ಮೈಸೂರು ಪ್ರವಾಸೋದ್ಯಮ ವಿಶ್ವದ ಗಮನ ಸೆಳೆಯಲಿ:ಜಿಟಿ ದೇವೇಗೌಡ
ಮೈಸೂರು, ಸೆಪ್ಟೆಂಬರ್. 27: ಪ್ರವಾಸೋದ್ಯಮವು ಲಾಭದಾಯಕ ಉದ್ಯಮವಾಗಿ ಜಗತ್ತನ್ನೇ ಬೆರಗುಗೊಳಿಸುವಂತೆ ಬೆಳೆಯುತ್ತಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರು ಕೂಡ ಪ್ರವಾಸೋದ್ಯಮದ ಪ್ರಮುಖ ತಾಣವಾಗಿದೆ. ಇದು ಇನ್ನು ಹೆಚ್ಚಿನ ರೀತಿಯಲ್ಲಿ ವಿಶ್ವದ ಗಮನ ಸೆಳೆಯಬೇಕಿದೆ ಎಂದು ಸಚಿವ ಜಿಟಿ ದೇವೇಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಇಂದು ಗುರುವಾರ ಅರಮನೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವಾಸಿಗರಿಗೆ ಗುಲಾಬಿ ಹೂ ನೀಡಿ, ಬಲೂನ್ ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವದ ಗಮನ ಸೆಳೆದಿದೆ. ದಸರಾಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಸಿದ್ಧತೆಗಳು ನಡೆಯುತ್ತಿವೆ. ವಿಶ್ವದ ಜನರನ್ನೆಲ್ಲ ಡಿಜಿಟಲ್ ವ್ಯವಸ್ಥೆಗಳ ಮೂಲಕ ಆಕರ್ಷಿಸಿ ಇಲ್ಲಿನ ಸ್ಥಳಗಳನ್ನು ಬಂದು ನೋಡಿ ಹೋಗುವಂತೆ ಮಾಡಬೇಕು.

ಸಂಗೀತ, ಕಲೆ, ಸಾಹಿತ್ಯ, ನಾಟಕ ಹಾಗೂ ಜಾನಪದ ಗ್ರಾಮೀಣ ಕಲೆಯನ್ನು ವಿದೇಶಿಯರು ಹಾಡಿಹೊಗಳಬೇಕು. ಇಲ್ಲಿನ ಪ್ರವಾಸೋದ್ಯಮ ಕೇವಲ ದಸರಾಕ್ಕೆ ಮಾತ್ರ ಸೀಮಿತವಾಗದೆ ವರ್ಷದ ಎಲ್ಲಾ ದಿನಗಳಲ್ಲೂ ಬೆಳೆಯಬೇಕು ಎಂದು ಜಿಟಿಡಿ ಸಲಹೆ ನೀಡಿದರು.
ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ಕ್ಷೇತ್ರ, ನಂಜನಗೂಡಿನಲ್ಲಿ ನಂಜುಂಡೇಶ್ವರ, ಮಲೆಮಹಾದೇಶ್ವರ, ಮೇಲುಕೋಟೆ ಹೀಗೆ ಪ್ರವಾಸೋದ್ಯಮದ ಕ್ಷೇತ್ರಗಳು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ.

ಪ್ರವಾಸೋದ್ಯಮ ಹೆಚ್ಚು ಹೆಚ್ಚು ಬೆಳೆಯುವುದರಿಂದ ಸಣ್ಣಪುಟ್ಟ ವ್ಯಾಪಾರಸ್ಥರು ಕೂಡ ಆರ್ಥಿಕವಾಗಿ ಸಬಲರಾಗುತ್ತಾರೆ. ಅನೇಕ ಉದ್ಯೋಗಗಳು ಹುಟ್ಟಿಕೊಳ್ಳುತ್ತವೆ ಎಂದು ಜಿಟಿ ದೇವೇಗೌಡ ಸೂಚಿಸಿದರು.
ಕಾರ್ಯಕ್ರಮದಲ್ಲಿ ರಾಜ ಯದುವೀರ್ ಒಡೆಯರ್ ಹಾಗೂ ಕೆ.ಆರ್ ಕ್ಷೇತ್ರದ ಶಾಸಕ ಎಸ್ಎ ರಾಮದಾಸ್ ಸಾಥ್ ನೀಡಿದರು.












Click it and Unblock the Notifications