ಕೋಲಾರದಲ್ಲಿ ನ.1ರಿಂದ ಪಂಚರತ್ನ ರಥಯಾತ್ರೆ, 123 ಸ್ಥಾನ ಗೆಲ್ಲುವ ಗುರಿ: ಎಚ್.ಡಿ.ಕುಮಾರಸ್ವಾಮಿ
ಮೈಸೂರು, ಅಕ್ಟೋಬರ್ 19: ದೇಶದಲ್ಲೇ ಒಂದು ಚುನಾಯಿತ ಸರಕಾರ ಯಾವ ರೀತಿ ಕಾರ್ಯಕ್ರಮಗಳನ್ನು ಕೊಡಬಹುದು ಎಂಬುದನ್ನು ಜೆಡಿಎಸ್ ಪಕ್ಷ ಪಂಚರತ್ನ ಕಾರ್ಯಕ್ರಮದ ಮೂಲಕ ರಾಜ್ಯದ ಜನತೆಗೆ ತಿಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ 2 ದಿನಗಳ ಕಾಲ ನಡೆಯುತ್ತಿರುವ ಜೆಡಿಎಸ್ ಸಮಾಲೋಚನಾ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಪಂಚರತ್ನ ರಥಯಾತ್ರೆಯ ಸಿಡಿ ಬಿಡುಗಡೆ ಮಾಡಿದರು.
'ಉಚಿತ ಶಿಕ್ಷಣ, ಉಚಿತ ಆರೋಗ್ಯ, ಪ್ರತಿ ಕುಟುಂಬಕ್ಕೆ ಉದ್ಯೋಗ, ವಸತಿ ಸೌಲಭ್ಯವನ್ನು ಒದಗಿಸಿಕೊಡುವುದು ಪಂಚರತ್ನ ಯೋಜನೆಯ ಉದ್ದೇಶಗಳಾಗಿವೆ' ಎಂದರು.
ಇತ್ತೀಚಿನ ದಿನಗಳಲ್ಲಿ ಮಳೆ ಅನಾಹುತಗಳು, ಬೆಲೆಕುಸಿತದಿಂದ ಕಂಗಾಲಾಗಿರುವ ರೈತರ ಬದುಕಿಗೆ ನೆರವಾಗುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಪ್ರತಿಕುಟುಂಬಕ್ಕೆ ಉದ್ಯೋಗ ಯೋಜನೆಯಲ್ಲಿ ಸರಕಾರಿ ಕೆಲಸವೇ ಎಂದು ಏನಿಲ್ಲ, ಸ್ವಂತ ಉದ್ಯೋಗ ಮಾಡಲು ಸರಕಾರದಿಂದಲೇ ಯುವಕರಿಗೆ ಆರ್ಥಿಕ ಬಲ ತುಂಬಲಿದ್ದೇವೆ. ಕೊನೆಯದಾಗಿ ಪ್ರತಿಕುಟುಂಬಕ್ಕೆ ವಸತಿ ಸೌಲಭ್ಯವನ್ನು ಒದಗಿಸಿಕೊಡುವುದು ನಮ್ಮ ಪಂಚರತ್ನ ಯೋಜನೆಯ ಕಾರ್ಯಕ್ರಮಗಳಾಗಿವೆ ಎಂದು ವಿವರಿಸಿದರು.

