ಚಾಮುಂಡೇಶ್ವರಿಯಲ್ಲಿ ಕುಮಾರಸ್ವಾಮಿ ಅಭ್ಯರ್ಥಿ ಆಗಲ್ಲ: ಸಾ. ರಾ. ಮಹೇಶ್
ಮೈಸೂರು, ಫೆಬ್ರವರಿ 13; "ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಅಭ್ಯರ್ಥಿ ಆಗುವುದಿಲ್ಲ. ಅವರು ರಾಮನಗರ ಬಿಟ್ಟು ಚಾಮುಂಡೇಶ್ವರಿಗೆ ಬರುವುದಿಲ್ಲ" ಎಂದು ಕೆ. ಆರ್. ನಗರ ಶಾಸಕ ಸಾ. ರಾ. ಮಹೇಶ್ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡಿಯೇ ಈ ಮಾತನ್ನು ನಾನು ಹೇಳುತ್ತಿದ್ದೇನೆ. ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಒತ್ತಾಯ ಮಾಡುತ್ತಿರುವುದು ನಿಜ. ಆದರೆ, ಚಾಮುಂಡೇಶ್ವರಿಯಿಂದ ಕುಮಾರಸ್ವಾಮಿ ಅಭ್ಯರ್ಥಿ ಆಗುವುದಿಲ್ಲ ಎಂಬುದು ಕೂಡ ನಿಜ" ಎಂದರು.
"ಚಾಮುಂಡೇಶ್ವರಿಯಲ್ಲಿ ನಮ್ಮ ಪಕ್ಷದ ಶಾಸಕರೇ ಇದ್ದಾರೆ. ಹೀಗಾಗಿ ಕುಮಾರಸ್ವಾಮಿ ಬರುವ ಅಗತ್ಯ ಇಲ್ಲ" ಎಂದು ಸಾ. ರಾ. ಮೇಹೇಶ್ ಹೇಳಿದರು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು ಜಿ. ಟಿ. ದೇವೇಗೌಡ. ಅವರು ಜೆಡಿಎಸ್ ಬಿಡುತ್ತಾರೆ ಎಂಬ ಸುದ್ದಿ ಹಬ್ಬಿದೆ.

ಹಿಜಾಬ್ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕರು, "ಶಾಲೆಗಳು ದೇಗುಲವಿದ್ದಂತೆ. ಇದು ಸ್ಮಶಾನವಾಗುವುದು ಬೇಡ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದೇ. ಮಕ್ಕಳ ಮನಸ್ಸಿನಲ್ಲಿ ಕೋಮು ವೈಮನಸ್ಸು ಬಿತ್ತುವುದು ಬೇಡ" ಎಂದು ಮನವಿ ಮಾಡಿದರು.
ಜೆಡಿಎಸ್ ಕೋರ್ ಕಮಿಟಿಯಲ್ಲಿ ಸ್ಥಾನಮಾನ ಸಿಗದ ವಿಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, "ನಾನೇ ಕೈ ಮುಗಿದು ಮನವಿ ಮಾಡಿದ್ದೆ ನನಗೆ ಯಾವುದೇ ಸ್ಥಾನಮಾನ ಬೇಡ ಅಂತ. ನಾನು ಯಾರನ್ನು ಪಕ್ಷಕ್ಕೆ ಕರೆತಂದಿದ್ದೆನೋ ಅವರೇ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ" ಎಂದರು.
"ಇನ್ನು ಪಕ್ಷದ ಸ್ಥಾನಮಾನ ಸಿಕ್ಕರೆ ಅವರಿಗೆ ಸಹಿಸಲು ಆಗಲ್ಲ. ಹೀಗಾಗಿ ನಾನು ನಿಮ್ಮ ಜೊತೆಯಲ್ಲೇ ಇರ್ತೀನಿ ನನಗೆ ಯಾವುದೇ ಸ್ಥಾನಮಾನ ಬೇಡ ಎಂದು ಹೇಳಿದ್ದೆ. ಹೀಗಾಗಿ ನನ್ನನ್ನು ಕೋರ್ ಕಮಿಟಿಗೆ ಸೇರಿಸಿಲ್ಲ" ಎಂದು ಸಾ. ರಾ. ಮಹೇಶ್ ಸ್ಪಷ್ಟಪಡಿಸಿದರು.
