ವರುಣಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ; ಇದೇ ನನ್ನ ಕೊನೇ ಚುನಾವಣೆ ಎಂದ ಮಾಜಿ ಸಿಎಂ
ಮೈಸೂರು, ಏಪ್ರಿಲ್ 19: 2023ರ ಕರ್ನಾಟಕ ವಿಧಾನಸಾಭ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಮೈಸೂರು ಜಿಲ್ಲೆ ವರುಣಾ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಬುಧವಾರ, ಏಪ್ರಿಲ್ 19) ನಾಮಪತ್ರ ಸಲ್ಲಿಸಿದರು.
ನಂಜನಗೂಡಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ವೇಳೆ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮೈಸೂರು ಜಿಲ್ಲೆಯ ಸ್ಥಳಿಯ ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಬುಧವಾರ ಬೆಳಿಗ್ಗೆ ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಗೆ ತೆರಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮನೆ ದೇವರು ಸಿದ್ದರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಆ ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಹಾಗೂ ಉತ್ತನಹಳ್ಳಿಯ ತ್ರಿಪುರಸುಂದರಿ ದೇವಿಗೂ ಪೂಜೆ ಸಲ್ಲಿಸಿದರು.
ಬಳಿಕ ತಾಲ್ಲೂಕು ಕೇಂದ್ರ ನಂಜಗೂಡಿನಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇದೇ ನನಗೆ ಕೊನೆಯ ಚುನಾವಣೆ, ಹಾಗಾಗಿ ಬಹುಮತದಿಂದ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

"ನಾನು ಕೊನೆಯ ಬಾರಿಗೆ ಚುನಾವಣೆ ಎದುರಿಸುತ್ತಿದ್ದೇನೆ. ಆಮೇಲೆ ಯತೀಂದ್ರ, ಧವನ್ ರಾಕೇಶ್ ಇದ್ದಾರೆ. ಮೊಮ್ಮಗ ಧವನ್ ರಾಜಕೀಯಕ್ಕೆ ಬರಲು ಇನ್ನೂ 8 ವರ್ಷ ಬೇಕು. ಅವನ ಓದು ಮುಗಿದ ನಂತರ ರಾಜಕಾರಣಕ್ಕೆ ಬರುತ್ತಾನೆ. ರಾಕೇಶ್ ಮೇಲೆ ಇದ್ದ ಪ್ರೀತಿಯನ್ನು ಅವನ ಮಗನ ಮೇಲೂ ತೋರಿಸುತ್ತಿದ್ದೀರಿ. ನಿಮಗೆ ಧನ್ಯವಾದಗಳು," ಎಂದು ಸಿದ್ದರಾಮಯ್ಯ ತಿಳಿಸಿದರು.
"ಬಿಜೆಪಿ ಪಕ್ಷದವರು ಬೆಂಗಳೂರಿನ ನಿವಾಸಿ ಸೋಮಣ್ಣನನ್ನು ಕರೆದುಕೊಂಡು ಬಂದು ವರುಣಾ ಕ್ಷೇತ್ರಕ್ಕೆ ನಿಲ್ಲಿಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಭಾರತಿ ಶಂಕರ್ನನ್ನು ಕಣಕ್ಕೆ ಇಳಿಸಿರುವುದು ದಲಿತ ಮತಗಳನ್ನು ವಿಭಜಿಸುವ ಷಡ್ಯಂತ್ರವಾಗಿದೆ. ನನ್ನನ್ನು ಸೋಲಿಸಲು ಬಿಜೆಪಿ-ಜೆಡಿಎಸ್ ಪಕ್ಷಗಳು ಷಡ್ಯಂತ್ರ ರೂಪಿಸಿವೆ," ಎಂದು ಕಿಡಿಕಾರಿದರು.

ಬಿಜೆಪಿ ಪಕ್ಷದಲ್ಲಿ ಹಿರಿಯರಿಗೆ ಗೌರವವಿಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿದರು. ಇಡೀ ರಾಜ್ಯದಲ್ಲಿ ಈಗ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ವರುಣಾ ಜನತೆಗೆ ಎಷ್ಟು ಕೋಟಿ ಕೊಟ್ಟರೂ ಅದನ್ನು ಕಾಲ ಕಸದಂತೆ ಕಾಣುತ್ತಾರೆ ಅನ್ನುವುದು ನನಗೆ ಗೊತ್ತಿದೆ.
ನನ್ನ ಕೊನೆಯ ಚುನಾವಣೆ ಆಗಿದೆ. ಮುಂದಿನ ಬಾರಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಹಾಗಾಗಿ ಈ ಬಾರಿ 1 ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರಲ್ಲಿ ಕೇಳಿಕೊಂಡರು.












Click it and Unblock the Notifications