ಜೆಡಿಎಸ್ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಂಸದ ವಿಜಯಶಂಕರ್
ಮೈಸೂರು, ಜನವರಿ 14 : ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಟಿಕೆಟ್ ಲಾಭಿ ಆರಂಭವಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಾನೇ ಅಭ್ಯರ್ಥಿ ಎಂದು ಹೇಳುವ ಮೂಲಕ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಅವರು ಜಾತ್ಯತೀತ ಜನತಾದಳದ ಪ್ರಯತ್ನಕ್ಕೆ ತಿರುಗೇಟು ನೀಡಿದ್ದಾರೆ.
ಮೈಸೂರು ಲೋಕಸಭಾ ಕ್ಷೇತದಿಂದ ಜಾ.ದಳ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಇಲ್ಲಿ ಜಾ.ದಳದ ಪ್ರಾಬಲ್ಯ ಇದೆ ಎಂದು ಜಾ.ದಳ ಮುಖಂಡರು ಹೇಳಿರುವ ಹಿನ್ನೆಲೆಯಲ್ಲಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೇಳಿರುವ 12 ಸ್ಥಾನಗಳಲ್ಲಿ ಮೈಸೂರು ಕೂಡ ಒಂದಾಗಿರುವುದರಿಂದ ವಿಜಯಶಂಕರ್ ಅವರ ಹೇಳಿಕೆ ಮಹತ್ವ ಪಡೆದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರೂ ಆದ ಸಿ.ಎಚ್. ವಿಜಯಶಂಕರ್ ಅವರು, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳ ಈವರೆಗೆ ಒಮ್ಮೆಯೂ ಗೆಲುವು ಸಾಧಿಸಿಲ್ಲ. ಹೀಗಾಗಿ ಅದಕ್ಕೆ ಇಲ್ಲಿ ನೆಲೆ ಇಲ್ಲ ಎಂದರು.

ಬಿಜೆಪಿ ಮೂರು ಬಾರಿ ಗೆಲುವು ಸಾಧಿಸಿದೆ. ಈ ಪೈಕಿ ಎರಡು ಬಾರಿ ನಾನು ಈ ಕ್ಷೇತ್ರದಿಂದ ಜಯಗಳಿಸಿದ್ದು, ಎರಡು ಬಾರಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದೆ. ಇಲ್ಲಿ ಬಿಜೆಪಿ ಮತ್ತು ಕಾಂಗೆಸ್ ನಡುವೆ ಮಾತ್ರ ಪೈಪೋಟಿ ಇದೆ ಎಂದು ಹೇಳಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಾನೇ ಸಮರ್ಥ ಅಭ್ಯರ್ಥಿ ಎಂದ ವಿಜಯಶಂಕರ್, ಜಾತ್ಯತೀತ ಜನತಾದಳ ಒಂದು ರಾಜಕೀಯ ಪಕ್ಷವಾಗಿ ಟಿಕೆಟ್ ಕೇಳುವುದು ಹಾಗೂ ಸ್ಪರ್ಧೆ ಮಾಡುತ್ತೇವೆ ಎಂದು ಹೇಳುವುದು ತಪ್ಪಲ್ಲ. ಆದರೆ ಅವರ ಸಾಧ್ಯತೆಗಳನ್ನು ನೋಡಬೇಕು ಎಂದು ನುಡಿದರು.
ಎರಡೂ ಪಕ್ಷಗಳ ಹುರಿಯಾಳುಗಳು ಮಾತುಕತೆ ನಡೆಸಿ ಸ್ಥಾನ ಹಂಚಿಕೆ ಮಾಡಿಕೊಳ್ಳಲಾಗುತ್ತದೆ. ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿ ನನಗೆ ನೀಡಿದ ಭರವಸೆಯನ್ನು ಪಕ್ಷ ಉಳಿಸಿಕೊಳ್ಳುತ್ತದೆ. ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕೊಟ್ಟಂತೆ ನನಗೆ ಟಿಕೆಟ್ ಕೊಡಿಸುತ್ತಾರೆ ಅನ್ನುವ ವಿಶ್ವಾಸವಿದೆ ಎಂದರು.












Click it and Unblock the Notifications