ದೇವಾಲಯದ ಪ್ರಸಾದದಲ್ಲಿ ವಿಷ ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿದ್ದಾರೆ: ವೈದ್ಯಾಧಿಕಾರಿ
ಮೈಸೂರು, ಡಿಸೆಂಬರ್ 16: ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನೀಡಲಾಗಿದ್ದ ಪ್ರಸಾದ ಸೇವಿಸಿ ಸಾವನ್ನಪ್ಪುತ್ತಿರುವ ಸಂಖ್ಯೆ ಏರುತ್ತಲೇ ಇದ್ದು, ಪ್ರಸಾದದಲ್ಲಿ ರೋಗರ್ ಎಂಬ ಕ್ರಿಮಿನಾಶಕ ಪತ್ತೆಯಾಗಿರುವುದು ತಿಳಿದುಬಂದಿದೆ.
ಕಳೆದೆರಡು ದಿನಗಳಿಂದಲೂ ನಗರದ ಹಲವು ಆಸ್ಪತ್ರೆಗಳಲ್ಲಿ 100ಕ್ಕೂಹೆಚ್ಚು ಜನರಿಗೆ ವೈದ್ಯರು ಆಟ್ರೊಪೈನ್ ಸಲ್ಫೇಟ್ ಎಂಬ ಔಷಧಿ ನೀಡಿದ್ದರು. ಅವರೆಲ್ಲರೂ ಸದ್ಯ ಚಿಕಿತ್ಸೆಗೆ ಒಗ್ಗಿಕೊಳ್ಳುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಕಿಚ್ಚುಗುತ್ತಿ ಮಾರಮ್ಮ ದೇಗುಲದ ಅಭಿವೃದ್ಧಿಯೇ ಭಕ್ತರ ಜೀವಕ್ಕೆ ಕುತ್ತಾಯಿತಾ?
ಈ ಆಟ್ರೊಪೈನ್ ಸಲ್ಫೇಟ್ ಎಂಬ ಔಷಧಿಯನ್ನು ಆರ್ಗನೊ ಫಾಸ್ಪರಸ್ ಹೆಸರಿನ ಅಂಶದ ಸೇವನೆ ಮಾಡಿದವರಿಗೆ ನೀಡುತ್ತಾರೆ. ಮೈಸೂರಿನ ಹಲವು ಆಸ್ಪತ್ರೆಯಲ್ಲಿ ಈಗಾಗಲೇ ಕೆಲವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಚಿಕಿತ್ಸೆ ನೀಡುವಾಗ ಹೊಟ್ಟೆಯಲ್ಲಿರುವ ರಾಸಾಯನಿಕಗಳನ್ನು ತೆಗೆದಿರುವುದರಿಂದ ಮೇಲ್ನೋಟಕ್ಕೆ ಯಾವ ರಾಸಾಯನಿಕದಿಂದ ಸಾವು ಸಂಭವಿಸಿದೆ ಎಂದು ಹೇಳುವುದು ಬಹಳ ಕಷ್ಟ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸುತ್ತಾರೆ.
ಅಸ್ವಸ್ಥರಿಗೆ ನೀಡಲಾಗಿರುವ ಆಟ್ರೊಪೈನ್ ಸಲ್ಫೇಟ್ ಔಷಧದಿಂದ ಕನಿಷ್ಠ 3 ದಿನಗಳ ಕಾಲ ಮಂಪರು ಕವಿದಿರುತ್ತದೆ. ಈ ಸಮಯದಲ್ಲಿ ಕೆಲವರು ಮನಸ್ಸಿನ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಹೀಗಾಗಿ, ಮೂರು ದಿನಗಳ ಕಾಲ ಅವರು ನೀಡುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೆ.ಆರ್.ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜೇಶ್ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಷಯುಕ್ತ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆಯುತ್ತಿರುವವನ್ನು ಕಟ್ಟಿಹಾಕಿದ್ದಾರೆ ವೈದ್ಯರು! ಏಕೆ?
ಈ ರೋಗರ್ ಅನ್ನು ಒಂದು ಬಾಟಲ್ ನಷ್ಟು ಬೆರೆಸಿದರೆ ಇಷ್ಟೊಂದು ಮಂದಿ ಅಸ್ವಸ್ಥರಾಗುತ್ತಿರಲಿಲ್ಲ. ಹೆಚ್ಚಿನ ಪ್ರಮಾಣದಲ್ಲಿಯೇ ಬೆರೆಸಿದ್ದಾರೆಂಬುದು ಇಲ್ಲಿ ಸ್ಪಷ್ಟವಾಗಿದೆ.