'ಮಹಾನಾಯಕ' ಯಾರೆಂದು ತನಿಖೆಯಿಂದ ಗೊತ್ತಾಗಲಿದೆ: ಸಚಿವ ಎಸ್.ಟಿ ಸೋಮಶೇಖರ್
ಮೈಸೂರು, ಮಾರ್ಚ್ 27: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಯುವತಿಯದ್ದು ಎನ್ನಲಾದ ಸಿಡಿ ಪ್ರಕರಣವನ್ನು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ನಡೆಸಿರುವ 'ಮಹಾನಾಯಕ' ಯಾರೆಂದು ತನಿಖೆಯಿಂದ ತಿಳಿಯಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ತಿಳಿಸಿದರು.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಕೈವಾಡದ ಹಿಂದಿರುವ ಮಹಾನಾಯಕ ಯಾರೆಂದು ಕರ್ನಾಟಕದ ಜನತೆಗೆ ಹಾಗೂ ನಮಗೂ ಕುತೂಹಲ ಇದೆ. ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ ಶಿವಕುಮಾರ್ ಅವರ ಹೆಸರು ಹರಿದಾಡುತ್ತಿದ್ದು, ಅದು ಅಚ್ಚರಿ ವಿಷಯವೇನಲ್ಲ. ಆದರೆ ಎಸ್ಐಟಿ ಅಧಿಕಾರಿಗಳು ನಡೆಸುವ ಹೆಚ್ಚಿನ ತನಿಖೆಯಿಂದ ಸತ್ಯಾಂಶವು ತಿಳಿಯಲಿದೆ ಎಂದು ಹೇಳಿದರು.
ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವವನ್ನು ಎಸ್ಐಟಿ ಅಧಿಕಾರಿಗಳು ಪತ್ತೆ ಹಚ್ಚಲಿದ್ದಾರೆ. ಇದಕ್ಕೆ ಸ್ಕ್ರಿಪ್ಟ್ ರಚಿಸಿದವರು, ನಿರ್ಮಾಪಕರು, ಸ್ಥಳ ಯಾವುದು ಎಂಬ ಎಲ್ಲಾ ವಿಚಾರಗಳನ್ನು ಪರಿಶೀಲಿಸಲು ವಿಧಾನಸಭೆಯಲ್ಲೂ ಹೇಳಿದ್ದೇವೆ. ಸದ್ಯದಲ್ಲೇ ಸತ್ಯಾಂಶ ಹೊರ ಬೀಳಲಿದೆ ಎಂದು ಮಾಹಿತಿ ನೀಡಿದರು.

ಸಿಡಿ ಪ್ರಕರಣಲ್ಲಿ ರಾಜಕಾರಣಿಗಳನ್ನೇ ಗುರಿ ಮಾಡಲಾಗುತ್ತದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸಂತ್ರಸ್ಥೆಯು ವಿಡಿಯೋ ಮೂಲಕ ಕೆಲವು ನಾಯಕರ ಹೆಸರೇಳಿದ್ದಾರೆ. ಸಂತ್ರಸ್ಥೆಗೆ ಯಾರಾದರೂ ಇಂತವರ ಹೆಸರೇಳಿ ಎಂದು ಹೇಳಿಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.
ಎಸ್ಐಟಿಯಿಂದ ನಿಷ್ಪಕ್ಷಪಾತ ತನಿಖೆ
ಭಾರತದಲ್ಲೇ ಕರ್ನಾಟಕ ಪೊಲೀಸರು ಸಮರ್ಥರಿದ್ದು, ರಾಜಕೀಯ ಒತ್ತಡಗಳಿಗೆ ಮಣಿಯದೆ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುತ್ತಾರೆ. ಎಸ್ಐಟಿಯಲ್ಲಿ ಉತ್ತಮವಾದ ಅಧಿಕಾರಿಗಳಿದ್ದು, ಸಂತ್ರಸ್ಥೆಗೆ ರಕ್ಷಣೆ ನೀಡಲಿದ್ದಾರೆ. ಸಂತ್ರಸ್ತೆಯು ಸೂಕ್ತ ಅನ್ನಿಸುವ ಸ್ಥಳದಲ್ಲಿ ಮಾಹಿತಿ ನೀಡಲು ಒಪ್ಪಿದರೆ, ಪೊಲೀಸರ ರಕ್ಷಣೆಯಲ್ಲಿ ತನಿಖೆ ನಡೆಯಲಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ರಕ್ಷಣೆ ನೀಡುವುದಿಲ್ಲ ಎಂಬುದು ಸುಳ್ಳು ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications