ಮದುವೆಯಾಗಿದೆ, ಸಂಸಾರವೂ ಚೆನ್ನಾಗಿ ನಡೆಯುತ್ತಿದೆ ಎಂದ ಎಚ್. ವಿಶ್ವನಾಥ್
ಮೈಸೂರು, ನವೆಂಬರ್. 23: ಈಗಾಗಲೇ ನಮ್ಮಿಬ್ಬರದು ಮದುವೆಯಾಗಿದೆ. ಸಂಸಾರ ಚೆನ್ನಾಗಿ ನಡೆಯುತ್ತಿದೆ. ನಮ್ಮದೇನು ಬೇರೆ ಬೇರೆ ಕುಟುಂಬವಲ್ಲ. ಒಂದೇ ಕುಟುಂಬ ಆಗಿರುವುದರಿಂದ ಬಾಳ್ವೆ ಚೆನ್ನಾಗಿ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ತಿಳಿಸಿದರು.
ಮೈತ್ರಿ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಇಂದು ಸಮ್ಮಿಶ್ರ ಸರ್ಕಾರ ಆರು ತಿಂಗಳನ್ನು ಪೂರೈಸಿದೆ. ಮೈತ್ರಿ ಸರ್ಕಾರ ಚೆನ್ನಾಗಿ ಸಂಸಾರ ಮಾಡುತ್ತಿದೆ. ತೊಂದರೆ ಏನು ಇಲ್ಲ ಎಂದು ಪ್ರತಿಕ್ರಿಯಿಸಿದರು.
ಕೆಆರ್ಎಸ್ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಅವರು ಡಿಸ್ನಿಲ್ಯಾಂಡ್ ಮಾಡುವ ವಿಚಾರದಲ್ಲಿ ಸಚಿವರಿಗೆ ಪ್ರತಿಷ್ಠೆ ಬೇಡ. ಸಚಿವರು ತಾಂತ್ರಿಕ ತಜ್ಞರಲ್ಲ. ಕೇವಲ ಆಡಳಿತ ನಡೆಸುವವರಷ್ಟೇ ಎಂದು ವಿರೋಧ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ಹಾಗೂ ಸಾ.ರಾ.ಮಹೇಶ್ ಅತ್ಯುತ್ಸಾಹ ತೋರುತ್ತಿದ್ದಾರೆ. ಅವರ ಉತ್ಸಾಹಕ್ಕೆ ತಣ್ಣೀರು ಎರಚುತ್ತಿಲ್ಲ. ಯೋಜನೆ ಮಾಡುವ ಮುನ್ನ ಆತುರ ಬೇಡ ಎಂದಷ್ಟೇ ಹೇಳುತ್ತಿದ್ದೇನೆ. ಇಂತಹ ವಿಚಾರದಲ್ಲಿ ತಜ್ಞರ ಅಭಿಪ್ರಾಯವಿಲ್ಲದೆ ಮುಂದುವರಿಯುವುದು ಸರಿಯಲ್ಲ ಎಂದರು.
ಒಂದು ರಸ್ತೆ ಮಾಡುವಾಗ ತಾಂತ್ರಿಕ ವರದಿ ನೋಡುತ್ತೇವೆ. ಅಂತಹುದರಲ್ಲಿ ಅಣೆಕಟ್ಟಿನ ವಿಚಾರದಲ್ಲಿ ಗಂಭೀರ ನಡೆ ಇರಲಿ. ಕೆಆರ್ಎಸ್ ನಂಬಿ ನಾಲ್ಕು ರಾಜ್ಯದ ಕೋಟ್ಯಾಂತರ ಜನರಿದ್ದಾರೆ. ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗುತ್ತಿದೆ. ರಾಜ್ಯದಲ್ಲಿ ಅತ್ಯುನ್ನತ ತಾಂತ್ರಿಕ ತಜ್ಞರಿದ್ದಾರೆ. ಅವರದೊಂದು ಸಮಿತಿ ರಚನೆ ಮಾಡಿ. ಆ ಸಮಿತಿ ಏನು ವರದಿ ನೀಡುತ್ತದೆಯೋ ಆ ವರದಿಯಂತೆ ಕೆಲಸವಾಗಲಿ ಎಂದರು.












Click it and Unblock the Notifications