ಮೈಸೂರು ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ:ತಡರಾತ್ರಿಯಿಂದಲೂ ತಪಾಸಣೆ
ಮೈಸೂರು, ಫೆಬ್ರವರಿ 22: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದು 44 ಭಾರತೀಯ ಯೋಧರು ಹುತಾತ್ಮರಾದ ಘಟನೆ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿ ಕರೆ ಮಾಡಿದ್ದಾನೆ.
ಅನಾಮಿಕ ವ್ಯಕ್ತಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದಾನೆ. ರೈಲ್ವೆ ನಿಲ್ದಾಣದ ಹೆಸರು ಹೇಳದೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ಬೆಂಗಳೂರು ಕೇಂದ್ರ ರೈಲ್ವೇ ಕಂಟ್ರೋಲ್ ರೂಂಗೆ ತಡರಾತ್ರಿ ಸುಮಾರು 1.30 ಕ್ಕೆ ಅನಾಮಧೇಯ ವ್ಯಕ್ತಿ ಕರೆ ಮಾಡಿದ್ದಾನೆ.
ಬಾಗಲಕೋಟೆ, ಚಾಮರಾಜನಗರ, ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ
ಕರೆ ಬಂದ ಹಿನ್ನೆಲೆ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲೂ ಬಾಂಬ್ ಸ್ಕ್ವಾಡ್, ಶ್ವಾನದಳದಿಂದ ಪರಿಶೀಲನೆ ನಡೆಸಲಾಯಿತು. ಮೈಸೂರು ರೈಲ್ವೆ ನಿಲ್ದಾಣ ಹಾಗೂ ಎಲ್ಲಾ ಟ್ರೈನ್ ಗಳಲ್ಲೂ ತಪಾಸಣೆ ಮಾಡಲಾಗಿದ್ದು , ಅದೃಷ್ಟವಶಾತ್ ಯಾವುದೇ ಬಾಂಬ್ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.
ಈ ಬಗ್ಗೆ ರೈಲ್ವೇ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಕರೆ ಮಾಡಿದ ಫೋನ್ ನಂಬರ್ ಮೇಲೆ ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.