ಚೀನಾದಿಂದ ನಂಜನಗೂಡಿಗೆ ಕಂಟೇನರ್ ಮೂಲಕ ಪ್ರಯಾಣ ಬೆಳೆಸಿತ್ತಾ ಕೊರೊನಾ...
ಮೈಸೂರು, ಏಪ್ರಿಲ್ 06: ನಂಜನಗೂಡಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಲು ಕಾರಣವಾಗಿದ್ದ, ಜ್ಯುಬಿಲಿಯೆಂಟ್ ಜೆನರಿಕ್ಸ್ ಕಾರ್ಖಾನೆಯ ನೌಕರನಲ್ಲಿನ ಸೋಂಕಿನ ಮೂಲದ ಕುರಿತು ಎಲ್ಲೆಲ್ಲೂ ಚರ್ಚೆಯಾಗಿತ್ತು. ಈ ವ್ಯಕ್ತಿಯು ವಿದೇಶಕ್ಕೆ ಹೋಗದೇ ಇದ್ದರೂ ಕೊರೊನಾ ಸೋಂಕು ಈ ವ್ಯಕ್ತಿಗೆ ಹೇಗೆ ತಗುಲಿತು, ಸೋಂಕಿನ ಮೂಲ ಯಾವುದು ಎಂಬ ಕುರಿತು ಸಾಕಷ್ಟು ಚರ್ಚೆಗಳೂ ನಡೆದಿತ್ತು.
ನಂತರ, ಈ ವ್ಯಕ್ತಿಯ ಸ್ನೇಹಿತರೊಬ್ಬರು ಆಸ್ಟ್ರೇಲಿಯಾದಿಂದ ಬಂದಿದ್ದು, ಆ ಮೂಲಕವೇ ಕೊರೊನಾ ಸೋಂಕು ತಗುಲಿರಬಹುದು ಎಂಬ ಅಂದಾಜನ್ನೂ ಮಾಡಲಾಗಿತ್ತು. ಆದರೆ ಇದೀಗ ಈ ಪ್ರಕರಣಕ್ಕೆ ಹೊಸ ಆಯಾಮ ದೊರೆತಿದೆ. ಈ ಜೆನರಿಕ್ಸ್ ಕಾರ್ಖಾನೆಗೆ ಚೀನಾದಿಂದ ಕಚ್ಚಾವಸ್ತುಗಳನ್ನು ತರಿಸಿಕೊಳ್ಳಲಾಗಿದ್ದು, ಆ ಮೂಲಕ ಸೋಂಕು ತಗುಲಿರುವ ಅನುಮಾನ ವ್ಯಕ್ತಗೊಂಡಿದೆ. ಜೊತೆಗೆ ಈ ಸೋಂಕಿನ ಮೂಲದ ಕುರಿತು ತನಿಖೆಗೆ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಒತ್ತಾಯವನ್ನೂ ಮಾಡಿದ್ದಾರೆ. ಇಲ್ಲಿದೆ ಇನ್ನಷ್ಟು ವಿವರ...

"ತಪ್ಪಿತಸ್ಥರ ತಲೆದಂಡ ಆಗಬೇಕು"
ಈ ಕುರಿತು ತನಿಖೆ ನಡೆಯಬೇಕು, ತಪ್ಪಿತಸ್ಥರ ತಲೆದಂಡ ಆಗಬೇಕು. ಅಲ್ಲಿಯರೆಗೂ ಕಾರ್ಖಾನೆ ತೆರೆಯಲು ಬಿಡುವುದಿಲ್ಲ ಎಂದು ಶಾಸಕ ಹರ್ಷವರ್ಧನ್ ಜುಬಿಲಿಯೆಂಟ್ ಜನರಿಕ್ಸ್ ಕಾರ್ಖಾನೆ ವಿರುದ್ಧ ಕಿಡಿಕಾರಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಇಡೀ ನಂಜನಗೂಡು ಸಂಕಷ್ಟ ಅನುಭವಿಸುತ್ತಿದೆ. ಕನಿಷ್ಠ ಅವರ ವಿರುದ್ಧವಾದರೂ ಕ್ರಮ ಆಗಬೇಕು. ಅಲ್ಲಿವರೆಗೂ ಕಾರ್ಖಾನೆ ತೆರೆಯಲು ಬಿಡುವುದಿಲ್ಲ. ಜುಬಿಲಿಯೆಂಟ್ ಕಾರ್ಖಾನೆಯವರು ಅಂದರೆ ಜನ ಹೆದರಿಕೊಂಡು ಓಡುವ ಪರಿಸ್ಥಿತಿ ಇದೆ. ಇವರಿಂದ 900 ಜನ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಇದೆಲ್ಲದಕ್ಕೂ ಯಾರನ್ನು ಹೊಣೆ ಮಾಡಬೇಕು? ಎಂದು ದೂರಿದ್ದಾರೆ.

ಮಾರ್ಚ್ ವೇಳೆ ಚೀನಾದಿಂದ ಬಂದಿದ್ದ ಕಚ್ಚಾ ವಸ್ತು
ಜುಬಿಲಿಯಂಟ್ ಕಾರ್ಖಾನೆ ಪ್ರಕರಣ ತನಿಖೆಗೆ ಪ್ರತ್ಯೇಕ ಐಎಎಸ್ ಅಧಿಕಾರಿ ನೇಮಕ ಮಾಡಲು ಆಗ್ರಹ ವ್ಯಕ್ತವಾಗಿದೆ. ಬಡವರ ಮಕ್ಕಳನ್ನು ಜುಬಿಲಿಯಂಟ್ ಕಾರ್ಖಾನೆ ಬಾವಿಗೆ ತಳ್ಳಿದೆ ಎಂದು ಆರೋಪ ವ್ಯಕ್ತವಾಗಿದೆ. "ನಂಜನಗೂಡಿನಿಂದ ಮೊದಲು ಜುಬಿಲಿಯಂಟ್ ಕಾರ್ಖಾನೆ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ ಒಬ್ಬನಿಂದ ಇಷ್ಟೊಂದು ಜನರಿಗೆ ಬರಲು ಹೇಗೆ ಸಾಧ್ಯ? ಮಾರ್ಚ್ ವೇಳೆ ಚೀನಾದಲ್ಲಿ ಕೊರೊನಾ ಇದ್ದರೂ ಅಲ್ಲಿಂದ ಕಚ್ಚಾ ವಸ್ತು ತರಿಸಿದ್ದಾರೆ. ಅದನ್ನು ಕೋಲ್ಡ್ ಸ್ಟೋರೇಜ್ ನಿಂದ ತರಿಸಲಾಗಿತ್ತು. ಅದನ್ನು ತೆಗೆದುಕೊಂಡು ಬಂದವರು ಮೊದಲ ಸೋಂಕಿತ ಆಗಿದ್ದಾರೆ. ಈಗ ಕಾರ್ಖಾನೆಯಲ್ಲಿ ಕಚ್ಚಾ ವಸ್ತುಗಳ ಪರೀಕ್ಷೆ ನಡೆದು, ಅದನ್ನು ಮತ್ತೆ ಪುಣೆಗೆ ಕಳುಹಿಸಿದ್ದಾರೆ. ಇದೆಲ್ಲ ನೋಡಿದರೆ ಪ್ರಕರಣದಲ್ಲಿ ಸತ್ಯಾಂಶ ಮುಚ್ಚಿಡುವ ಕೆಲಸ ಆಗುತ್ತಿದೆ" ಎಂದು ದೂರಿದ್ದಾರೆ ಹರ್ಷವರ್ಧನ್. ಜುಬಿಲಿಯಂಟ್ ಕಾರ್ಖಾನೆ ಪ್ರಕರಣ ತನಿಖೆಗೆ ಐಎಎಸ್ ಅಧಿಕಾರ ನೇಮಕ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.

ಆಮದು ನಿಲ್ಲಿಸಿದ್ದರೆ ತಡೆಯಬಹುದಿತ್ತಾ ಸೋಂಕು?
ಚೀನಾದಲ್ಲಿ ಕೊರೊನಾದಿಂದ ಅಷ್ಟೆಲ್ಲ ಸಾವು-ನೋವು ಆಗುತ್ತಿದ್ದರೂ ಕಚ್ಚಾ ವಸ್ತು ಆಮದು ಮಾಡಿಕೊಳ್ಳಲಾಗಿದೆ. ಬಡ ಕಾರ್ಮಿಕರನ್ನು ಬಳಸಿಕೊಂಡು ಔಷಧಿ ಉತ್ಪಾದಿಸುವ ದುಸ್ಸಾಹಸ ನಡೆದಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕವೂ ಕಾರ್ಖಾನೆ ಕಾರ್ಯನಿರ್ವಹಿಸಿದೆ. ಸಮಯ ಪ್ರಜ್ಞೆ ತೋರಿ ಆಮದು ನಿಲ್ಲಿಸಿದ್ದರೆ ಭಾರಿ ಅನಾಹುತ ತಡೆಯಬಹುದಿತ್ತು. ಆದರೆ ಹಣದ ಆಸೆಗೆ ಕಾರ್ಖಾನೆ ಉತ್ಪಾದನೆ ಮುಂದುವರಿಸಿದೆ. ಅಗತ್ಯ ಸೇವೆ ಎನ್ನುವ ನೆಪವನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಚೀನಾದಿಂದ ನಂಜನಗೂಡಿಗೆ ಹೇಗೆ ಬಂದಿತ್ತು ಕೊರೊನಾ?
ಚೀನಾದಿಂದ ಕಂಟೈನರ್ ಮೂಲಕ ಕೊರೊನಾ ಬಂದಿದೆ ಎಂದು ಅಂದಾಜಿಸಲಾಗಿದೆ. ಚೀನಾದಿಂದ ಬಂದ ಔಷಧಿ ಬ್ಯಾಗ್ಗಳನ್ನೂ ಪರೀಕ್ಷಿಸಲಾಗಿದೆ. ಸಾಂಕೇತಿಕವಾಗಿ ಎರಡು ಬ್ಯಾಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎರಡೂ ಬ್ಯಾಗ್ನಲ್ಲೂ ಕೊರೊನಾ ವೈರಸ್ ಪತ್ತೆಯಾಗಿತ್ತು. ಚೀನಾದಿಂದ ಚೆನ್ನೈ, ಚೆನ್ನೈನಿಂದ ಬೆಂಗಳೂರು, ಬೆಂಗಳೂರಿನಿಂದ ನಂಜನಗೂಡಿಗೆ ಈ ಬ್ಯಾಗ್ ಗಳು ಬಂದಿದ್ದವು. ರಾಸಾಯನಿಕ ಪದಾರ್ಥ ತುಂಬಿದ್ದ ಪ್ಲಾಸ್ಟಿಕ್ ಕವರ್ ಮೇಲೆ ಕೊರೊನಾ ವೈರಸ್ ಇತ್ತಾ, ಅದರಿಂದಲೇ ಇಷ್ಟೆಲ್ಲಾ ಆಯಿತಾ ಎಂಬ ಅನುಮಾನವೂ ವ್ಯಕ್ತವಾಗಿದೆ. ಚೆನ್ನೈವರೆಗೂ ವಸ್ತುವಿನ ಗುಣಮಟ್ಟ ಪರೀಕ್ಷಿಸಿದ್ದವನಿಗೂ ಸೋಂಕು ಬಂದಿದ್ದು, ಆತ ನಂಜನಗೂಡಿನಲ್ಲೂ ಲೋಡಿಂಗ್, ಅನ್ಲೋಡಿಂಗ್ ಮಾಡಿಸಿದ್ದ ಎಂಬುದು ತಿಳಿದುಬಂದಿದೆ.












Click it and Unblock the Notifications