ಮೈಸೂರಿನ ಪಿರಿಯಾಪಟ್ಟಣದಲ್ಲಿ ಸಮಸ್ಯೆಗಳದ್ದೇ ಕಾರುಬಾರು!
ಮೈಸೂರು, ಏಪ್ರಿಲ್ 18 : ಊರು ಎಂದ ಮೇಲೆ ಸಮಸ್ಯೆ ಸಾಮಾನ್ಯ. ಆ ಸಮಸ್ಯೆಗೆ ಉತ್ತರ ಹುಡುಕಲೆಂದೇ ಜನತಂತ್ರ ವ್ಯವಸ್ಥೆ. ಆದರೆ ನಾವು ಆಯ್ಕೆ ಮಾಡಿ ಕಳುಹಿಸಿದ ನಾಯಕರೇ ಸಮಸ್ಯೆ ಪರಿಹಾರದ ಹಾದಿಗಿರಲೀ, ಒಮ್ಮೆ ಗೆದ್ದ ಮೇಲಾದರೂ ನಮ್ಮ ನಡುವೆ ಬರಬೇಡವೇ ಎಂಬುದು ನಮ್ಮೆಲ್ಲರ ಹಂಬಲ.
ಈ ಮಾತು ಕೇವಲ ಒಬ್ಬರದಲ್ಲ, ಪ್ರತಿಯೊಬ್ಬರದು. ಮೈಸೂರಿನ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಎದುರಾಗಿರುವುದು ಇದೇ ಸಮಸ್ಯೆ. ಈ ಹಿಂದೆ ಆಯ್ಕೆಯಾದ ಶಾಸಕ ಕೆ. ವೆಂಕಟೇಶ್ ಗೆ ಎದುರಾಗಿದ್ದು ಹಾಗೂ ಈಗಲೂ ಬಗೆಹರಿಯಲಾಗದ ಸಮಸ್ಯೆ ಕುಡಿಯುವ ಹಾಗೂ ರೈತನ ಉಳುಮೆಯ ಜೀವಜಲ.
ಈ ಕ್ಷೇತ್ರದ ಅಭಿವೃದ್ಧಿಗೆ ಕಳೆದ ಐದು ವರ್ಷಗಳಲ್ಲಿ 1500 ಕೋಟಿಗೂ ಹೆಚ್ಚು ಅನುದಾನ ಬಂದಿದೆ. ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೊನಿಗಳಲ್ಲಿ ಶೇ 80ರಷ್ಟು ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ. ಇದರಿಂದ ದಲಿತರ ಕಾಲೊನಿಗಳಲ್ಲಿ ಇದ್ದ ಬಹುತೇಕ ಸಮಸ್ಯೆಗಳು ನೀಗಿವೆ. ಆದರೆ, ಇತರ ವರ್ಗದವರು ನೆಲೆಸಿರುವ ಕಡೆಗಳಲ್ಲಿ ರಸ್ತೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ.
ಗ್ರಾಮೀಣ ಪ್ರದೇಶಗಳಿಗೆ ಸಾಗಿದಂತೆ ಹದಗೆಟ್ಟ ರಸ್ತೆಗಳು ಕಣ್ಣಿಗೆ ಬೀಳುತ್ತವೆ. ಹಳ್ಳಿಗಳಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡದೆ ಇರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅರಣ್ಯದೊಳಗೆ ವಾಸಿಸುತ್ತಿರುವ ಗಿರಿಜನರ ಹಾಡಿಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಕೆಲಸ ನಡೆದಿಲ್ಲ. ಅರಣ್ಯ ಇಲಾಖೆಯ ಅಸಹಕಾರದ ನೆಪವನ್ನು ನೀಡಲಾಗುತ್ತಿದೆ. ಹಲವು ವರ್ಷಗಳಿಂದ ಕಷ್ಟದ ಬದುಕು ಸಾಗಿಸುತ್ತಿರುವ ಹಾಡಿಯ ಜನರ ಬವಣೆ ಮುಂದುವರಿದಿದೆ.

ಸಮರ್ಪಕವಾಗಿ ಜಾರಿಯಾಗದ ಯೋಜನೆಗಳು
ಗಿರಿಜನರಿಗೆ ಸಾಕಷ್ಟು ಯೋಜನೆಗಳಿದ್ದರೂ ಸಮರ್ಪಕವಾಗಿ ಜಾರಿಯಾಗಿಲ್ಲ. ಹಾಡಿಗಳಲ್ಲಿ ರಸ್ತೆ, ಚರಂಡಿ ವ್ಯವಸ್ಥೆಯಿಲ್ಲ. ಇದರಿಂದ ಶುಚಿತ್ವ ಕಾಪಾಡಲು ಸಾಧ್ಯವಾಗುತ್ತಿಲ್ಲ. ಸಣ್ಣ ಗುಡಿಸಲುಗಳಲ್ಲಿ ವಾಸಿಸುವ ಗಿರಿಜನರು ಸುಲಭದಲ್ಲಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಳೆಗಾಲದಲ್ಲಿ ಜೀವನ ಸಾಗಿಸುವುದೇ ದುಸ್ತರ ಎನಿಸಿದೆ. ಶಿಕ್ಷಣ ಕ್ಷೇತ್ರದ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಸುವ ವಿಚಾರದಲ್ಲಿ ಪಿರಿಯಾಪಟ್ಟಣ ಹಿಂದೆ ಉಳಿದುಕೊಂಡಿದೆ ಎಂಬುದು ಜನಾಭಿಪ್ರಾಯ. ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಲು ಮಂಜೂರಾತಿ ದೊರೆತಿದ್ದರೂ ಕಟ್ಟಡ ನಿರ್ಮಾಣ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ. ಇದರಿಂದ ಪ್ರಸಕ್ತ ವರ್ಷದಿಂದ ಕಾಲೇಜು ಆರಂಭಿಸಲು ಸಾಧ್ಯವಾಗಿಲ್ಲ. ಯುವಜನರಿಗೆ ಉದ್ಯೋಗ ಸೃಷ್ಟಿಸುವ ದೃಷ್ಟಿಯಿಂದ ನರ್ಸಿಂಗ್ ಕಾಲೇಜು, ಕೈಗಾರಿಕಾ ವಲಯ ಸ್ಥಾಪಿಸುವ ಅಗತ್ಯವಿತ್ತು.