ನಾಲ್ಕನೇ ಅವಧಿಗೆ ಮೇರ್ಯ ಚುನಾವಣೆ ಹಿನ್ನಲೆಯಲ್ಲಿ ಮಾತನಾಡಿದ ಅವರು, "ಪಾಲಿಕೆಯಲ್ಲಿ ಈ ಬಾರಿ ಜೆಡಿಎಸ್ನವರು ಮೇಯರ್ ಆಗುತ್ತಾರೆ. ನಾವು ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇವೆ. ಯಾವ ಪಕ್ಷದ ಬೆಂಬಲ ಪಡೆಯುತ್ತೇವೆ ಎಂದು ಹೇಳುವುದಿಲ್ಲ. ಆದರೆ ನೂರಕ್ಕೆ ನೂರು ಜೆಡಿಎಸ್ನವರೇ ಮೇಯರ್ ಆಗುತ್ತಾರೆ" ಎಂದರು.
ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದರು; ಚಾಮುಂಡೇಶ್ವರಿ ಕ್ಷೇತ್ರಕ್ಕೆ ಎಚ್. ಡಿ. ಕುಮಾರಸ್ವಾಮಿ ಅಭ್ಯರ್ಥಿ ಎಂಬ ಸುದ್ದಿ ಬಗ್ಗೆ ರಾಮನಗರದಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದರು.
"ನಾನು ಚುನಾವಣೆ ನಾಯಕತ್ವ ವಹಿಸಿಕೊಂಡು ಕೆಲಸ ಮಾಡುತ್ತೇನೆ ಎಂದಿದ್ದೇನೆ ಹೊರತು ಚುನಾವಣೆಗೆ ನಿಲ್ಲುತ್ತೇನೆ ಎಂಬ ಅರ್ಥವಲ್ಲ" ಎಂದು ಹೇಳಿದ್ದರು.
"ನನ್ನ ಕಾರ್ಯಕರ್ತರು ಚಾಮುಂಡೇಶ್ವರಿಗೆ ಯಾರು?, ಯಾರನ್ನು ನಾಯಕರನ್ನಾಗಿ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಅದಕ್ಕೆ ನಾನೇ ಬರ್ತಿನಿ ನಡೆಯಿರಿ ಎಂದು ಅವರಿಗೆ ಹೇಳಿದ್ದೆ" ಎಂದರು.
"ಈ ಹಿಂದೆ ಹತ್ತು ದಿನಗಳ ಕಾಲ ಹಳ್ಳಿ ಹಳ್ಳಿಗೆ ಚಾಮುಂಡೇಶ್ವರಿಯಲ್ಲಿ ಹಳ್ಳಿ ಹಳ್ಳಿಗೆ ಭೇಟಿ ನೀಡಿದ ಹಾಗೆ ಈ ಬಾರಿಯು ಕೆಲಸ ಮಾಡುತ್ತೇನೆ ಎಂಬುದುವುದೇ ಇದರ ಅರ್ಥವಾಗಿದೆ. ನಾನು ನಾಯಕತ್ವ ವಹಿಸಿಕೊಂಡು ಕೆಲಸ ಮಾಡುತ್ತೇನೆ ಎಂದಿದ್ದೇನೆ. ಅದನ್ನು ಈ ರೀತಿ ಅರ್ಥೈಸಿಕೊಂಡರೆ ಹೇಗೆ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.
2018ರ ಚುನಾವಣೆಯಲ್ಲಿ ಕುಮಾರಸ್ವಾಮಿ ಚನ್ನಪಟ್ಟಣ, ರಾಮನಗರ ಎರಡೂ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ಎರಡೂ ಕಡೆ ಗೆದ್ದಿದ್ದರು. ರಾಮನಗರ ಕ್ಷೇತ್ರದಲ್ಲಿ ರಾಜೀನಾಮೆ ನೀಡಿ ಚನ್ನಪಟ್ಟಣ ಶಾಸಕರಾಗಿ ಮುಂದುವರೆದಿದ್ದಾರೆ.
ನಂತರ ರಾಮನಗರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾದರು. ಚುನಾವಣೆಯಲ್ಲಿ ಗೆದ್ದರು.












Click it and Unblock the Notifications