ಜೆಡಿಎಸ್ ನ ಪ್ರಭಾವಿ ನಾಯಕ ಜಿಟಿ ದೇವೇಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ
Recommended Video
ಮೈಸೂರು, ಆಗಸ್ಟ್ 4: ಮಾಜಿ ಸಚಿವ- ಜೆಡಿಎಸ್ ನ ಹಿರಿಯ ನಾಯಕರಾದ ಜಿ. ಟಿ. ದೇವೇಗೌಡ ಅವರು ಭಾನುವಾರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 69 ವರ್ಷ ವಯಸ್ಸಿನ ಜಿಟಿಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಲುಣಿಸಿದ್ದರು.
ಮೈತ್ರಿ ಸರಕಾರದ ಪತನ ಇನ್ನೂ ಯಾರ್ಯಾರ ರಾಜಕೀಯ ನಿವೃತ್ತಿಗೆ ಕಾರಣ ಆಗುತ್ತದೋ? ಏಕೆಂದರೆ, ಸ್ವತಃ ಎಚ್. ಡಿ. ಕುಮಾರಸ್ವಾಮಿ ಆ ಬಗ್ಗೆ ಮಾತನಾಡಿದ್ದಾರೆ. ಇನ್ನು ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್, ಎಸ್. ಟಿ. ಸೋಮಶೇಖರ್ ರಿಂದಲೂ ಇದೇ ಮಾತು ಬಂದಾಯಿತು.
ಮೈಸೂರಿನಲ್ಲಿ ಭಾನುವಾರ ಮಾಧ್ಯಮದವರ ಜತೆಗೆ ಮಾತನಾಡಿದ ಜಿ. ಟಿ. ದೇವೇಗೌಡ, ಐವತ್ತು ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಆದರೆ ಈಗಿನ ಸ್ಥಿತಿಯಲ್ಲಿ ರಾಜಕಾರಣ ಮಾಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ಎಚ್. ಡಿ. ದೇವೇಗೌಡರು, ಕುಮಾರಸ್ವಾಮಿ ನನ್ನ ಪಾಲಿಗೆ ದೇವರಿದ್ದಂತೆ. ಇಬ್ಬರಿಗೂ ನನ್ನ ನಿರ್ಧಾರ ತಿಳಿಸಿದ್ದೀನಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ತಂದುಕೊಟ್ಟ ಮತದಾರರಿಗೆ ಕೃತಜ್ಞತೆ ತಿಳಿಸುವುದಕ್ಕೆ ಕೂಡ ನನ್ನಿಂದ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಆದರೆ, ಜಿಟಿಡಿ ಆಪ್ತ ಮೂಲಗಳು ಹೇಳುವುದೇ ಬೇರೆ. ಜಿ. ಟಿ. ದೇವೇಗೌಡರನ್ನು ಜೆಡಿಎಸ್ ನಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ. ದೋಸ್ತಿ ಸರಕಾರದಲ್ಲಿ ನೀಡಿದ್ದ ಖಾತೆ ಬಗ್ಗೆಯೂ ಅವರಿಗೆ ಅಸಮಾಧಾನ ಇತ್ತು. ಈ ಎಲ್ಲ ಕಾರಣದಿಂದ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
"ಐವತ್ತು ವರ್ಷದಿಂದ ರಾಜಕಾರಣ ನೋಡಿದ್ದೇನೆ. ನನ್ನ ನೋವು ಏನು ಎಂದು ದೇವರಿಗೆ ಮಾತ್ರ ಗೊತ್ತು. ಬಿಜೆಪಿಯಲ್ಲಿ ನನಗೆ ಹಲವಾರು ಸ್ನೇಹಿತರಿದ್ದಾರೆ. ನಾನು ಚುನಾವಣೆಯಲ್ಲಿ ಸೋತಾಗಲೂ ಯಡಿಯೂರಪ್ಪ ಗೃಹ ಮಂಡಳಿ ಅಧ್ಯಕ್ಷ ಹುದ್ದೆ ನೀಡಿದ್ದರು. ನಾನು ಈಗ ಬಿಜೆಪಿಗೆ ಹೋಗುವ ತೀರ್ಮಾನ ಮಾಡಿಲ್ಲ. ಕೆಲವು ಕಾರ್ಯಕರ್ತರು ಆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ. ರಾಜಕೀಯದಲ್ಲಿ ನಾನು ಅನುಭವಿಸಿರುವ ನೋವು ನನಗೆ ಮಾತ್ರ ಗೊತ್ತು. ನಾನು ಯಾರ ಹಂಗಿನಲ್ಲಿ ಬದುಕುತ್ತಿಲ್ಲ. ನನಗೆ ಯಾರೂ ರಾಜಕೀಯ ಗುರುಗಳಿಲ್ಲ" ಎಂದು ಅವರು ಹೇಳಿದ್ದಾರೆ.












Click it and Unblock the Notifications