ಕೆ.ಮರೀಗೌಡ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್!
ಬೆಂಗಳೂರು, ಆಗಸ್ಟ್ 02 : ಮೈಸೂರು ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್ನಲ್ಲಿ ಆಗಸ್ಟ್ 3ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಬೇಕಿತ್ತು.
ಜಿಲ್ಲಾಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಕೆ.ಮರೀಗೌಡ ಅವರು ಮೈಸೂರು ಜೆಎಂಎಫ್ಸಿ ಕೋರ್ಟ್ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ಆದ್ದರಿಂದ, ಅವರು, ಹೈಕೋರ್ಟ್ ಮೆಟ್ಟಿಲೇರಿದ್ದರು.[ಮರೀಗೌಡನ ಬಂಧನಕ್ಕಾಗಿ ಮೈಸೂರಲ್ಲಿ ಹಾರಿತು ಗಾಳಿಪಟ!]
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಮರೀಗೌಡ ಸೋಮವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಲಾಗಿತ್ತು.[ಜಿಲ್ಲಾಧಿಕಾರಿಗೆ ಧಮ್ಕಿ, ಸಿದ್ದರಾಮಯ್ಯ ಮೌನವೇಕೆ?]
ಆಗಸ್ಟ್ 1ರ ಸೋಮವಾರ ಸಂಜೆ ಮರೀಗೌಡ ಅವರ ಜಾಮೀನು ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಶ್ರೀನಿವಾಸ ಗೌಡ ಅವರು ಹಿಂದೆ ಸರಿದಿದ್ದರು. ಆಗಸ್ಟ್ 2ರ ಮಂಗಳವಾರ ಮರೀಗೌಡ ಅವರು ತಮ್ಮ ಅರ್ಜಿಯನ್ನು ವಾಪಸ್ ಪಡೆದರು....[ಮರೀಗೌಡರಿಗೆ ಬಂಧನ ಭೀತಿ]
ಜಿಲ್ಲಾಧಿಕಾರಿಗಳು ದೂರು ನೀಡಿದ್ದಾರೆ
ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರ ವಿರುದ್ಧ ಮೈಸೂರು ಜಿಲ್ಲಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ನಜರಬಾದ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾದ ದಿನದಿಂದ ಮರೀಗೌಡ ಅವರು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು
ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಮರೀಗೌಡ ಅವರು ಸೋಮವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪೊಲೀಸರ ಮುಂದೆ ಶರಣಾದರೆ ಅವಕಾಶ ನೀಡುವುದಾಗಿ ಕೋರ್ಟ್ ಹೇಳಿತ್ತು. ಆದರೆ, ಮರೀಗೌಡ ಪರ ವಕೀಲರು ಇದಕ್ಕೆ ಒಪ್ಪದ ಕಾರಣ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಲಾಗಿತ್ತು.
ಜಡ್ಜ್ ಹಿಂದೆ ಸರಿದಿದ್ದರು
ಸೋಮವಾರ ಮರೀಗೌಡ ಅವರ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶ್ರೀವಾಸ ಗೌಡ ಅವರು ಅರ್ಜಿಯ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಿದ್ದರು ಮತ್ತು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ಅರ್ಜಿ ವಜಾಗೊಳ್ಳುವ ಸಾಧ್ಯತೆ
ಮೈಸೂರು ಜೆಎಂಎಫ್ಸಿ ಕೋರ್ಟ್ಗೆ ಮರೀಗೌಡ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಆದ್ದರಿಂದ, ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ನಲ್ಲಿಯೂ ಅರ್ಜಿ ವಜಾಗೊಳ್ಳುವ ಸಾಧ್ಯತೆ ಇದೆ. ಇದರ ಬಗ್ಗೆ ಸುಳಿವು ಅರಿತ ಅವರು ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ಇನ್ನೂ ಸಿಕ್ಕಿಲ್ಲ ಮರೀಗೌಡ
ಜುಲೈ 4ರ ನಂತರ ಮರೀಗೌಡ ಅವರು ನಾಪತ್ತೆಯಾಗಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೇರಳಕ್ಕೂ ಪೊಲೀಸರ ತಂಡ ಹೋಗಿ ಹುಡುಕಾಟ ನಡೆಸಿದೆ. ಆದರೆ, ಮರೀಗೌಡ ಅವರು ಇದುವರೆಗೂ ಪತ್ತೆಯಾಗಿಲ್ಲ. ತಮ್ಮ ಪರಮಾಪ್ತರಾದ ಮರೀಗೌಡ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದವು.