ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿದ ಐಟಿ ದಾಳಿ ಖಂಡನಾರ್ಹ: ಸಿದ್ದು
Recommended Video

ಮೈಸೂರು, ಆಗಸ್ಟ್ 30: 'ಕಾಂಗ್ರೆಸ್ ನಾಯಕರನ್ನೇ ಹುಡುಕಿ ಹುಡುಕಿ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿರುವುದು ಸರಿಯಲ್ಲ. ಇದು ಚುನಾವಣಾ ಸಂದರ್ಭದಲ್ಲಿ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆಪ್ತ, ಕೆಪಿಸಿಸಿ ಕಾರ್ಯದರ್ಶಿ ವಿಜಯ ಮುಳಗುಂದ ನಿವಾಸದ ಮೇಲೆ ಐಟಿ ದಾಳಿ ಪ್ರಕರಣ ಕುರಿತು ಮಾತನಾಡಿದ ಅವರು, 'ಐಟಿ ಅಧಿಕಾರಿಗಳ ಬಳಿ ಮಾಹಿತಿ ಇರುತ್ತೆ. ಅವರು ದಾಳಿ ಮಾಡಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕಾಂಗ್ರೆಸ್ ನಾಯಕರನ್ನೆ ಹುಡುಕಿ ಹುಡುಕಿ ದಾಳಿ ನಡೆಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ' ಎಂದರು.

ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನೆಹರು ಕುಟುಂಬದಲ್ಲಿ ಆಗಿರುವಷ್ಟು ಅಂತರ್ ಧರ್ಮೀಯ ವಿವಾಹಗಳು ಬೇರೆ ಎಲ್ಲಿಯೂ ಆಗಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧೀಜಿಯವರು ಅನ್ಯ ಧರ್ಮೀಯರನ್ನು ಮದುವೆಯಾಗಿದ್ದಾರೆ. ರಾಹುಲ್ ಗಾಂಧಿಗೆ ದಲಿತ ಕನ್ಯೆ ಕೊಡುವ ವಿಚಾರ ಈಗ ಅನವಶ್ಯಕ ಎಂದಿದ್ದಾರೆ. ಬಿಜೆಪಿ ನಾಯಕರಿಗೆ ಈ ಬಗ್ಗೆ ಪ್ರಶ್ನಿಸಲು ಯಾವುದೇ ರೀತಿಯ ನೈತಿಕತೆಯಿಲ್ಲ, ಬಿಜೆಪಿ ನಾಯಕರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಅಹವಾಲು ಸ್ವೀಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದ ಬಳಿ ನೂರಾರು ಮಂದಿ ಜಮಾಯಿಸಿ ಅಹವಾಲು ನೀಡಿದರು.
ಹಲವರು ಸಿ.ಎಂ ಸಿದ್ದರಾಮಯ್ಯ ನಿವಾಸದೊಳಕ್ಕೆ ಹೋಗಲು ಯತ್ನಿಸಿದ ವೇಳೆ ನೂಕುನುಗ್ಗಲು ಉಂಟಾಗಿತ್ತು. ಪರಿಸ್ಥಿತಿ ನಿಯಂತ್ರಿಸುವ ವೇಳೆ ಪೊಲೀಸ್ ಪೇದೆಯೋರ್ವರು ಅವಾಚ್ಯ ಶಬ್ದ ಬಳಕೆ ಮಾಡಿದರು. ಪೊಲೀಸ್ ಪೇದೆ ಅವಾಚ್ಯ ಶಬ್ದ ಬಳಸಿದ್ದರಿಂದ ಸಾರ್ವಜನಿಕರು ಕುಪಿತಗೊಂಡಿದ್ದರು. ಪೊಲೀಸ್ ಪೇದೆಯನ್ನು ಜನರು ತರಾಟೆಗೆ ತೆಗೆದುಕೊಂಡರು. ಬಳಿಕ ಪೊಲೀಸ್ ಪೇದೆ ಏನು ನಡೆದಿಲ್ಲವೇನೋ ಎಂಬಂತೆ ಸದ್ದಿಲ್ಲದೆ ಜಾಗ ಖಾಲಿ ಮಾಡಿದರು. ನೂರಾರು ಜನರಿಂದ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿಗಳು ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿದರು.












Click it and Unblock the Notifications