ವಿರೋಧಿಗಳಿಗೆ ಅಸ್ತ್ರವಾಯಿತಾ ಕುಮಾರಸ್ವಾಮಿಯ ಆ ಒಂದು ಹೇಳಿಕೆ..?
ಎಚ್.ಡಿ.ಕುಮಾರಸ್ವಾಮಿ ಪಕ್ಷವನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಉಮೇದಿನಲ್ಲಿರುವಾಗಲೇ ಅವರ ಅದೊಂದು ಮಾತು ಪಕ್ಷದ ನಾಯಕರ ಮತ್ತು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ. ಆ ಹೇಳಿಕೆ ಜೆಡಿಎಸ್ ಮೇಲಿನ ರಾಜಕೀಯ ಟೀಕೆಯನ್ನು ಹೆಚ್ಚು ಮಾಡಿದೆ.
ಮೈಸೂರು, ಜನವರಿ 30: ಜಾತ್ಯಾತೀತ ಮಂತ್ರ ಜಪಿಸುತ್ತಾ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆಂದು ಹೇಳುತ್ತಾ ಬಂದಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷವನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಉಮೇದಿನಲ್ಲಿರುವಾಗಲೇ ಅವರ ಅದೊಂದು ಮಾತು ಪಕ್ಷದ ನಾಯಕರ ಮತ್ತು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.
ಈ ಬಾರಿ ಚುನಾವಣೆಗೆ ಮುನ್ನವೇ ವಿವಿಧ ಯಾತ್ರೆಗಳ ಮೂಲಕ ರಾಜ್ಯದಾದ್ಯಂತ ಪ್ರವಾಸ ಮಾಡಿದ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಅವರು ಹೋದ ಕಡೆಗಳಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದೆ. ಜನ ಸೇರಿದ್ದಾರೆ. ಪರ್ವಾಗಿಲ್ಲ ಈ ಬಾರಿ ಜೆಡಿಎಸ್ ಚೇತರಿಸಿಕೊಳ್ಳುತ್ತಿದೆ ಎಂದು ನಾಯಕರು ಮತ್ತು ಕಾರ್ಯಕರ್ತರು ಖುಷಿ ಪಡುತ್ತಿರುವಾಗಲೇ ಕುಮಾರಸ್ವಾಮಿಯವರ ಭಾವನಾತ್ಮಕವಾದ ಅದೊಂದು ಮಾತು ಪಕ್ಷದಲ್ಲಿ ಗೊಂದಲ ಮೂಡಿಸಿದ್ದರೆ, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಗೆ ರಾಜಕೀಯ ಅಸ್ತ್ರವಾಗಿದೆ.
ಜೆಡಿಎಸ್ ಬಹುಮತದಿಂದ ಗೆಲ್ಲದೇ ಹೋದರೆ ಪಕ್ಷವನ್ನು ವಿಸರ್ಜಿಸುವುದಾಗಿ ಹೇಳಿದ ಮಾತು ಹುಮ್ಮಸ್ಸಿನಲ್ಲಿದ್ದ ನಾಯಕರು ಮತ್ತು ಕಾರ್ಯಕರ್ತರು ಕಂಗೆಡುವಂತೆ ಮಾಡಿದೆ. ಯಾವಾಗ ಕುಮಾರಸ್ವಾಮಿ ಅವರು ಈ ಮಾತನ್ನು ಹೇಳಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಜೆಡಿಎಸ್ ಮೇಲೆ ರಾಜಕೀಯ ಟೀಕೆಯನ್ನು ಹೆಚ್ಚು ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಬಹಿರಂಗವಾಗಿಯೇ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.
ಬೇರೆ ಬೇರೆ ತಿರುವು ಪಡೆದ ಎಚ್ಡಿಕೆ ಹೇಳಿಕೆ
ಚುನಾವಣೆ ಹೊಸ್ತಿಲಲ್ಲಿ ಇಂತಹದೊಂದು ಮಾತು ಎಚ್.ಡಿ.ಕುಮಾರಸ್ವಾಮಿ ಅವರ ಬಾಯಿಯಿಂದ ಬರಬಾರದಿತ್ತು ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ. ಆ ಹೇಳಿಕೆಯ ಹಿಂದಿನ ಉದ್ದೇಶ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವುದೇ ಆಗಿತ್ತು. ಆದರೆ ಅದು ಈಗ ಬೇರೆ, ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಜೊತೆಗೆ ಭವಾನಿ ರೇವಣ್ಣರಿಗೆ ಟಿಕೆಟ್ ನೀಡುವ ವಿಚಾರಗಳ ಗೊಂದಲಗಳು ಕೂಡ ಪಕ್ಷಕ್ಕೆ ಒಂದಿಷ್ಟು ಹಾನಿಯಾಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಹಿಂದುಪರ ಸಂಘಟನೆಗಳ ಬಗ್ಗೆ ಕಿಡಿಕಾರಿದ್ದ ಎಚ್ಡಿಕೆ
ಅಲ್ಪ ಸಂಖ್ಯಾತರ ಮತಗಳನ್ನು ಸೆಳೆಯುವ ಶಕ್ತಿಯಿರುವುದು ಕಾಂಗ್ರೆಸ್ ಹೊರತು ಪಡಿಸಿದರೆ ಜೆಡಿಎಸ್ಗೆ ಮಾತ್ರ. ಹೀಗಾಗಿಯೇ ಕುಮಾರಸ್ವಾಮಿ ಅವರು ಸರ್ವ ಜನಾಂಗದ ಶಾಂತಿಯ ತೋಟದ ಬಗ್ಗೆ ಮಾತನಾಡುತ್ತಾ ಬಂದಿದ್ದರು. ಕಾಂಗ್ರೆಸ್ಗೆ ಟಾಂಗ್ ಕೊಡಲೆಂದೇ ಸಿ.ಎಂ. ಇಬ್ರಾಹಿಂ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು. ಅಷ್ಟೇ ಅಲ್ಲದೆ ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಹಿಂದುಪರ ಸಂಘಟನೆಗಳ ಬಗ್ಗೆಯೂ ಆಕ್ರೋಶಗಳನ್ನು ಹೊರ ಹಾಕಿದ್ದರು. ಕುಮಾರಸ್ವಾಮಿ ಅವರ ಈ ನಡೆ ಕಾಂಗ್ರೆಸ್ ನ್ನು ನಿದ್ದೆಗೆಡಿಸಿತ್ತು. ಅಲ್ಪ ಸಂಖ್ಯಾತ ಮತಗಳನ್ನು ಜೆಡಿಎಸ್ ಎಲ್ಲಿ ಸೆಳೆದು ಬಿಡುತ್ತದೆಯೋ ಎಂಬ ಭಯದಲ್ಲಿ ಜೆಡಿಎಸ್ ನ್ನು ಟೀಕಿಸಲು ಶುರು ಮಾಡಿದರು.
ಜೆಡಿಎಸ್ಗೆ ಎಚ್ಚರಿಕೆ ನಡೆ ಅನಿವಾರ್ಯ
ಅಧಿಕಾರಕ್ಕಾಗಿ ಹಲವು ಸಂದರ್ಭಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದರೂ ಹೆಚ್ಚು ದಿನ ಅವರ ದೋಸ್ತಿ ಮುಂದುವರೆದಿಲ್ಲ. ಹೀಗಾಗಿ ಮೂರು ಪಕ್ಷಗಳಿಗೆ ಬಹುಮತ ಬಾರದೆ ಹೋದರೆ ರಾಜ್ಯದ ಜನ ಮತ್ತೆ ರಾಜಕೀಯ ದೊಂಬರಾಟವನ್ನು ನೋಡುವುದು ಮತ್ತು ಅನುಭವಿಸುವುದು ಅನಿವಾರ್ಯವಾಗಲಿದೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಜೆಡಿಎಸ್ ಮೇಲೆ ಮುಗಿಬಿದ್ದಿರುವುದು ಎದ್ದು ಕಾಣಿಸುತ್ತಿದೆ. ಹೀಗಾಗಿ ಜೆಡಿಎಸ್ ಎಚ್ಚರಿಕೆಯ ಹೆಜ್ಜೆಯಿಡುವುದು ಬಹುಮುಖ್ಯವಾಗಿದೆ.
ಹೇಳಿಕೆಗಳು ಸ್ವಾಸ್ಥ್ಯ ಕೆಡಿಸದಿರಲಿ
ಇನ್ನು ರಾಜ್ಯದಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನ ಪಡೆದಷ್ಟು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಬಹುಮತ ಕಳೆದುಕೊಳ್ಳುವ ಭಯವೂ ಇದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಬಗ್ಗೆ ಮೃಧುಧೋರಣೆ ತಾಳಿತ್ತು. ಆದರೆ ಚುನಾವಣೆ ಬಳಿಕ ಜೆಡಿಎಸ್ ಕಾಂಗ್ರೆಸ್ ಒಂದಾಗಿತ್ತು. ಹೀಗಾಗಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಹಠಕ್ಕೆ ಬಿದ್ದಂತೆ ಜೆಡಿಎಸ್ ಸೋಲಿಸಲು ಪಣತೊಟ್ಟಿವೆ.
ಚುನಾವಣೆಗೆ ದಿನಗಳು ಹತ್ತಿರವಾದಂತೆಲ್ಲ ನಾಯಕರ ಹೇಳಿಕೆಗಳು ಬಹ ಮುಖ್ಯವಾಗಲಿದ್ದು, ಆರೋಪ ಪ್ರತ್ಯಾರೋಪಗಳು ಮುಂದುವರೆಯಲಿವೆ. ಐದು ವರ್ಷಗಳ ಕಾಲ ಮೌನವಾಗಿದ್ದವರೆಲ್ಲ, ಈಗ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಮಾತಿನ ಭರಾಟೆ ಶುರುವಾಗಿದೆ. ಆದರೆ ನಾಯಕರ ಆ ಮಾತುಗಳು ಸಮಾಜದ ಸ್ವಾಸ್ಥ್ಯ ಕೆಡಿಸದಿದ್ದರೆ ಅಷ್ಟೇ ಸಾಕು ಎನ್ನುವುದು ಜನರ ಅಭಿಪ್ರಾಯವಾಗಿದೆ.