ಜೆಡಿಎಸ್ ಪಕ್ಷಕ್ಕೆ ದಿಕ್ಕು ದಿಸೆಯಿಲ್ಲ: ವ್ಯಂಗ್ಯವಾಡಿದ ಆರ್ ಅಶೋಕ್
ಮೈಸೂರು, ಜುಲೈ 1: ಪಕ್ಷ ಸಂಘಟನೆಗೆ ಪಾದಯಾತ್ರೆ ಮಾಡುತ್ತೇವೆ ಎನ್ನುವ ಜಾತ್ಯತೀತ ದಳದ ಮುಖಂಡರ ಕಥೆ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗಾಗಿದೆ. ಪಕ್ಷದ ದಂಡ ನಾಯಕ ದೇವೇಗೌಡರೇ ಸೋತಿದ್ದಾರೆ. ಇದರಿಂದಾಗಿ ಪಕ್ಷಕ್ಕೆ ದಿಕ್ಕು ದೆಸೆ ಇಲ್ಲದಂತಾಗಿದೆ. ಈಗ ಏನು ಮಾಡಿದರೂ ಪ್ರಯೋಜನವೇನು ಎಂದು ಬಿಜೆಪಿ ಶಾಸಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು, ತಮಗೆ ವಯಸ್ಸಾಗಿದೆ, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುತ್ತಾರೆ. ಆದರೆ ಅವರು ಸ್ಪರ್ಧೆ ಮಾಡೇ ಮಾಡುತ್ತಾರೆ. ದೇವೇಗೌಡರು ಸ್ಪರ್ಧಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ದೇವೇಗೌಡರದ್ದು ಗೂಗ್ಲಿ ಬೌಲಿಂಗ್ ಸ್ಟೈಲು. 50 ವರ್ಷಗಳ ಹಿಂದಿನ ರಾಜಕೀಯ ಪಟ್ಟುಗಳನ್ನು ಅವರ ಹಾಕುತ್ತಿದ್ದಾರೆ. ಆದರೆ ಅವರ ವರಸೆಗಳು ಈಗ ನಡೆಯುವುದಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ಜನ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಾಮ ಹಾಕಿಸಿಕೊಂಡ ಮೇಲೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ಆದರೆ ಅಧಿಕಾರದ ಸ್ವಾರ್ಥ ಸಾಧನೆಗಾಗಿ ಸರ್ಕಾರ ನಡೆಸುತ್ತಿದ್ದಾರೆ. ಇರುವಷ್ಟು ದಿನ ಇದ್ದು ಬಿಡೋಣ ಎಂಬಂತೆ ಆಡಳಿತ ನಡೆಸುತ್ತಿದ್ದಾರೆ. ಸರ್ಕಾರ ನಡೆಸುವ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ. ನಾವು ಸರ್ಕಾರವನ್ನು ರಚಿಸುತ್ತೇವೆ ಎಂದರು.

ಜನರ ತೆರಿಗೆ ಹಣದಿಂದ ನಾವು ಅನ್ನ ತಿನ್ನುತ್ತಿದ್ದೇವೆಯೇ ಹೊರತು ಸಿದ್ದರಾಮಯ್ಯ ಅವರ ಮನೆಯಿಂದ ತಂದ ಹಣದಿಂದಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಅಕ್ಕಿ ಕೊಟ್ಟೆ, ಹಾಲು ಕೊಟ್ಟೆ ಎಂದು ತಿರುಗುತ್ತಿದ್ದಾರೆ. ಇವರೇನು ಅಮೆರಿಕ, ಜಪಾನ್ ದೇಶದಿಂದ ಹಣ ತಂದುಕೊಡುತ್ತಿದ್ದಾರಾ ಅಥವಾ ಅವರ ಮನೆಯಿಂದ ಹಣ ತಂದು ಕೊಡುತ್ತಿದ್ದರಾ? ಜನರ ತೆರಿಗೆಯಿಂದ ಬಂದ ಹಣದಲ್ಲಿ ಕೊಡುತ್ತಿದ್ದಾರೆ. ಹೀಗಿದ್ದರೂ ನಾನು ಕೊಟ್ಟೆ ನಾನು ಕೊಟ್ಟೆ ಎಂದು ಹೇಳುವುದಕ್ಕೆ ಅವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.











Click it and Unblock the Notifications