ಮೈಸೂರು: ತಮ್ಮ ನಾಯಕರ ಗೆಲುವಿಗಾಗಿ ಅಯ್ಯಪ್ಪನ ಮೊರೆ ಹೋದ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು
ಮೈಸೂರು, ಡಿಸೆಂಬರ್, 13: ಮುಂದಿನ ವಿಧಾನಸಭೆ ಚುನಾವಣೆಗೆ ಮೂರು ಪಕ್ಷಗಳು ಈಗಿನಿಂದಲೇ ತಯಾರಿ ನಡೆಸುತ್ತಿದ್ದರೆ, ಕಾರ್ಯಕರ್ತರು ತಮ್ಮ ನಾಯಕನ ಗೆಲುವಿಗೆ ಅಯ್ಯಪ್ಪನ ಮೊರೆ ಹೋಗುತ್ತಿದ್ದಾರೆ.
ಡಿಸೆಂಬರ್, ಜನವರಿ ಬಂದರೆ ಸಾಕು ಅಯ್ಯಪ್ಪನ ದರ್ಶನ ಪಡೆಯಲು ಭಕ್ತರು ಶಬರಿಮಲೆಗೆ ಮಾಲೆ ಹಾಕಿಕೊಂಡು ಸಾಗರೋಪಾದಿಯಲ್ಲಿ ತೆರಳುತ್ತಾರೆ. ಆದರೆ, ಈ ಬಾರಿಯ ವಿಶೇಷ ಅಂದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇರಿಮುಡಿ ಜೊತೆ ತಮ್ಮ ನೆಚ್ಚಿನ ನಾಯಕರ ಫೋಟೋವನ್ನು ಕೊರಳಿನಲ್ಲಿ ತೂಗು ಹಾಕಿಕೊಂಡು ಅಯ್ಯಪ್ಪಸ್ವಾಮಿ ಮೊರೆ ಹೋಗುತ್ತಿದ್ದಾರೆ.
ರಾಜಕೀಯ ರಣರಂಗದಲ್ಲಿ ನಾನಾ ಕಸರತ್ತು
ಸಾಮಾನ್ಯವಾಗಿ ಚುನಾವಣೆ ಎಂದರೆ ಅಲ್ಲಿ ಜಿದ್ದಾಜಿದ್ದಿ ಪೈಪೋಟಿ ಕಂಡು ಬರುತ್ತಲೇ ಇರುತ್ತದೆ. ಈ ಬಾರಿ ರಾಜಕೀಯ ಎಂಬ ರಣರಂಗದಲ್ಲಿ ಹಾಲಿ ಶಾಸಕರ ಜೊತೆ ಹೊಸ ನಾಯಕರು ಗೆಲುವಿಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಕೆ.ಆರ್.ನಗರ ಕ್ಷೇತ್ರ ಹೈವೋಲ್ಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕಳೆದ ಬಾರಿ ಕೇವಲ 1,870 ಮತಗಳಿಂದ ಕಾಂಗ್ರೆಸ್ನ ರವಿಶಂಕರ್ ಜೆಡಿಎಸ್ನ ಸಾರಾ ಮಹೇಶ್ ಅವರಿಂದ ಪರಾಭವಗೊಂಡಿದ್ದರು. ಈ ಬಾರಿ ವರುಣಾದಂತೆಯೇ ಕೆ.ಆರ್.ಕ್ಷೇತ್ರವೂ ಕುತೂಹಲ ಮೂಡಿಸಿರುವ ಕ್ಷೇತ್ರವಾಗಿದೆ.

ನಾಯಕರ ಫೋಟೋ ಹಿಡಿದು ಅಯ್ಯಪ್ಪನ ಮೊರೆ
ಇನ್ನು ಜೆಡಿಎಸ್ ಕಾರ್ಯಕರ್ತರು ಈ ಬಾರಿಯೂ ಸಾರಾ ಮಹೇಶ್ ಗೆಲುವು ಸಾಧಿಸಲೆಂದು ಅವರ ಫೋಟೋವನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಅಯ್ಯಪ್ಪನ ಯಾತ್ರೆ ಮಾಡುತ್ತಿದ್ದಾರೆ. ಮತ್ತೊಂದೆಡೆ ರವಿಶಂಕರ್ ಬೆಂಬಲಿಗರು ಕೂಡ ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ಬೆಂಬಲಿಗರು ರವಿಶಂಕರ್ ಅವರ ಫೋಟೋ ಹಿಡಿದು ಅಯ್ಯಪ್ಪ ದೇವರ ದರ್ಶನ ಪಡೆಯುತ್ತಿದ್ದಾರೆ. ಸದ್ಯ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಾರಾ ಮಹೇಶ್ ಅವರು ಮತ್ತೊಮ್ಮೆ ಶಾಸಕನಾಗಲು ಹೊರಟಿದ್ದಾರೆ. ಕಳೆದ ಬಾರಿ ಸೋತಿರುವ ರವಿಶಂಕರ್ ಅನುಕಂಪದ ಆಧಾರದ ಮೇಲೆ ಮತ್ತೆ ಗೆಲುವಿಗೆ ನಿಂತಿದ್ದಾರೆ.
ಮಹಿಳಾ ಮತದಾರರೇ ಟಾರ್ಗೆಟ್ ಆದ್ರಾ?
ಚುನಾವಣೆ ದಿನಾಂಕವನ್ನು ಆಯೋಗ ಇನ್ನು ಘೋಷಣೆಯೇ ಮಾಡಿಲ್ಲ. ಆದರೆ, ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಹಳ್ಳಿಗಾಡಿನ ಮಹಿಳೆಯರನ್ನು ಹೆಚ್ಚು ಟಾರ್ಗೆಟ್ ಮಾಡಿ ಅವರ ಮತಗಳನ್ನು ಕಬಳಿಸಲು ನೋಡುತ್ತಿದ್ದಾರೆ. ಎಲೆ, ಅಡಿಕೆ ಮೇಲೆ ಚಿನ್ನ, ಅಡುಗೆ ತವಾ, ಕುಕ್ಕರ್ ನೀಡಿ ಮಹಿಳೆಯರನ್ನು ಸೆಳೆಯುವ ಕೆಲಸವೂ ಅಲ್ಲಲ್ಲಿ ನಡೆಯುತ್ತಿದೆ. ಹೀಗೆ ಚುನಾವಣೆಗೂ ಮುನ್ನವೇ ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ತಮ್ಮತ್ತ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ.












Click it and Unblock the Notifications