"ಜೆಡಿಎಸ್ ಬಹುಮತ ಪಡೆಯಲಿ, ಪಡೆಯದಿರಲಿ ಸರ್ಕಾರ ರಚಿಸುವುದು ಖಚಿತ"
ಮೈಸೂರು, ಎಪ್ರಿಲ್ 30: "ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆಯಲಿ, ಪಡೆಯದಿರಲಿ ಸರ್ಕಾರ ರಚಿಸುವುದು ನಾವೇ ಎಂಬುದಾಗಿ" ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏನು ಹಾಗಂದ್ರೆ? ಜೆಡಿಎಸ್ ಕರ್ನಾಟಕದಲ್ಲಿ ನಿರ್ಣಾಯಕ ಸ್ಥಾನ ವಹಿಸಲಿದೆ ಎಂದು ಅಂತೂ ದೇವೇಗೌಡರು ಒಪ್ಪಿಕೊಂಡಿದ್ದಾರೆ! ಜೆಡಿಎಸ್ ಬಹುಮತ ಬಾರದಿದ್ದರೂ ಸರ್ಕಾರ ರಚಿಸುತ್ತದೆ ಎಂದರೆ, ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತದೆ ಎಂಬುದನ್ನು ಪರೋಕ್ಷವಾಗಿ ಹೇಳಿದಂತಾಗಿಲ್ಲವೇ?
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದ್ದು, ಕಾಂಗ್ರೆಸ್ ಬಿಜೆಪಿಗಿಂತಲೂ ಹೆಚ್ಚಿನ ಸೀಟು ನಮಗೆ ದೊರೆಯಲಿದ್ದು, ಬಹುಮತ ಬರುವ ನಿರೀಕ್ಷೆಯಿದ್ದು, ಒಂದು ವೇಳೆ ಬಹುಮತ ಸಿಗದಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ಬಿಎಸ್ ಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ಸಹಾಯದಿಂದ ಅಧಿಕಾರ ಹಿಡಿಯುವುದು ಖಚಿತ ಎಂದು ಹೇಳಿದರು.
ಜೆಡಿಎಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮತ್ತದೆ ಎಂಬ ಗೌಡರ ವಿಶ್ವಾಸ ಸರಿ. ಆದರೆ ಸರ್ಕಾರ ರಚಿಸಲು ಅಗತ್ಯವಿರುವ '113' ಮ್ಯಾಜಿಕ್ ನಂಬರ್ ಅನ್ನು ಪಕ್ಷೇತರ ಮತ್ತು ಬಿಎಸ್ಪಿ ಅಭ್ಯರ್ಥಿಗಳಿಂದ ಪಡೆಯುತ್ತೇವೆ ಎಂಬ ಸಾಧ್ಯತೆಗಳು ಈಗಿನ ರಾಜಕೀಯ ಚಿತ್ರಣದಲ್ಲಿ ಅಸಾಧ್ಯವೇ ಎಂಬುದು ದೇವೇಗೌಡರಿಗೆ ಗೊತ್ತಿಲ್ಲದ ವಿಷಯವೇ?
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇವೇಗೌಡರ ಶಕ್ತಿ ಗೊತ್ತಾಗುತ್ತೆ!
ಯಾವುದೋ ನಾಲ್ಕಾಣಿ ಏಜೆನ್ಸಿಗಳಿಂದ ಸಮೀಕ್ಷೆ ನಡೆಸಿದ್ದು, ಅವುಗಳ ಬಗ್ಗೆ ಯಾವುದೇ ರೀತಿಯ ತಲೆಕೆಡಿಸಿಕೊಂಡಿಲ್ಲ. ಒಬ್ಬರು ಹೇಳುತ್ತಾರೆ ಜೆಡಿಎಸ್ ಪಕ್ಷ 38 ಸೀಟ್ ಬರುತ್ತದೆ ಅಂತ. ಇನ್ನೊಬ್ಬರು 36, ಮತ್ತೊಬ್ಬರು 40 ಸೀಟ್ ಬರುತ್ತದೆ ಎನ್ನುತ್ತಿದ್ದಾರೆ. ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಫಲಿತಾಂಶ ಬಂದ ಬಳಿಕ ದೇವೇಗೌಡನ ನಿಜವಾದ ಶಕ್ತಿ ಗೊತ್ತಾಗಲಿದೆ ಎಂದರು.