ಕಾವೇರಿ ವಿವಾದದ ಪ್ರಭಾವ
150 ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿಲ್ಲ. ಕಾವೇರಿ ವಿವಾದದಿಂದಾಗಿ ಈ ಯೋಜನೆ ತಡವಾಗಿದೆ. ಯೋಜನೆಯ ಲಾಭ ಜನರಿಗೆ ತಲುಪಲು ಇನ್ನೂ ಹಲವು ತಿಂಗಳುಗಳು ಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಹಲವು ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೂ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಇದೆ. ಅಂತರ್ಜಲಮಟ್ಟ ಕುಸಿದಿರುವ ಕಾರಣ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷಿಕರ ಸಮಸ್ಯೆ ಕೇಳುವವರಿಲ್ಲ
ತಂಬಾಕು ಬೆಳೆಗಾರರ ಸಮಸ್ಯೆಗೆ ಶಾಸಕರು ಸರಿಯಾಗಿ ಸ್ಪಂದಿಸಿಲ್ಲ ಎಂಬ ದೂರುಗಳು ಇವೆ. ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಸಂಕಷ್ಟದಲ್ಲಿರುವ ತಂಬಾಕು ಬೆಳೆಗಾರರಿಗಾಗಿ ವಿಶೇಷ ಪ್ಯಾಕೇಜ್ ತಂದು ನೆರವು ನೀಡುವ ಪ್ರಯತ್ನವನ್ನು ಶಾಸಕರು ಮಾಡಿಲ್ಲ. ಕುಡಿಯುವ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ಲಭಿಸಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದನ್ನು ಇದುವರೆಗೂ ತಪ್ಪಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುತ್ತಾರೆ ನಾಗರೀಕರು.
ಇನ್ನು ಈ ಕುರಿತಾಗಿ ಮಾಹಿತಿ ನೀಡಿದ ಶಾಸಕ ವೆಂಕಟೇಶ್, ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಮೊತ್ತದ ಹಣ ತಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ದ್ದರಿಂದ ಐದು ವರುಷಗಳ ಅವಧಿಯನ್ನುಎಂದಿಗೂ ಮರೆಯಲು ಸಾಧ್ಯವಿಲ್ಲ. 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಎಲ್ಲಾ ಜಾತಿ ಜನಾಂಗದವರಿಗೆ ಸಮುದಾಯ ಭವನದ ನಿರ್ಮಾಣಕ್ಕಾಗಿ ಅನುದಾನ ನೀಡಿದ್ದೇನೆ. ಮುಂದಿನ ಮಳೆಗಾಲದಲ್ಲಿ ಖಂಡಿತವಾಗಿಯೂ ಕೆರೆಗಳಿಗೆ ನೀರು ಹರಿಯಲಿದೆ ಎಂದರು.

ಸುಸಜ್ಜಿತ ಆಸ್ಪತ್ರೆಯಿಲ್ಲ
ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್ ಮಾತನಾಡಿ, ತಾಲೂಕಿನಲ್ಲಿ1600 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದು ಬೀಗುವ ಶಾಸಕರು ಕಮೀಷನ್ ದಂಧೆಗಾಗಿ ಹಣ ತಂದಿದ್ದಾರೆಯೇ ಹೊರತು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿಲ್ಲ ಎನ್ನುತ್ತಾರೆ. ಈ ಕುರಿತಾಗಿ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಎಸ್ ಇ ಜೆಡ್ ವಲಯವನ್ನು ತಾಲೂಕಿಗೆ ತರಲು ಯತ್ನಿಸುವ ಗೋಜಿಗೆ ಶಾಸಕರು ಹೋಗಿಲ್ಲ. ತಂಬಾಕು ನಿಷೇಧದ ನಂತರ ರೈತರನ್ನು ಪರ್ಯಾಯ ಬೆಳೆಗೆ ಸಿದ್ಧಪಡಿಸುವ ಕೆಲಸವನ್ನೂ ಮಾಡದೇ ಶಾಸಕರು ವಿಫಲರಾಗಿದ್ದಾರೆ ಎಂದರು. ಚುನಾವಣೆ ಹತ್ತಿರ ಬಂದಿದೆ. ಇನ್ನಾದರೂ ಗೆಲ್ಲುವ ನಮ್ಮ ಜನನಾಯಕರು ಜನರ ಸಮಸ್ಯೆಗಳತ್ತ ಗಮನ ಹರಿಸಲಿ ಎಂಬುದು ನಮ್ಮ ಆಶಯ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications