ಕಳೆದ ವರ್ಷದ ದಸರಾ ಕಾಮಗಾರಿಯ ಹಣವೇ ಇನ್ನು ಬಂದಿಲ್ಲ ಸ್ವಾಮಿ!
ಮೈಸೂರು, ಆಗಸ್ಟ್ 16: ನಾಡಹಬ್ಬ ಮೈಸೂರು ದಸರಾಗೆ ಬಾಕಿ ಇರುವುದು ಕೇವಲ 44 ದಿನಗಳು. ಈಗಾಗಲೇ ಆಗಸ್ಟ್ 22ರಂದು ದಸರೆಯ ಗಜಪಯಣಕ್ಕಾಗಿ ಮೊದಲ ಹಂತದ ಆರು ಆನೆಗಳು ಮೈಸೂರಿಗೆ ಆಗಮಿಸಲಿವೆ. ಈ ಬಾರಿ ದಸರಾ ಆಚರಣೆಗಾಗಿ ಸರ್ಕಾರ 20.5 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಆದರೆ ಅಚ್ಚರಿಯ ವಿಷಯವೆಂದರೆ, ಕಳೆದ ಬಾರಿಯ ದಸರಾ ಗುತ್ತಿಗೆದಾರರಿಗೆ ಕೋಟಿ-ಕೋಟಿ ಮೌಲ್ಯದ ಹಣವೇ ಇನ್ನೂ ಬಿಡುಗಡೆಯಾಗಿಲ್ಲ ಎಂಬುದು.
ಈ ಬಾರಿ ದಸರಾದಲ್ಲಿ ಮೆರೆಯುವ ಆನೆಗಳಿವು
ಕಳೆದ ಮೂರು ದಸರಾ ಮಹೋತ್ಸವದ ವೇಳೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಇದುವರೆಗೂ ಹಣ ಬಿಡುಗಡೆಗೊಂಡಿಲ್ಲ. ಈಗಲಾದರೂ ಹಳೆಯ ಬಾಕಿ ಪಾವತಿಯಾಗಬಹುದು ಎಂಬ ನಿರೀಕ್ಷೆ ಅವರದು. ಗುತ್ತಿಗೆದಾರರಿಗೆ ಅಂದಾಜು 15 ಕೋಟಿಗೂ ಹೆಚ್ಚು ಹಣ ಬರಬೇಕಿದೆ.

ಈ ಮಧ್ಯೆ ಗುತ್ತಿಗೆದಾರರು ಈ ಬಾರಿ 20.5 ಕೋಟಿ ಹಣ ಬಿಡುಗಡೆಯಾದರೆ ತಮ್ಮ ಬಾಕಿಯೂ ಚುಕ್ತಗೊಳ್ಳಬಹುದೇನೋ ಎಂಬ ವಿಶ್ವಾಸದಲ್ಲಿದ್ದಾರೆ. ದಸರಾ ಹತ್ತಿರ ಬರುತ್ತಿರುವುದರಿಂದ ನಗರಕ್ಕೆ ಪ್ರವಾಸಿಗರನ್ನು ಸೆಳೆಯಲು ರಸ್ತೆಗಳಲ್ಲಿನ ಗುಂಡಿ ಮುಚ್ಚುವುದು, ಯುಜಿಡಿ, ಚರಂಡಿ ಸಮಸ್ಯೆ ಬಗೆಹರಿಸುವುದು, ಉದ್ಯಾನಗಳ ಅಭಿವೃದ್ಧಿ, ಅಲಂಕಾರ, ಪ್ರಮುಖ ವೃತ್ತಗಳನ್ನು ಸಿಂಗರಿಸುವುದು ಸೇರಿದಂತೆ ಹಲವು ಕಾರ್ಯಗಳೂ ಆದಷ್ಟು ಬೇಗ ನಡೆಯಬೇಕಿದೆ.
ಬಿಡುಗಡೆಯಾದ ಅನುದಾನದಲ್ಲಿ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಈ ಬಾರಿಯೂ ಉತ್ಸವ ಆಚರಿಸುವ ಹಾಗೂ ಬಾಕಿ ಉಳಿದಿರುವ ಮೊತ್ತವನ್ನೂ ಪಾವತಿಸಬೇಕಾದ ಜವಾಬ್ದಾರಿ ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಮೇಲಿದೆ. ಇದನ್ನು ಹೇಗೆ ಪಾಲಿಕೆ ನಿವಾರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications