"ಜಿಟಿಡಿ ಕುಟುಂಬವನ್ನು ರಾಜಕೀಯವಾಗಿ ಮುಗಿಸುವುದಕ್ಕೆ ಸಾಧ್ಯವಿಲ್ಲ''
ಮೈಸೂರು, ಜನವರಿ 22: ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಟಿಡಿ ಪುತ್ರ ಹರೀಶ್ ಗೌಡ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಹರೀಶ್ ಗೌಡ, ಯಾರೂ ಕೂಡ ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸುವುದಕ್ಕೆ ಆಗುವುದಿಲ್ಲ, ಅದು ಕೇವಲ ಜನರ ಕೈಯಲ್ಲಿದೆ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದರು.
ಪಕ್ಷದಲ್ಲಿ ಅಸಮಾಧಾನ ಇರುವುದು ಸಹಜ, ಅಂದ ಮಾತ್ರಕ್ಕೆ ನಾವು ಪಕ್ಷದಿಂದ ದೂರ ಹೋಗಿಲ್ಲ. ನನ್ನ ಮತ್ತು ನಿಖಿಲ್ ಕುಮಾರಸ್ವಾಮಿ ಸ್ನೇಹ ಗಟ್ಟಿಯಾಗಿದೆ, ಉತ್ತಮವಾಗಿದೆ ಎಂದರು.

ವಿಭಾಗವಾರು ಕೋರ್ ಕಮಿಟಿಯಲ್ಲಿ ನಮ್ಮನ್ನು ಕರೆದು ಪಟ್ಟಿ ಮಾಡಿಲ್ಲ, ಪಟ್ಟಿ ಮಾಡಿರುವವರನ್ನು ಕೇಳಿದರೆ ಎಲ್ಲವೂ ಗೊತ್ತಾಗುತ್ತದೆ. ನನ್ನ ಮತ್ತು ನನ್ನ ತಂದೆಯ ಗಮನಕ್ಕೆ ತರದೇ ಪಟ್ಟಿ ಮಾಡಲಾಗಿದೆ. ಆದರೂ ನನಗೆ ಯಾವುದೇ ರೀತಿಯ ಅಸಮಾಧಾನ, ಬೇಸರ ಇಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದರು.
ನಮ್ಮ ಕಾರ್ಯಕರ್ತರು ನಮ್ಮ ಕುಟುಂಬದ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಅವರ ಪ್ರೀತಿಯನ್ನು ನಾವು ಉಳಿಸಿಕೊಳ್ಳುತ್ತೇವೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಜೆಡಿಎಸ್ ಶಾಸಕರಾಗಿಯೇ ಈ ಅವಧಿಯನ್ನು ನಮ್ಮ ತಂದೆ ಜಿ.ಟಿ ದೇವೇಗೌಡರು ಪೂರ್ಣಗೊಳಿಸುತ್ತಾರೆ ಎನ್ನುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆವರೆಗೂ ಜೆಡಿಎಸ್ ನಲ್ಲೇ ಇರುವ ಕುರಿತು ಶಾಸಕ ಜಿಟಿಡಿ ಪುತ್ರ ಹರೀಶ್ ಗೌಡ ಸ್ಪಷ್ಟವಾಗಿ ತಿಳಿಸಿದರು.












Click it and Unblock the Notifications