ಬಿಜೆಪಿ-ಕಾಂಗ್ರೆಸ್ ಗೆ ಅಭಿವೃದ್ಧಿ ಬೇಕಿಲ್ಲ
ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ ಐದು ವರ್ಷ ಪೂರ್ತಿ ರಾಜ್ಯದಲ್ಲಿ ಆಡಳಿತ ನಡೆಸಿವೆ. ಆದರೆ, ರಾಜ್ಯದ ಬೆಳವಣಿಗೆ ದೃಷ್ಟಿಯಿಂದ ಮುಖ್ಯ ವಿಷಯಗಳ ಬಗ್ಗೆ ಈ ನಾಯಕರು ಜಾಸ್ತಿ ತಲೆಕೆಡಿಸಿಕೊಳ್ಳಲಿಲ್ಲ. ಅಭಿವೃದ್ಧಿಯನ್ನು ಮಾಡಲಿಲ್ಲ ಎಂದು ದೂರಿದರು.
ಇಡೀ ಗೃಹ ಇಲಾಖೆ ಮತ್ತು ಗೃಹಮಂತ್ರಿಯವರು ಕೆಂಪಯ್ಯನವರ ಅಡಿಯಲ್ಲಿದ್ದಾರೆ. ಇತಿಹಾಸದಲ್ಲೆ ಕೆಪಿಸಿಸಿ ಅಧ್ಯಕ್ಷರು ಸೋತಿರಲಿಲ್ಲ. ಆದರೆ, ಜಿ.ಪರಮೇಶ್ವರ್ ಸೋತರು. ಇದಕ್ಕೆಕಾರಣ ಏನು? ಎಂದು ಪ್ರಶ್ನಿಸಿದ ಅವರು, ಡಾ.ಜಿ.ಪರಮೇಶ್ವರ್ ರನ್ನು ಎಂಎಲ್ ಸಿ ಮಾಡಲು ಮೂರು ವರ್ಷ ಬೇಕಾಯ್ತು ಎಂದು ಲೇವಡಿ ಮಾಡಿದರು.

ಬರೆದುಕೊಟ್ಟಿದ್ದನ್ನು ಓದುವ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕರೇನು ಮುಸ್ಲಿಂ ಸಮುದಾಯವನ್ನು ಗುತ್ತಿಗೆ ಪಡೆದಿದ್ದಾರಾ ಎಂದು ಪ್ರಶ್ನಿಸಿದ ಅವರು, ಮುಸ್ಲಿಂ ಸಮುದಾಯದ ಬೆಳವಣಿಗೆ ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದರಲ್ಲದೆ, ದತ್ತ ಪೀಠದ ಸಮಸ್ಯೆ ಉದ್ಭವಿಸಲು ಕಾಂಗ್ರೆಸ್ ನಾಯಕರೆ ಕಾರಣ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಸಮಸ್ಯೆ ಹುಟ್ಟಿಕೊಂಡಿತ್ತು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾದೇಶಿಕ ಪಕ್ಷದಲ್ಲೇ ಬೆಳೆದಿದ್ದಾರೆ. ಆದರೆ, ಈಗ ಪ್ರಾದೇಶಿಕ ಪಕ್ಷವನ್ನೇ ಕೊನೆಗಾಣಿಸಲು ಮುಂದಾಗಿದ್ದಾರೆ. ರಾಹುಲ್ ಗಾಂಧಿಗೆ ಏನು ಗೊತ್ತಿಲ್ಲ. ರಾಜ್ಯ ನಾಯಕರು ಚೀಟಿಯಲ್ಲಿ ಬರೆದುಕೊಡುವುದನ್ನು ಓದುತ್ತಿದ್ದಾರೆ ಎಂದು ಟೀಕಿಸಿದರು.

ಅಂಬರೀಶ್ ಕುರಿತು ಮೆಚ್ಚುಗೆ
ಭಟ್ಕಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಹೆದರಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ರಾಜ್ಯದ ಅನೇಕ ಕಡೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ದೂರಿದರು.
ನಟ ಅಂಬರೀಷ್ ಒಳ್ಳೆ ಸ್ನೇಹಿತರು. ಅವರು ನಮ್ಮ ಬಗ್ಗೆ ನಾಲ್ಕು ಒಳ್ಳೆ ಮಾತು ಆಡಿದ ಕೂಡಲೇ ಅವರು ಜೆಡಿಎಸ್ ಗೆ ಬರುತ್ತಾರೆ ಎನ್ನುವುದು ತಪ್ಪು. ಅವರನ್ನು ಮೊದಲು ರಾಜಕೀಯಕ್ಕೆ ಕರೆತಂದು ರಾಮನಗರದಿಂದ ಸ್ಪರ್ಧಿಸುವಂತೆ ಮಾಡಿದ್ದು ಕುಮಾರಸ್ವಾಮಿ. ಕಾವೇರಿ ವಿಚಾರವಾಗಿ ಕೇಂದ್ರದ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದನ್ನು ಮೆಚ್ಚುತ್ತೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಚಾಮರಾಜ ವಿಧಾನಸಭಾಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಇದ್ದರು.












Click it and Unblock the Notifications