ಬಿಜೆಪಿ ನಾಯಕರ ಕೊರಳಿಗೆ ಮತ್ತೊಂದು ಭೂ ಕಂಟಕ
ಮೈಸೂರು, ನ.14 : ಮೈಸೂರಿನಲ್ಲಿ ಭೂ ಹಗರಣವೊಂದು ಬೆಳಕಿಗೆ ಬಂದಿದ್ದು ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಡಿನೋಟಿಫಿಕೇಷನ್ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ದಾಖಲೆ ಬಿಡುಗಡೆ ಮಾಡಿದ್ದಾರೆ. ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ತಮ್ಮ ವಿದ್ಯಾಸಂಸ್ಥೆಗೆ 6 ಸೈಟ್ಗಳನ್ನು ಪಡೆದಿದ್ದಾರೆ ಎಂಬುದು ಆರೋಪವಾಗಿದೆ.
ಮೈಸೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ ಲಕ್ಷ್ಮಣ್, ಇನಕಲ್ ಮತ್ತು ವಿಜಯನಗರದಲ್ಲಿ ಆಸ್ಪತ್ರೆ, ಅಂಗನವಾಡಿ, ಪಶು ವೈದ್ಯಕೀಯ ಆಸ್ಪತ್ರೆಗೆ ಮೀಸಲಾಗಿಟ್ಟ ಜಾಗವನ್ನು ಗೋ.ಮಧುಸೂದನ್, ತಮ್ಮ ಒಡೆತನದ ವಿದ್ಯಾ ಸಂಸ್ಥೆಗಳಿಗೆ ಪಡೆದುಕೊಂಡಿದ್ದು, ಒಂದೇ ದಿನ ಆರು ಸೈಟುಗಳು ಮಂಜೂರಾಗಿವೆ ಎಂದು ಆರೋಪಿಸಿದರು. [ಸಿಎಂ ಡಿನೋಟಿಫಿಕೇಷನ್ ಮಾಡಿದ್ದು 707 ಎಕರೆ]

ಆರು ಸೈಟುಗಳ ಮೌಲ್ಯ ಸುಮಾರು 80 ಕೋಟಿ ರೂ.ಗಳಾಗಿದ್ದು, ಇದನ್ನು ಕೇವಲ 7 ಲಕ್ಷ ರೂ.ಗೆ ಮಂಜೂರು ಮಾಡಲಾಗಿದ್ದು, ಈ ಹಣ ಪಾವತಿಸಲು 10 ವರ್ಷಗಳ ಅವಧಿ ನಿಗದಿ ಮಾಡಲಾಗಿದೆ. ಸಾವಿರಾರು ಜನರು ಒಂದು ಸೈಟ್ ಪಡೆಯಲು ವರ್ಷಗಳು ಕಾಯಬೇಕು. ಆದರೆ, ಒಂದೇ ದಿನ ಆರು ಸೈಟ್ಗಳು ಬಿಜೆಪಿ ಮುಖಂಡರಿಗೆ ಸಿಕ್ಕಿರುವುದು ಹೇಗೆ? ಎಂದು ಲಕ್ಷ್ಮಣ್ ಪ್ರಶ್ನಿಸಿದ್ದಾರೆ.
ಮೈಸೂರು ಸುತ್ತಮುತ್ತ 2008ರಿಂದ 2013ರ ಅವಧಿಯಲ್ಲಿ ಮೂಡಾ ವ್ಯಾಪ್ತಿಯಲ್ಲಿ 1,238 ಎಕರೆ ಜಾಗವನ್ನು ಕಾರಣವಿಲ್ಲದೆ ಡಿನೋಟಿಫಿಕೇಷನ್ ಮಾಡಿ ರಿಯಲ್ ಎಸ್ಟೇಟ್ ಕುಳಗಳಿಗೆ ಬೇನಾಮಿ ಹೆಸರಿನಲ್ಲಿ ಅನುಕೂಲ ಕಲ್ಪಿಸಲಾಗಿದೆ. ಯಡಿಯೂರಪ್ಪ, ಸದಾನಂದ ಗೌಡ ಮತ್ತು ಶೆಟ್ಟರ್ ಅವಧಿಯಲ್ಲಿ ಇವುಗಳು ನಡೆದಿವೆ ಎಂದು ಲಕ್ಷ್ಮಣ್ ಆರೋಪಿಸಿದರು.
ಬೆಂಗಳೂರಿನ ಅರ್ಕಾವತಿ ಡಿನೋಟಿಫಿಕೇಷನ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸತ್ಯ ಶೋಧನೆ ವರದಿ ಬಿಡುಗಡೆ ಮಾಡುವ ಬಿಜೆಪಿ ನಾಯಕರು, ತಮ್ಮ ಪಕ್ಷದ ಮುಖಂಡ ಭೂಮಿಯನ್ನು ಅಕ್ರಮವಾಗಿ ಪಡೆದಿರುವ ಬಗ್ಗೆ ಏನು ಹೇಳುತ್ತಾರೆ? ಎಂದು ಲಕ್ಷ್ಮಣ್ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.
ಆರೋಪ ನಿರಾಧಾರ : ಲಕ್ಷ್ಮಣ್ ಅವರು ಮಾಡಿರುವ ಆರೋಪಗಳು ನಿರಾಧಾರವಾಗಿದ್ದು, ಅಕ್ರಮವಾಗಿ ಯಾವುದೇ ಭೂಮಿಯನ್ನು ಪಡೆದಿಲ್ಲ. ಅವರ ಬಳಿ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿ ಯಾವುದೇ ರೀತಿಯ ತನಿಖೆ ಎದುರಿಸಲು ತಾವು ಸಿದ್ಧವಿರುವುದಾಗಿ ಮಧುಸೂದನ್ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications