ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮಳೆ ಅಬ್ಬರಕ್ಕೆ ಜನಜೀವನ ತತ್ತರ

|
Google Oneindia Kannada News

ಮೈಸೂರು, ಆಗಸ್ಟ್ 9 : ಮೈಸೂರಿನ ಹಲವೆಡೆ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ತತ್ತರಿಸಿದೆ. ವರ್ಷಧಾರೆಗೆ ಮೈಸೂರು- ಊಟಿ ಸಂಪರ್ಕಿಸುವ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿದ್ದರೆ, ಕೆಲವೆಡೆ ಸೇತುವೆಗಳು ಮುಳುಗಡೆಯಾಗಿವೆ. ಕೃಷಿ ಭೂಮಿ ಜಲಾವೃತವಾಗಿದೆ.

Heavy Rain lashes in H D Kote, Periyapattana at Mysuru
ಎಚ್.ಡಿ.ಕೋಟೆ ತಾಲೂಕಿನ ಹಲವೆಡೆ ಸತತ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಆಕಾಶವೇ ತೂತು ಬಿದ್ದಂತೆ ಭಾಸವಾಗುತ್ತಿದೆ. ತಾಲೂಕಿನ ಕೆಲವು ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರೆ, ಹ್ಯಾಂಡ್ ಪೋಸ್ಟ್ ಮತ್ತು ಸರಗೂರು ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಸರಗೂರಿನಿಂದ ಎಚ್.ಡಿ.ಕೋಟೆ, ಮೈಸೂರಿಗೆ ತೆರಳಲು ಸಾರ್ವಜನಿಕರು, ವಾಹನ ಸವಾರರು ಪರದಾಡುತ್ತಿದ್ದಾರೆ. ಹಂಪಾಪುರ, ಹೊಮ್ಮರಗಳ್ಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ನೀರು ಉಕ್ಕಿ ಹರಿಯುತ್ತಿದೆ.

ಅಬ್ಬಾ, ನೀರು ತುಂಬಿದ ಸೇತುವೆ ಮೇಲೇ ಬಸ್ ಚಾಲನೆ
ಹ್ಯಾಂಡ್ ಪೋಸ್ಟ್ ನಿಂದ ಕೋಟೆಗೆ ಹೋಗುವ ರಸ್ತೆಯ ಮಧ್ಯ ಭಾಗ ಜಲಾವೃತಗೊಂಡಿದ್ದು, ಕೋಟೆ ಪ್ಯಾಲೇಸ್ ಬಳಿ ನೀರು ಪ್ರವಾಹದ ರೀತಿಯಲ್ಲಿ ಉಕ್ಕಿ ಹರಿಯುತ್ತಿತ್ತು. ತಾರಕ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆಯಾಗುತ್ತಿರುವುದರಿಂದ ಹೆಗ್ಗಡಾಪುರ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಕಬಿನಿ ಜಲಾಶಯದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ತಾಲೂಕಿನ ಹೆಬ್ಬಳ್ಳ ಜಲಾಶಯಕ್ಕೆ ಲಕ್ಷ್ಮಣತೀರ್ಥ ನದಿಯಿಂದ ಒಳಹರಿವು ಹೆಚ್ಚಿದ್ದು, ಬರಿದಾಗಿದ್ದ ಕೆರೆ ಮೈದುಂಬಿಕೊಳ್ಳುತ್ತಿದೆ.

Heavy Rain lashes in H D Kote, Periyapattana at Mysuru
ತಾರಕ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹೆಚ್ಚುವರಿ ನೀರು ಬಿಟ್ಟ ಪರಿಣಾಮ ತಾಲೂಕಿನ ಹಲವು ಜಮೀನುಗಳಿಗೆ ನೀರು ನುಗ್ಗಿದೆ. ಎಚ್.ಡಿ.ಕೋಟೆ ಪಟ್ಟಣದ ತಾರಕ ಕಾಲುವೆಗೆ ಹೊಂದಿಕೊಂಡಂತಿರುವ ಮುಸ್ಲಿಂ ಬ್ಲಾಕ್ ಮನೆಗಳಿಗೆ ನೀರು ನುಗ್ಗಿದೆ. ಆದ್ದರಿಂದ ತಾರಕ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಮರಳುಗಾರಿಕೆಗೆ ನದಿಗಿಳಿದು ಕೊಚ್ಚಿ ಹೋದ ಯುವಕ ಬೆಳ್ತಂಗಡಿಯಲ್ಲಿ ಮರಳುಗಾರಿಕೆಗೆ ನದಿಗಿಳಿದು ಕೊಚ್ಚಿ ಹೋದ ಯುವಕ

ಬಹುತೇಕ ಕೆರೆಗಳು ಭರ್ತಿಯ ಹಂತ ತಲುಪಿದ್ದು, ಬೀಚನಹಳ್ಳಿ ಸಮೀಪದ ನೇರಳೆ, ಗಣೇಶನಗುಡಿ ಕೆರೆ ಕೋಡಿ ಬಿದ್ದ ಪರಿಣಾಮ ಗ್ರಾಮದ ವೆಂಕಟೇಶ್ ಅವರ ಮನೆಯೊಳಗೆ ನೀರು ನುಗ್ಗಿ ಸಂಕಷ್ಟ ಎದುರಿಸಿದರು. ಮೊದಲು ಮಳೆಯ ಹಿನ್ನೆಲೆಯಲ್ಲಿ ಸಂತಸಗೊಂಡಿದ್ದ ರೈತರೀಗ ಮಹಾಮಳೆಗೆ ಕಂಗಾಲಾಗಿದ್ದಾರೆ. ಭತ್ತ, ರಾಗಿ, ಮುಸುಕಿನ ಜೋಳ, ಶುಂಠಿ, ಅರಿಶಿಣ, ಹತ್ತಿ ಹಾಕಿದ್ದ ರೈತ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹತ್ತಿ ಸಿಡಿದು ಬಿಡಿಸುವ ವೇಳೆಗೆ ಮಳೆ ಬಂದು ಹಾಳು ಮಾಡಿದೆ. ಇನ್ನು ಕೇರಳದ ಶುಂಠಿ ಬೆಳೆಗಾರರಂತೂ ದಿಕ್ಕು ತೋಚದಂತಾಗಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಶುಂಠಿ ಬೆಳೆದಿದ್ದು, ವಿಪರೀತ ಮಳೆಗೆ ಶುಂಠಿ ಬುಡದಲ್ಲಿ ಕೊಳೆಯುವ ಭೀತಿ ಎದುರಾಗಿದೆ. ಇನ್ನು ಕೆಲವೆಡೆ ನದಿ ನೀರು ಉಕ್ಕಿ ಹರಿದು ಬೆಳೆ ಬೆಳೆದಿದ್ದ ಜಮೀನುಗಳೆಲ್ಲ ಜಲಾವೃತಗೊಂಡಿವೆ.

Heavy Rain lashes in H D Kote, Periyapattana at Mysuru

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವಲಯದ ದಮ್ಮನಕಟ್ಟೆಯಿಂದ ನಡೆಯುವ ಸಫಾರಿಯನ್ನು ಮಳೆಯಿಂದ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕಾಡಿನ ರಸ್ತೆಯಲ್ಲಿ ಹೂತುಕೊಳ್ಳುವುದರಿಂದ ಬಸ್ ಸಂಚಾರ ಸಾಧ್ಯವಿಲ್ಲ. ಬಿಡುವು ಕೊಡದಂತೆ 120 ಮಿ.ಮೀ. ಮಳೆಯಾಗುತ್ತಿದ್ದು, ಆದ್ದರಿಂದ ಸಫಾರಿಯನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಪ್ರವಾಸಿಗರು ಸಹಕರಿಸಬೇಕು ಎಂದು ಅಂತರಸಂತೆ ಆರ್ಎಫ್ಒ ವಿನಯ್ ತಿಳಿಸಿದ್ದಾರೆ.

Heavy Rain lashes in H D Kote, Periyapattana at Mysuru
ಕೊಪ್ಪ-ಆವರ್ತಿ ರಸ್ತೆ ಬದಿಯಲ್ಲಿರುವ ಕಾವೇರಿ ನದಿ ದಂಡೆ ತಗ್ಗು ಪ್ರದೇಶದಲ್ಲಿ ಕಾವೇರಿ ನೀರು ನುಗ್ಗಿ ತಂಬಾಕು ಬ್ಯಾರನ್, ಅಡಿಕೆ, ಜೋಳ, ಶುಂಠಿ, ಹುಲ್ಲಿನ ಮೆದೆ ನೀರಿನಿಂದ ಆವೃತ್ತವಾಗಿದೆ. ಕಳೆದ ಮಳೆಗಾಲದಂತೆ ರಸ್ತೆಯಲ್ಲಿ ನೀರು ನಿಂತು ಸಂಚಾರ ಬಂದ್ ಆಗುವ ಆತಂಕ ಎದುರಾಗಿದೆ. ಮಳೆಯಿಂದ ತೊಂದರೆಗೀಡಾದ ಗ್ರಾಮಗಳಿಗೆ ಶಾಸಕ ಕೆ.ಮಹದೇವ್ ಭೇಟಿ ನೀಡಿ ಮಳೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿ ತಹಶೀಲ್ದಾರ್ ಗೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ತಿಳಿಸಿದರು.

ಇನ್ನು ಮೈಸೂರಿನ ಎಚ್.ಡಿ.ಕೋಟೆ 34, ನಂಜನಗೂಡು 27, ಹುಣಸೂರು 13, ಪಿರಿಯಾಪಟ್ಟಣ 7, ಮೈಸೂರಿನಲ್ಲಿ 6 ಮನೆಗಳು ಮಳೆಗೆ ಹಾನಿಯಾಗಿವೆ.

English summary
Heavy rain lashes in Mysuru district. Most affected areas are H D Kote, Periyapattana and some other. Nagarahole safari has been stopped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X