ವಿಷ ಪ್ರಸಾದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ಅರ್ಜಿ ಸಲ್ಲಿಸಿದ ವಕೀಲರು
ಮೈಸೂರು, ಜನವರಿ 24: ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ಮೂವರು ವಕೀಲರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಆರೋಪಿ ಪರವಾಗಿ ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಸಮೀಪದ ಪೊನ್ನಂಪೇಟೆಯ ವಕೀಲರು ಮುಂದೆ ಬಂದಿದ್ದಾರೆ. ಮೂವರ ಪೈಕಿ ಸುಧೀಶ್ ಮತ್ತು ಲೋಹಿತ್ ಎಂಬ ಇಬ್ಬರು ವಕೀಲರು ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಬಸವರಾಜ್ ಅವರ ಮುಂದೆ ಅರ್ಜಿ ಸಲ್ಲಿಸಿ ನಿನ್ನೆಯೇ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ನಿನ್ನೆ ಮಧ್ಯಾಹ್ನ 3ಕ್ಕೆ ಸಮಯ ನಿಗದಿ ಮಾಡಿದರು. ಆದರೆ ಆ ಸಂದರ್ಭದಲ್ಲಿ ವಕೀಲರು ಹಾಜರಿರಲಿಲ್ಲ. ಹಾಗಾಗಿ ವಿಚಾರಣೆಯನ್ನು ಜ.29ಕ್ಕೆ ಮುಂದೂಡಿದ್ದಾರೆ. ಪ್ರಕರಣದ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಅಂದೇ ಮುಕ್ತಾಯವಾಗಲಿದ್ದು , ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಈ ಪ್ರಕರಣದ ಆರೋಪಿಗಳ ಪರ ಯಾವೊಬ್ಬ ವಕೀಲರು ವಕಾಲತ್ತು ವಹಿಸುವುದಿಲ್ಲ ಎಂದು ಜಿಲ್ಲೆಯ ವಕೀಲರ ಸಂಘ ಘೋಷಿಸಿತ್ತು. ಅಲ್ಲದೇ ಮೈಸೂರಿನ ವಕೀಲರೊಬ್ಬರು ಮುಂದೆ ಬಂದಿದ್ದರಾದರೂ ಕೊನೆಗೆ ಅವರೂ ಹಿಂದೆ ಸರಿದರು.
ಈಗಾಗಲೇ ಒಬ್ಬ ವಕೀಲರನ್ನು ಕಳುಹಿಸಿರುವುದಾಗಿ ಆರೋಪಿ ಇಮ್ಮಡಿ ಸ್ವಾಮಿ ಅವರು ಇದೇ 16 ರಂದು ನ್ಯಾಯಾಧೀಶರ ಮುಂದೆ ಕೋರ್ಟ್ ಗೆ ಹಾಜರಾದ ಸಂದರ್ಭದಲ್ಲಿ ಹೇಳಿದ್ದರು. ಹತ್ತು ದಿನಗಳಲ್ಲಿ ವಕೀಲರನ್ನು ನೇಮಕ ಮಾಡಿಕೊಳ್ಳುವುದಾಗಿ ಉಳಿದ ಮೂವರು ಆರೋಪಿಗಳಾದ ಅಂಬಿಕಾ, ದೊಡ್ಡಯ್ಯ ಮತ್ತು ಮಾದೇಶ್ ಅವರು ನ್ಯಾಯಾಧೀಶರ ಮುಂದೆ ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.












Click it and Unblock the Notifications