ಮಹಿಳೆಯರ ಮಾರಾಟ ಮಾಡುತ್ತಿದ್ದ ಮೈಸೂರಿನ ಅಲ್ಮಾಸ್ ಕಂಬಿ ಹಿಂದೆ
ಮಹಿಳೆಯರ ಮಾರಾಟ ಮಾಡುತ್ತಿದ್ದ ಈ ವಂಚಕರು ಇನ್ನೂ ಎಷ್ಟು ಅಮಾಯಕರನ್ನು ವಂಚಿಸಿದ್ದಾರೆ ಎಂಬುದು ಬಯಲಿಗೆ ಬರಬೇಕಿದೆ. ಮೈಸೂರು ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಬೇಕಿದೆ
ಮೈಸೂರು, ನವೆಂಬರ್ 29: ಮೈಸೂರಿನಿಂದ ಮಕ್ಕಳನ್ನು ಅಪಹರಿಸಿ, ಹೊರ ರಾಜ್ಯ ಹಾಗೂ ವಿದೇಶಗಳಿಗೆ ಮಾರಾಟ ಮಾಡಿದ ಪ್ರಕರಣದ ಸಂಬಂಧ ತನಿಖೆ ಪ್ರಗತಿಯಲ್ಲಿರುವ ಬೆನ್ನಲ್ಲೇ ಮಹಿಳೆಯರಿಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ದುಬೈಗೆ ಸಾಗಾಣಿಕೆ ಮಾಡುತ್ತಿದ್ದ ವಂಚಕ ಜಾಲ ಬೆಳಕಿಗೆ ಬಂದಿದೆ.
ವಂಚಕರನ್ನು ನಂಬಿ ದುಬೈಗೆ ಹೋದ ಮಹಿಳೆಯರು ಅಲ್ಲಿ ಪಡಬಾರದ ಕಷ್ಟ ಅನುಭವಿಸಿ, ಹೇಗೋ ತಪ್ಪಿಸಿಕೊಂಡು ಮೈಸೂರಿಗೆ ಬಂದು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ವಂಚಕರ ರಹಸ್ಯ ಬಯಲಾಗಿದೆ. ನಗರದ ಉದಯಗಿರಿ ನಿವಾಸಿ ಅಲ್ಮಾಸ್ ಎಂಬಾತನೇ ಇದರ ಸೂತ್ರಧಾರಿ ಎನ್ನಲಾಗಿದ್ದು, ಈತ ತಿಂಗಳಿಗೆ 30 ಸಾವಿರ ಸಂಬಳ ನೀಡುವ ಆಸೆ ತೋರಿಸಿ ಬಡ ಮಹಿಳೆಯರನ್ನು ದುಬೈಗೆ ಮಾರಾಟ ಮಾಡುತ್ತಿದ್ದ.[ಮೈಸೂರು: ವೇಶ್ಯಾವಾಟಿಕೆಯಲ್ಲಿ ಬಾಂಗ್ಲಾ ಮಹಿಳೆಯರೇ ಹೆಚ್ಚು]

ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉದಯಗಿರಿಯ ಟ್ರಾವೆಲ್ ಏಜೆಂಟ್ ಅಲ್ಮಾಸ್, ಸುಹೇಲ್ ಮತ್ತು ಶಕೀಬ್ ಎಂಬುವರ ಸಹಾಯದಿಂದ ಇಬ್ಬರು ಮಹಿಳೆಯರಿಗೆ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಾಗಪುರಕ್ಕೆ ಕರೆದೊಯ್ದು, ಅಲ್ಲಿ ವೇಶ್ಯಾವಾಟಿಕೆಗೆ ಬಳಸಲು ಯತ್ನಿಸಿದ್ದಾನೆ. ಈ ವೇಳೆ ಒಬ್ಬರು ಇದಕ್ಕೆ ಒಪ್ಪಿಲ್ಲ. ಈ ಸಂದರ್ಭದಲ್ಲಿ ಬೇರೆ ದಾರಿ ಕಾಣದೆ ಆಕೆಗೆ ನಕಲಿ ವೀಸಾ ನೀಡಿ, ದುಬೈಗೆ ಕಳುಹಿಸಲಾಗಿದೆ.
ದುಬೈನ ವಿಮಾನ ನಿಲ್ದಾಣದಲ್ಲಿ ವೀಸಾ ಪರೀಕ್ಷೆ ಸಂದರ್ಭದಲ್ಲಿ ನಕಲಿ ಎಂದು ಗೊತ್ತಾಗಿ, ಆಕೆ ಜೈಲು ಪಾಲಾಗಿದ್ದರು. ಬಳಿಕ ಆಕೆ ಭಾರತೀಯ ರಾಯಭಾರಿ ಕಚೇರಿ ಮೂಲಕ ನಾಗಪುರಕ್ಕೆ ವಾಪಸ್ ಬಂದಿದ್ದರು. ಆ ಮಹಿಳೆ ಅಲ್ಲಿ ಭಿಕ್ಷೆ ಬೇಡಿ, ಹೇಗೋ ರೈಲಿನಲ್ಲಿ ಮೈಸೂರು ಸೇರಿದ್ದಾರೆ. ಆ ನಂತರ ಉದಯಗಿರಿ ಪೊಲೀಸರಿಗೆ ದೂರು ನೀಡಿದ್ದರಿಂದ ಜಾಲ ಬಯಲಾಗಿದೆ.[ಗಂಡನ ಸರಸಸಲ್ಲಾಪದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ]
ವಂಚಕರು ಇದೇ ರೀತಿ ಇನ್ನೆಷ್ಟು ಬಡ ಮಹಿಳೆಯರನ್ನು ಮಾರಾಟ ಮಾಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.












Click it and Unblock the Notifications