ಹುಣಸೂರಿನ ವಸ್ತುಪ್ರದರ್ಶನಕ್ಕೆ ನೂರೆಂಟು ವಿಘ್ನ, ವ್ಯಾಪಾರಸ್ಥರಲ್ಲಿ ಆತಂಕ
ಮೈಸೂರು, ಅಕ್ಟೋಬರ್.01: ದಸರಾ ವಸ್ತು ಪ್ರದರ್ಶನದ ಉತ್ತೇಜನ ಪಡೆದು ಈಗ ತಾಲೂಕು ಕೇಂದ್ರಗಳಲ್ಲಿಯೂ ವಸ್ತುಪ್ರದರ್ಶನ ನಡೆಸುವುದು ಅಲ್ಲಲ್ಲಿ ಕಂಡು ಬರುತ್ತದೆ. ಜತೆಗೆ ಜನರನ್ನು ಒಂದೆಡೆ ಸೆಳೆದು ಮನರಂಜನೆ ಮತ್ತು ವ್ಯಾಪಾರ ವಹಿವಾಟಿಗೆ ಸೇತುವಾಗುತ್ತಿದೆ.
ದಸರಾ ವಸ್ತು ಪ್ರದರ್ಶನಕ್ಕೆ ಬರಲಾಗದವರು ತಮ್ಮ ತಾಲೂಕು ಕೇಂದ್ರಗಳಲ್ಲಿ ನಡೆಯುವ ವಸ್ತು ಪ್ರದರ್ಶನಕ್ಕೆ ತೆರಳಿ ಒಂದಷ್ಟು ಆಟ ಆಡಿ, ತಮಗೆ ಬೇಕಾದ ತಿನಿಸುಗಳನ್ನು ಸವಿದು, ವಸ್ತುಗಳನ್ನು ಖರೀದಿಸಿ ಮನೆಯತ್ತ ಹೆಜ್ಜೆ ಹಾಕುತ್ತಾರೆ. ಇಂತಹದೊಂದು ವಸ್ತುಪ್ರದರ್ಶನ ಮೈಸೂರಿನ ತಾಲೂಕು ಕೇಂದ್ರವಾದ ಹುಣಸೂರಿನಲ್ಲಿ ಕಳೆದ ಕೆಲ ವರ್ಷಗಳಿಂದ ನಡೆಯುತ್ತಾ ಬರುತ್ತಿದೆ.
ಪ್ರತಿವರ್ಷವೂ ದಸರಾ ವೇಳೆಯಲ್ಲಿ ಈ ರೀತಿಯ ವಸ್ತುಪ್ರದರ್ಶನಗಳಿಗೆ ಹೆಚ್ಚಿನ ಜನ ಮುಗಿಬೀಳುವ ಕಾರಣದಿಂದ ದೂರದ ಊರುಗಳಿಂದ ಬರುವ ವ್ಯಾಪಾರಸ್ಥರು ಇಲ್ಲಿ ಮಳಿಗೆ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಾರೆ. ಆಟದ ಸಾಮಗ್ರಿಗಳನ್ನು ಸ್ಥಾಪಿಸಿ ಮಕ್ಕಳು, ದೊಡ್ಡವರೆಲ್ಲರನ್ನೂ ಸೆಳೆಯುತ್ತಾರೆ.
ಪ್ರತಿವರ್ಷದಂತೆ ಈ ವರ್ಷವೂ ಮಾರಾಟಗಾರರು ಹುಣಸೂರಿಗೆ ಬಂದಿದ್ದು ಇಷ್ಟರಲ್ಲೇ ಅವರು ಪಟ್ಟಣದ ಮುನೇಶ್ವರ ಕಾವಲು ಮೈದಾನದಲ್ಲಿ ಜಾಯಿಂಟ್ ವೀಲ್ ಸೇರಿದಂತೆ ಹಲವು ರೀತಿಯ ಆಟಿಕೆಗಳನ್ನು ಸ್ಥಾಪಿಸಿ, ಮಳಿಗೆಗಳನ್ನು ತೆರೆದು ವಹಿವಾಟು ಆರಂಭಿಸಬೇಕಾಗಿತ್ತು. ಆದರೆ ಈ ಬಾರಿ ಇನ್ನು ಆರಂಭವಾಗದಿರುವುದು ಯಾಕೆ, ಎಲ್ಲಿ? ಮುಂದೆ ಓದಿ...

ಗುತ್ತಿಗೆದಾರನ ಸ್ವಾರ್ಥ
ಗುತ್ತಿಗೆದಾರನ ಸ್ವಾರ್ಥ ಬಡ ವ್ಯಾಪಾರಿಗಳಿಗೆ ಮುಳುವಾಗಿ ಪರಿಣಮಿಸಿದೆ. ನಗರಸಭೆಗೆ ಸೇರಿದ ಮುನೇಶ್ವರ ಕಾವಲು ಮೈದಾನವನ್ನು ಸಾರ್ವಜನಿಕರ ಮನರಂಜನೆ ಮತ್ತು ರಾಜಕೀಯ, ಧಾರ್ಮಿಕ ಹೀಗೆ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ನಗರಸಭೆಗೂ ಒಂದಷ್ಟು ಆದಾಯ ಬರುತ್ತಿದೆ.
ಆದರೆ ಈ ಬಾರಿಗೆ ಟೆಂಡರ್ ತನಗೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರನೊಬ್ಬ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ವಸ್ತುಪ್ರದರ್ಶನಕ್ಕೆ ತಡೆ ನೀಡಿದ್ದಾರೆ.
ಇದರಿಂದ ದೂರದಿಂದ ಲಕ್ಷಾಂತರ ರೂಪಾಯಿ ಸಾಲಮಾಡಿ, ಲಾರಿಗಳಿಗೆ ಬಾಡಿಗೆ ನೀಡಿ ತಂದು ನಿರ್ಮಾಣ ಮಾಡಿರುವ ಬೃಹತ್ ಮನೋರಂಜನಾ ಪಾರ್ಕ್, ಮನೋರಂಜನಾ ಆಟಗಳು ಸ್ಥಗಿತಗೊಂಡಿದ್ದು, ವ್ಯಾಪಾರವಾಗುತ್ತದೆ ಎಂದು ಕುಟುಂಬ ಸಹಿತ ಬಂದಿದ್ದವರು ಈಗ ಪರದಾಡುವಂತಾಗಿದೆ.

ಸಾರ್ವಜನಿಕರ ಒತ್ತಾಯ
ಕಾರ್ಪೋರೇಟ್ ಕಂಪನಿಗಳಿಗೆ, ರಾಜಕಿಯ ಕಾರ್ಯಚಟುವಟಿಕೆಗಳಿಗೆ, ಜಾತಿ-ಜನಾಂಗಗಳ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಅಧಿಕಾರಿಗಳು, ಕಾನೂನು ನೆಪವೊಡ್ಡಿ ಸಾರ್ವಜನಿಕರ ಮನೋಂರಂಜನೆಗೆ ತೊಡಕು ಮಾಡಿರುವುದು ಸರಿಯಲ್ಲ.
ಸಂಬಂಧಿಸಿದವರು ಇತ್ತ ಗಮನಹರಿಸಿ ವಸ್ತುಪ್ರದರ್ಶನ ನಡೆಯಲು ಅವಕಾಶ ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಇನ್ನೂ ಮೈಸೂರು ವಸ್ತುಪ್ರದರ್ಶನ ನೋಡಿಲ್ಲ
ಪ್ರಕರಣ ಇತ್ಯರ್ಥವಾಗುವ ತನಕ ವಸ್ತುಪ್ರದರ್ಶನ ಆರಂಭವಾಗುವುದು ಕಷ್ಟಸಾಧ್ಯ. ಹೀಗಾಗಿ ಮಕ್ಕಳು ಆಸೆಗಣ್ಣಿನಿಂದ ಅತ್ತ ತೆರಳಿ ಬಳಿಕ ಹ್ಯಾಪಮೊರೆ ಹಾಕಿಕೊಂಡು ಬರುತ್ತಿದ್ದಾರೆ. ಇವತ್ತು ಗ್ರಾಮೀಣ ಪ್ರದೇಶದ ಎಷ್ಟೋ ಕುಟುಂಬಗಳು ಇನ್ನೂ ಮೈಸೂರು ವಸ್ತುಪ್ರದರ್ಶನವನ್ನು ನೋಡಿಲ್ಲ.
ಅವರು ಸ್ಥಳೀಯವಾಗಿ ನಡೆಯುವ ವಸ್ತುಪ್ರದರ್ಶನಕ್ಕೆ ತೆರಳಿ ಖುಷಿ ಪಡುತ್ತಾರೆ. ಹೀಗಿರುವಾಗ ದಸರಾ ಹಬ್ಬದ ವೇಳೆಯಲ್ಲೇ ಬಂದಿರುವ ವಸ್ತುಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ಒಳ್ಳೆಯದಾಗುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ.

ಆತಂಕಗೊಂಡ ವ್ಯಾಪಾರಸ್ಥರು
ಇದೆಲ್ಲದರ ನಡುವೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಕುಟುಂಬ ಸಹಿತ ಬಂದು ಬೀಡು ಬಿಟ್ಟಿರುವ ವ್ಯಾಪಾರಸ್ಥರು ಆತಂಕಗೊಂಡಿದ್ದಾರೆ. ಒಂದಿಷ್ಟು ಆದಾಯ ಬರಬಹುದೆಂದು ಸಾಲ ಮಾಡಿ ಬಂಡವಾಳ ಹಾಕಿಕೊಂಡು ಬಂದಿದ್ದು ಈಗ ಇಲ್ಲಿಯೂ ಇರಲಾಗದೆ ವಾಪಾಸ್ ಹೋಗಲಾಗದೆ ಕಾಯುವಂತಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಿದರೆ ಎಲ್ಲರಿಗೂ ಒಳಿತಾಗಲಿದೆ ಎನ್ನುವುದನ್ನು ಮರೆಯದಿರಲಿ.












Click it and Unblock the Notifications