ಪುಸ್ತಕ ರೂಪದಲ್ಲಿ ಸುಳ್ವಾಡಿ ವಿಷ ಪ್ರಸಾದ, ಕನಗನಮರಡಿ ಬಸ್ ದುರಂತ
ಮೈಸೂರು, ಜುಲೈ 20: ಕಳೆದ ವರ್ಷದ ಡಿಸೆಂಬರ್ ನೆನೆಸಿಕೊಂಡರೆ ಸಾಕು, ದುರಂತದ ಚಿತ್ರಗಳು ಕಣ್ಮುಂದೆ ಹಾದು ಹೋಗುತ್ತವೆ. ಮಂಡ್ಯ - ಮೈಸೂರು ಭಾಗದ ಜನರಿಗೆ 2018ರ ಡಿಸೆಂಬರ್ ಅಕ್ಷರಶಃ ಕರಾಳ ತಿಂಗಳಾಗಿತ್ತು. ಇದಕ್ಕೆ ಕಾರಣ, ಮಂಡ್ಯದ ಪಾಂಡವಪುರ ಸಮೀಪದ ಕನಗನಮರಡಿ ಬಸ್ ಅಪಘಾತ ಹಾಗೂ ಸುಳ್ವಾಡಿ ಕಿಚ್ಚುಗತ್ತು ಮಾರಮ್ಮನ ದೇವಸ್ಥಾನದ ವಿಷ ಪ್ರಸಾದ ದುರಂತ.
ಈ ಎರಡೂ ಘಟನೆಗಳನ್ನು ಅತಿ ಹತ್ತಿರದಿಂದ ಕಂಡ ಮೈಸೂರು ಪತ್ರಕರ್ತ ರವಿ ಪಾಂಡವಪುರ ಅವರು ಈ ದುರಂತದ ವಾಸ್ತವತೆಯನ್ನು ಪುಸ್ತಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ವಿಷಪ್ರಸಾದ ದುರಂತ ವಿವರಿಸುವ ಪುಸ್ತಕ 'ಅಯ್ಯೋದ್ಯಾವ್ರೆ' 128 ಪುಟಗಳದ್ದಾಗಿದೆ. ಕನಗನಮರಡಿ ದುರಂತ ಹೇಳುವ 'ರೈಟ್, ರೈಟ್' 88 ಪುಟಗಳ ಪುಸ್ತಕವಾಗಿದೆ.

ಸುಳ್ವಾಡಿ ವಿಷಪ್ರಸಾದ ಪ್ರಕರಣ ದೇಶದಲ್ಲಿಯೇ ಮೊದಲು ಹಾಗೂ ಕನಗನಮರಡಿ ಬಸ್ ಅಪಘಾತವೂ ಈ ಹಿಂದೆ ಉಂಡಬತ್ತಿ ಕೆರೆಗೆ ಟೆಂಪೋ ಉರುಳಿ 33 ಜನ ಸಾವಿಗೀಡಾಗಿದ್ದದನ್ನು ನೆನಪಿಗೆ ತಂದಿತು. ಈ ಎರಡೂ ಪ್ರಕರಣಗಳು ದಿನ ಕಳೆದಂತೆ ಜನರಿಗೆ ಮರೆತು ಹೋಗುತ್ತದೆ.

ನೆನಪಿನಲ್ಲಿಟ್ಟುಕೊಳ್ಳುವ ಕರಾಳ ದುರಂತ ಇದಾದ್ದರಿಂದ ಪುಸ್ತಕ ರೂಪಕ್ಕೆ ಇಳಿಸಿದ್ದೇನೆ. ಪುಸ್ತಕ ಬರೆಯಲು ಮುಂದಾದಾಗ ಅನೇಕ ಸವಾಲುಗಳು ಎದುರಾದವು. ಪೊಲೀಸರು, ಜಿಲ್ಲಾಡಳಿತವಾಗಲೀ ಯಾರೂ ಮಾಹಿತಿ ನೀಡಲು ಮುಂದಾಗಲಿಲ್ಲ. ಆರೋಪಿಗಳು ಯಾರು? ಅವರ ಹಿನ್ನೆಲೆ ಏನು ? ಸಾಲೂರು ಮಠಕ್ಕೂ ಸುಳ್ವಾಡಿ ಮಾರಮ್ಮನ ದೇಗುಲಕ್ಕೂ ನಂಟೇನು ? ಪ್ರಕರಣ ಘಟಿಸಿದ್ದು ಏಕೆ ? ಸತ್ತವರು ಯಾರು, ಕುಟುಂಬದ ಸ್ಥಿತಿ ಹೇಗಿದೆ? ಎಲ್ಲವೂ ಗೋಜಲುಮಯವಾಗಿತ್ತು. ಅದನ್ನು ಹೊರ ತೆಗೆಯಲೇಬೇಕೆಂಬ ಹಠ ತೊಟ್ಟು ಪುಸ್ತಕ ಬರೆದೆ' ಎಂದು ಹೇಳಿಕೊಳ್ಳುತ್ತಾರೆ ರವಿ ಪಾಂಡವಪುರ.












Click it and Unblock the Notifications