿಯಾಗಲು ಬಯಸುವುದಿಲ್ಲ' ಎಂದು ತಿಳಿಸಿದರು. ಇಷ್ಟು ವಿಚಾರ ಹಂಚಿಕೊಂಡ ನಂತರ ಮೈಸೂರು ಸಂಸದ ಪ್ರತಾಪ್ ಸಿಂಹ ಅವರತ್ತ ಬೊಟ್ಟು ಮಾಡಿ ಸುದ್ದಿಗಾರರೊಂದಿಗೆ ಮಾತನಾಡುವಂತೆ ಸೂಚಿಸಿದರು.

ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಎಲ್ ಸಂತೋಷ್ ವಿರುದ್ಧ ವ್ಯಾಪಕ ಟೀಕೆ ಮಾಡಿದ್ದಾರೆ ತಮ್ಮ ಹುಬ್ಬಳ್ಳಿ-ಧಾರವಾಡ (ಕೇಂದ್ರ) ಟಿಕೆಟ್ ತಪ್ಪಲು ಸಂತೋಷ್ ಕಾರಣವೆಂದು ಸಾರ್ವಜನಿಕವಾಗಿ ಹೇಳಿದ್ದಾರೆ.
ಬಿಎಲ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ್ದ ಜಗದೀಶ್ ಶೆಟ್ಟರ್ ಅವರು, ಕರ್ನಾಟಕದ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದು ಮೋದಿ ಅಥವಾ ಅಮಿತ್ ಶಾ ಅವರಿಗೆ ತಿಳಿಯುತ್ತಿಲ್ಲ. ಸಂತೋಷ್ ಅವರು ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಗ್ರೌಂಡ್ ರಿಯಾಲಿಟಿ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ
ಬಿಜೆಪಿ ತೊರೆದ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ. ಸಂತೋಷ್ ಅವರ ಆಪ್ತರಾಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿಂಕಾಯಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಸಂತೋಷ್ ಸುತ್ತ ಚರ್ಚೆ
ಜಗದೀಶ್ ಶೆಟ್ಟರ್ ಹೇಳಿಕೆ ಬಳಿಕ ಸಂತೋಷ್ ಅವರ ಸುತ್ತಲಿನ ಚರ್ಚೆ ಮುನ್ನೆಲೆಗೆ ಬಂದಿದೆ. ಉಡುಪಿ ಮೂಲದ ಬ್ರಾಹ್ಮಣರಾದ ಸಂತೋಷ್ ಅವರು ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಂತೋಷ್ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂಬ ಮಾತುಗಳು ಕೇಳಿಬಂದಿವೆ. ಒಂದು ದಶಕದಿಂದೀಚೆಗೆ ಮುಖ್ಯಮಂತ್ರಿ ಹುದ್ದೆಗೆ ಸಂತೋಷ್ ಹೆಸರು ಹರಿದಾಡುತ್ತಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಅವರು ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಸಂತೋಷ್ ಅವರನ್ನು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಿರೋಧಿ ಎಂದೂ ಹೇಳಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನಂತರದ ಎರಡನೇ ಅತ್ಯಂತ ಶಕ್ತಿಶಾಲಿ ಹುದ್ದೆಯನ್ನು ಸಂತೋಷ್ ಹೊಂದಿದ್ದಾರೆ.
56 ವರ್ಷದ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳಿದ್ದರು. 'ನಾವು ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ಹಿಂಪಡೆದಿದ್ದೇವೆ. ಒಕ್ಕಲಿಗರು ಮತ್ತು ಲಿಂಗಾಯತರಿಗೆ ತಲಾ ಎರಡು ಶೇಕಡಾ ಅಂಕಗಳನ್ನು ನೀಡಿದ್ದೇವೆ. ನಾವು ಎಸ್ಸಿ ಎಸ್ಟಿಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಇದನ್ನು ಹಿಂಪಡೆಯಲು ಸಾಧ್ಯವಿಲ್ಲ' ಎಂದು ಹೇಳಿದರು
ವಿಶ್ವಾಸಾರ್ಹ ಮೂಲಗಳಿಂದ ನಡೆಸಲಾದ ಸಮೀಕ್ಷೆಗಳಲ್ಲಿ 99 ಪ್ರತಿಶತ ಫಲಿತಾಂಶ ಬಿಜೆಪಿ ಪರವಾಗಿವೆ ಎಂದು ಸಂತೋಷ್ ಹೇಳಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ ಕಾಂಗ್ರೆಸ್ಸಿಗರು ಅಪರಿಚಿತ ಕಂಪನಿಗಳು ನಡೆಸಿದ ಸಮೀಕ್ಷೆಗಳನ್ನು ಮುಂದಿಡುತ್ತಿದ್ದಾರೆ, ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮೊಮ್ಮಗನ ಕುರಿತು ಮಾತು
ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ ಅವರು, ಬಿಜೆಪಿಗೆ ಸಿಎಂಗಾಗಿ ಕ್ಷೇತ್ರ ಹುಡುಕುವ ಅಗತ್ಯವಿಲ್ಲ ಎಂದರು. 'ಮೈಸೂರಿನ ವ್ಯಕ್ತಿ ಇತರ ಕ್ಷೇತ್ರಗಳಲ್ಲಿ ಭರವಸೆ ಕಳೆದುಕೊಂಡ ನಂತರ ವರುಣಕ್ಕೆ ಮರಳಬೇಕಾಯಿತು. ತಮ್ಮ ಪುತ್ರ ಡಾ.ಯತೀಂದ್ರ ಅವರು ಸೀಟು ತ್ಯಾಗ ಮಾಡಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
'ಸಿದ್ದರಾಮಯ್ಯ ಅವರು ತಮ್ಮ ಘನತೆ ಉಳಿಸಿಕೊಳ್ಳಲು ವರುಣಾದಿಂದ ಸ್ಪರ್ಧಿಸಬೇಕಾಯಿತು. ಅದರಲ್ಲಿ ಯಾವುದೇ ತ್ಯಾಗವಿಲ್ಲ. ಕೆ ಎಸ್ ಈಶ್ವರಪ್ಪ ಮತ್ತು ಎಸ್ ಎ ರಾಮದಾಸ್ ಮಾಡಿದ್ದು ನಿಜವಾದ ತ್ಯಾಗ' ಎಂದು ಸಂತೋಷ್ ತಿಳಿಸಿದ್ದಾರೆ.
40 ಪಕ್ಷದ ಕಾರ್ಯಕರ್ತರನ್ನು ಕಣಕ್ಕಿಳಿಸುವ ಬಿಜೆಪಿಯ ನಿರ್ಧಾರವನ್ನು ಶ್ಲಾಘಿಸಿದ ಅವರು, 'ಬದಲಾವಣೆಗಳನ್ನು ಬೆಂಬಲಿಸುವಂತೆ' ಪಕ್ಷದ ಸಹೋದ್ಯೋಗಿಗಳನ್ನು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಮೊಮ್ಮಗನನ್ನು (ಧವನ್ ರಾಕೇಶ್) ತಮ್ಮ ಉತ್ತರಾಧಿಕಾರಿಯಾಗಿ ಪರಿಚಯಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ನನಗೆ ಕರುಣೆ ಇದೆ' ಎಂದು ಬಿಎಲ್ ಸಂತೋಷ್ ಹೇಳಿದ್ದಾರೆ.












Click it and Unblock the Notifications