ಜೆಡಿಎಸ್-ಬಿಜೆಪಿ ಅಭ್ಯರ್ಥಿ ಪರ ನಟ ಯಶ್ ಭರ್ಜರಿ ಪ್ರಚಾರ
ಮೈಸೂರು, ಮೇ 02 : ಚುನಾವಣೆಯ ಕಾವಿಗೆ ಈ ಬಾರಿ ಸ್ಯಾಂಡಲ್ ವುಡ್ ನಾಯಕರ ಟಚ್ ಸಿಕ್ಕಿರುವುದು ವಿಶೇಷ. ಮೈಸೂರಿನ ಭಾಗದಲ್ಲಿ ಸ್ಟಾರ್ ಪ್ರಚಾರಕರೇ ಇಲ್ಲವೆಂದು ಹೇಳುತ್ತಿದ್ದ ಯುವಕರಿಗೆ ಇಂದು ಹಬ್ಬದೂಟವೇ ಸಿಕ್ಕಿದಂತಾಗಿತ್ತು.
ಹೌದು, ಬುಧವಾರ ಬೆಳ್ಳಂಬೆಳಿಗ್ಗೆ ಕೆ.ಆರ್ ನಗರದ ಪ್ರಮುಖ ರಸ್ತೆಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಜೆಡಿಎಸ್ ಮುಖಂಡ ಸಾರಾ ಮಹೇಶ ಪರ ಭರ್ಜರಿ ಪ್ರಚಾರ ನಡೆಸಿದರು. ಹಸಿರು ಟವೆಲ್ ತೊಟ್ಟ ಯಶ್, ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಬ್ಯಾಟಿಂಗ್ ಬೀಸಿದರು. ಕೆ ಆರ್ ನಗರದ ತೋಪಮ್ಮ ದೇವಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ ಯಶ್, ತೆರೆದ ವಾಹನದಲ್ಲಿ ಸುಡು ಬಿಸಿಲನ್ನೂ ಲೆಕ್ಕಿಸಿದೇ ಸಾ ರಾ ಮಹೇಶ್ ಗೆ ಮತ ಹಾಕುವಂತೆ ಮನವಿ ಮಾಡಿದರು.
ಕೆ ಆರ್ ನಗರದ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುವ ವೇಳೆ ಅಕ್ಕಪಕ್ಕದ ಊರಿನಿಂದಲೂ ನಮ್ಮ ನೆಚ್ಚಿನ ನಟನನ್ನು ನೋಡಲು ಜನರು ಮುಗಿಬಿದ್ದರು. ಇನ್ನು ಇದೇ ವೇಳೆ ಮಾತನಾಡಿದ ಯಶ್, ನಾನು ಯಾವುದೇ ರಾಜಕೀಯ ಪಕ್ಷ ಹಾಗೂ ಆ ಪಕ್ಷದ ಸಿದ್ದಾಂತಗಳಿಗೆ ಬೆಂಬಲ ಸೂಚಿಸಿಲ್ಲ. ಆದರೆ ಕೆ.ಆರ್.ನಗರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಸಾ.ರಾ. ಮಹೇಶ್ ನನ್ನ ಸ್ನೇಹಿತರು ಹಾಗೂ ಬಹಳ ಪರಿಚಯಸ್ಥರು.

ಹಾಗಾಗಿ ಅವರ ಪರ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನನ್ನ ಸ್ನೇಹಿತರ ಇರುವ ಕ್ಷೇತ್ರದಲ್ಲಿ ನಾನು ಪ್ರಚಾರ ಮಾಡುತ್ತೇನೆ. ಯವಕರು ಜನಪರ ಕಾಳಜಿ ಹಾಗೂ ಕೆಲಸ ಮಾಡುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನಾನು ರಾಜಕೀಯ ಬರಬೇಕು ಅಂತಾ ಅಂದ್ಕೊಂಡಿಲ್ಲ. ಸದ್ಯ ನನ್ನ ಕೆಲಸಗಳಲ್ಲಿ ಬ್ಯುಸಿ ಇದ್ದೇನೆ. ಅದ್ರೆ ನನ್ನ ವಿಷಯಕ್ಕೆ, ನನ್ನ ಕನಸುಗಳಿಗೆ ಪೂರಕವಾಗಿದ್ದರೆ ಅವರಿಗೆ ನಾನು ಬೆಂಬಲ ನೀಡುತ್ತೇನೆ ಎಂದರು.
ಮೈಸೂರಿಗೆ ಆಗಮಿಸಲಿರುವ ಯಶ್...
ಇನ್ನು ಸಂಜೆ 6ಕ್ಕೆ ಮೈಸೂರಿನ ಕೆ.ಆರ್. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ರಾಮದಾಸ್ ಪರ ಯಶ್ ಪ್ರಚಾರ ನಡೆಸಲಿದ್ದಾರೆ. ಗನ್ ಹೌಸ್ ವೃತ್ತದಿಂದ ರಾಮದಾಸ್ ಪರ ರೋಡ್ ಶೋ ನಡೆಸಲಿದ್ದಾರೆ. ಯಶ್ ಸ್ಯಾಂಡಲ್ ವುಡ್ನ ಖ್ಯಾತ ನಟ ಜೊತೆಗೆ ಮೈಸೂರಿನವರೇ ಆಗಿರುವ ಕಾರಣ ಅವರನ್ನು ಅಭ್ಯರ್ಥಿಗಳು ಪ್ರಚಾರಕ್ಕೆ ಕರೆ ತರುತ್ತಿದ್ದಾರೆ.












Click it and Unblock the Notifications