ಮುಳಬಾಗಿಲಿನಿಂದ ಪಂಚರತ್ನ ರಥಯಾತ್ರೆ ಆರಂಭ
ಈ ಪಂಚರತ್ನ ಯೋಜನೆಗಳನ್ನು ಮುಂದಿನ ಆರು ತಿಂಗಳ ಕಾಲ ರಾಜ್ಯದ ಪ್ರತಿ ಮನೆಮನೆಗಳಿಗೆ ತಲುಪಿಸುವ ಉದ್ದೇಶವನ್ನು ಪಂಚರತ್ನ ರಥಯಾತ್ರೆ ಹೊಂದಿದೆ. ನವೆಂಬರ್ 1 ರಿಂದ (ಕನ್ನಡ ರಾಜ್ಯೋತ್ಸವ ದಿನ) ರಥಯಾತ್ರೆಗೆ ಚಾಲನೆ ನೀಡಲಿದ್ದೇವೆ. ಕೋಲಾರದ ಮುಳಬಾಗಿಲಿನ ಗಣೇಶ ಮತ್ತು ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇವರ ಅನುಗ್ರಹ ಪಡೆದು ರಥಯಾತ್ರೆ ಪ್ರಾರಂಭಿಸಲಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಯಾವ ಪಕ್ಷದ ಜೊತೆ ಹೊಂದಾಣಿಕೆಯಿಲ್ಲ
ಈ ಪಂಚರತ್ನ ಯೋಜನೆ ಮತ ಸೆಳೆಯಲು ಅಲ್ಲ. ಮತ ಪಡೆಯುವ ಉದ್ದೇಶ, ಅಧಿಕಾರ ಪಡೆಯುವ ಹಾಗೂ ಸಿಎಂ ಆಗುವ ಉದ್ದೇಶ ನನಗಿಲ್ಲ. ಈಗಾಗಲೇ 2 ಬಾರಿ ಸಿಎಂ ಆಗಿದ್ದೇನೆ. ನನ್ನ ಉದ್ದೇಶ ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕು ಎಂಬ ನಿಟ್ಟಿನಲ್ಲಿ ಮತ ಕೇಳುತ್ತೇವೆ. ನೊಂದ ಜನಾಂಗಕ್ಕೆ ಸಹಾಯ ಮಾಡಬೇಕು ಎಂಬ ಆಶಯ ಹೊಂದಿದ್ದೇನೆ. ಜೆಡಿಎಸ್ ಈ ಬಾರಿ ಎಲ್ಲಾ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುತ್ತದೆ. ಈಗಾಗಲೇ ಜೆಡಿಎಸ್ನ 126 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದೇವೆ. ಖಂಡಿತ ಈ ಬಾರಿ 123 ಸ್ಥಾನಗಳ ಗುರಿ ಮುಟ್ಟುವ ವಿಶ್ವಾಸವಿದ್ದು, ಯಾರ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ
ಸಿಎಂ ಬೊಮ್ಮಾಯಿ ಅವರು ಸಿದ್ದರಾಮಯ್ಯ ಕಾಲದ ಹಗರಣಗಳ ಬಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿಗೆ ದಾಖಲೆಗಳನ್ನು ಕಳುಹಿಸಿದ್ದೇನೆ ಎಂದಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 'ಬಸವರಾಜ ಬೊಮ್ಮಾಯಿ ಅವರು ರಾಹುಲ್ ಗಾಂಧಿಗೆ ದಾಖಲೆ ಕಳುಹಿಸುವುದನ್ನು ಬಿಟ್ಟು, ಧಮ್ಮಿದ್ದರೆ ತಮ್ಮ ಸರ್ಕಾರದಿಂದಲೇ ತನಿಖೆ ಮಾಡಿಸಲಿ' ಎಂದು ಸವಾಲು ಹಾಕಿದರು.
ಇನ್ನು ಬೆಂಗಳೂರು ನಗರದ ರಸ್ತೆಯ ಗುಂಡಿಗಳಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯವು ಛೀಮಾರಿ ಹಾಕಿದ್ದರೂ ಸರಕಾರಕ್ಕೆ ಪಾಪ ಪ್ರಜ್ಞೆ ಇಲ್ಲ. ಜನ ಪ್ರತಿನಿಧಿಗಳು, ಮಂತ್ರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ. ಸಿಎಂಗೆ ಕೇಳಿದರೆ ಇನ್ನು ಮಾಹಿತಿ ಪಡೆಯುತ್ತಿದ್ದೇನೆ ಎನ್ನುತ್ತಿದ್ದಾರೆ. ಇಂತಹ ಸರಕಾರ ಈ ದೇಶದ ಇತಿಹಾಸದಲ್ಲೇ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಅನುಮತಿ ಪಡೆದೇ ಗೈರಾಗಿದ್ದಾರೆ ಎಂದ ಎಚ್ಡಿಕೆ
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಾಗಾರಕ್ಕೆ ಸ್ಥಳೀಯ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಗೈರಾಗಿದ್ದರು. ಶಾಸಕ ಜಿ.ಟಿ.ದೇವೇಗೌಡ ಅವರು ನನ್ನಿಂದ ಅನುಮತಿ ಪಡೆದೇ ಗೈರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗುವುದಾಗಿ ತಿಳಿಸಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.












Click it and Unblock the Notifications