ಹಾಲು ಮಾರಾಟದಲ್ಲಿ ಕೆಎಂಎಫ್ ದೇಶದಲ್ಲೇ 2ನೇ ಸ್ಥಾನ- ಮೈಮುಲ್ ಅಧ್ಯಕ್ಷ
ಮೈಸೂರು, ನವೆಂಬರ್ 18: ಹಾಲು ಮಾರಾಟದಲ್ಲಿ ಕರ್ನಾಟಕ ಹಾಲು ಒಕ್ಕೂಟ ( KMF) ದೇಶದಲ್ಲೇ 2ನೇ ಸ್ಥಾನದಲ್ಲಿದ್ದು, ರಾಜ್ಯದ ಹಾಲು ಉತ್ಪಾದಕರು ಇನ್ನು ಹೆಚ್ಚು ಹೆಚ್ಚು ಹಾಲು ಉತ್ಪಾದಿಸಿದರೆ ಕೆಎಂಎಫ್ ಮೊದಲ ಸ್ಥಾನಕ್ಕೆ ಏರಲು ಸಹಕಾರಿಯಾಗಲಿದೆ ಎಂದು ಮೈಮುಲ್ ಅಧ್ಯಕ್ಷ ಆರ್. ಚಲುವರಾಜ ಹೇಳಿದರು.
ತಿ. ನರಸೀಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಮೈಮುಲ್ ಪ್ರಾದೇಶಿಕ ಕಛೇರಿಯಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ -2024 ಕಾರ್ಯಕ್ರಮವನ್ನು ಉದ್ದೇಶಿಸಿ ಮತನಾಡಿದ ಅವರು, ದೇಶದಲ್ಲಿ ಹೈನುಗಾರಿಕೆ ಹೆಮ್ಮರವಾಗಿ ಬೆಳೆಯಲುದ ಡಾ. ವರ್ಗಿಸ್ ಕುರಿಯನ್ ಅವರು ಕಾರಣ, ದೇಶದ ತುಂಬಾ ಕ್ಷೀರ ಕಾಂತ್ರಿ ನಡೆದಿದೆ.

ಮೈಮುಲ್ನಲ್ಲಿ ಪ್ರಾರಂಭಿಕ ಹಂತದಲ್ಲಿ ಕಡಿಮೆ ಹಾಲು ಸಂಗ್ರಹಣ ಮಾಡಲಾಗುತ್ತಿತ್ತು. ಪ್ರಸ್ತುತ ದಿನಕ್ಕೆ 9 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದೆ. ಇಂದಿನ ದಿನಗಳಲ್ಲಿ ದುಬೈ ಸೇರಿದಂತೆ ಹಲವು ದೇಶಗಳಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಹಾಗೂ ಈ ಮಾರಾಟ ಹೆಚ್ಚುತ್ತಿದೆ ಎಂದರು.
ದೇಶದಲ್ಲಿ ಆಹಾರ ಸ್ವಾವಲಂಬನೆ, ಕ್ಷೀರ ಕ್ರಾಂತಿ ಎಲ್ಲದಕ್ಕೂ ಸಹಕಾರಿ ಕ್ಷೇತ್ರದ ಸಹಕಾರದಿಂದ ಮಾತ್ರ ಎಂದು ಕ್ಷೇತ್ರ ಸಾಧಿಸಿ ತೋರಿಸಿದೆ. ಹಾಲು ಉತ್ಪಾದಕರ ಸಂಘ ಹಾಲಿನ ಜೊತೆ 250 ಸಹ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇಂದು ಸಹಕಾರ ಕ್ಷೇತ್ರ ಮಾರ್ಗದರ್ಶನ ಕೊರತೆ ಮತ್ತು ಉತ್ತೇಜನದ ಕೊರತೆಯಿಂದ ಅಲ್ಪ ಮಟ್ಟದ ಹಿನ್ನಡೆ ಅನುಭವಿಸಿದೆ ಎಂದು ಹೇಳಿದರು.
ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ ಮಾತನಾಡಿ, ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಒಂದೊಂದು ಸಹಕಾರ ಸಂಘದ ಸ್ಥಾಪನೆಗೆ ಅವಕಾಶ ನೀಡಿರುವುದು ಶ್ಲಾಘನಿಯ. ಸಹಕಾರ ಕ್ಷೇತ್ರದಲ್ಲಿ ಶಿಸ್ತು ಬಹಳ ಮುಖ್ಯ, ವಹಿ ನಿರ್ವಹಣೆ, ಹಣಕಾಸಿನ ವ್ಯವಹಾರ, ಸೇರಿದಂತೆ ಸಂಘದ ವಿವಿಧ ಕಾರ್ಯಗಳಲ್ಲಿ ಪಾರದರ್ಶಕತೆ ಇರಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಬೇರೆಲ್ಲ ಹಾಲಿನ ಮಾರಾಟಕ್ಕಿಂತ ನಂದಿನಿ ಹಾಲಿನ ಬೆಲೆ ಕಡಿಮೆ ಇದೆ. ಹಾಗಾಗಿ ಸರ್ಕಾರ ಹಾಲು ಮಾರಾಟ ದರವನ್ನು ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪ್ರಸಕ್ತ ದಿನಗಳಲ್ಲಿ ಹಾಲು ಉತ್ಪಾದಕರ ನಿರ್ವಹಣೆ ವೆಚ್ಚ, ಪಶು ಆಹಾರ ಸೇರಿದಂತೆ ವಿವಿಧ ಖರ್ಚು ಹೆಚ್ಚು ಇರುವುದರಿಂದ ಹಾಲು ಮಾರಾಟ ದರವನ್ನು ಹೆಚ್ಚಿಸಬೇಕು ಎಂದು ಉತ್ಪಾದಕರ ಬೇಡಿಕೆ ಇದೆ ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಒಕ್ಕೂಟದ ನಿರ್ದೇಶಕಿ ಮಾಜಿ ಶಾಸಕರಾದ ಜೆ. ಸುನೀತಾವೀರಪ್ಪಗೌಡ, ನಿರ್ದೇಶಕರಾದ ಹನುಮನಹಾಳು ಸಿದ್ದೇಗೌಡ, ಟಿ ಪಿ.ಬೋರೇಗೌಡ, ಸಿ. ಓಂ ಪ್ರಕಾಶ್, ಸದಾನಂದಾ, ಟಿಎಪಿಎಂಎಸ್ ಅಧ್ಯಕ್ಷ ಟಿ.ಪಿ. ಸುಬ್ರಮಣ್ಯ, ಮೈಮುಲ್ ಅಭಿವೃದ್ದಿ ಅಧಿಕಾರಿ ಹಸೀನಾ, ಕರಿಬಸವರಾಜು, ವಿಸ್ತರಣಾಧಿಕಾರಿ ಪ್ರಮೋದ್ ತಾಲೂಕಿನ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.












Click it and Unblock the Notifications