ಸರ್ಕಾರ ಅದ್ಧೂರಿ ದಸರಾ ಉತ್ಸವವನ್ನು ಮಾಡಲೇಬೇಕು: ವಾಟಾಳ್ ನಾಗರಾಜ್
ಮೈಸೂರು, ಅಕ್ಟೋಬರ್ 14: ರಾಜ್ಯದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಕಾರಣದಿಂದಾಗಿ ಅದ್ಧೂರಿ ಮೈಸೂರು ದಸರಾ ಮಹೋತ್ಸವಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ ಇದನ್ನು ವಿರೋಧಿಸಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಪ್ರತಿಭಟಿಸಿದ್ದಾರೆ.
ವಿಶ್ವವಿಖ್ಯಾತ ದಸರಾ ಉತ್ಸವವನ್ನು ಸರ್ಕಾರವು ನಡೆಸಲೇಬೇಕು ಎಂದು ಆಗ್ರಹಿಸಿ ಮೈಸೂರು ನಗರದ ಆರ್ಗೇಟ್ ವೃತ್ತದಲ್ಲಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಜಂಬೂ ಸವಾರಿ ದಿನ ನಾವು ಸಾರೋಟಿನಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಿಮೆಯಿಟ್ಟು ಮೆರವಣಿಗೆ ಮಾಡುತ್ತೇವೆ ಎಂದರು.
ಈಗ ಮೈಸೂರು ದಸರಾ ಹೋಗಿ, ಯಡಿಯೂರಪ್ಪ ದಸರಾ ಆಗಿದೆ. ಸಿಎಂ ಯಡಿಯೂರಪ್ಪ ಅವರಿಗೆ ನಮ್ಮ ಸಾಂಸ್ಕೃತಿಕ ದಸರಾ ಬೇಕಾಗಿಲ್ಲ. ಅವರಿಗೆ ನಗುವುದೇ ಗೊತ್ತಿಲ್ಲ, ಒಂದು ವರ್ಷಕ್ಕೊಮ್ಮೆ ನಗುತ್ತಾರೆ. ಪಕ್ಷಾಂತರ ಪಿತಾಮಹ ಯಡಿಯೂರಪ್ಪ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ದಸರಾಗೆ ಲೈಟ್ ಬೇಕು, ಆದರೆ ಜಂಬೂ ಸವಾರಿ ಬೇಡ, ಇದು ಹುಚ್ಚರ ಸರ್ಕಾರ, ದಿನಕ್ಕೊಬ್ಬ ಮಂತ್ರಿ ಮೈಸೂರಿಗೆ ಬರುತ್ತಾರೆ. ಇವರೆಲ್ಲರೂ ದಸರಾ ಉತ್ಸವಕ್ಕೆ ಮಂಕು ಬಡಿಸಿದ್ದಾರೆ ಎಂದರು.
ದಸರಾ ನಡೆಸಲು ಆಗದಿದ್ದರೆ ರಾಜೀನಾಮೆ ಕೊಡಿ. ಕೊರೊನಾ ವೈರಸ್ ಇದೆ ನಿಜ, ಆದರೆ ದಸರಾವನ್ನು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮಾಡಬಹುದಾಗಿತ್ತು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಯಡಿಯೂರಪ್ಪಗೆ ಕೇವಲ ಸರ್ಕಾರ ಉಳಿಸಿಕೊಳ್ಳುವುದು, ಮಂತ್ರಿಗಿರಿ ಹಂಚುವುದು ಇದಿಷ್ಟೇ ಗೊತ್ತಿರೋದು. ವಿದ್ಯಾಗಮವನ್ನು ಶಾಶ್ವತವಾಗಿ ಬಂದ್ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ್ ಮಾಡಲಾಗುವುದು.
ಕೊರೊನಾದಿಂದ ಶಿಕ್ಷಕರು ಸತ್ತರೆ ಒಂದು ಕೋಟಿ ರೂ. ಪರಿಹಾರ ಕೊಡಬೇಕು. ವಿದ್ಯಾರ್ಥಿಗಳು ಸತ್ತರೂ ಒಂದು ಕೋಟಿ ರೂ. ಪರಿಹಾರ ಕೊಡಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಆಗ್ರಹಿಸಿದರು.












Click it and Unblock the Notifications