ಈ ಬಾರಿ ದಸರಾದಲ್ಲಿ ಮೆರೆಯುವ ಆನೆಗಳಿವು
ಮೈಸೂರು, ಆಗಸ್ಟ್ 15: ವೈಭವದ ದಸರಾಗೆ ಕ್ಷಣಗಣನೆ ಆರಂಭವಾಗಿದೆ. ಮೊದಲನೇ ಹಂತದ ಗಜಪಡೆಯು ಆಗಸ್ಟ್ 22 ರಂದು ಆಗಮಿಸಲಿದ್ದು ಯಾವ್ಯಾವ ಆನೆಗಳು ಈ ಬಾರಿಯ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ ಎಂಬ ಕುತೂಹಲ ಮೂಡಿದೆ. ಈಗಾಗಲೇ 5 ಕ್ಯಾಂಪ್ ನಲ್ಲಿರುವ 14 ಆನೆಗಳ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಬೆಂಗಳೂರಿನ ಅರಣ್ಯ ಇಲಾಖೆ ಕಚೇರಿಗೆ ಪಟ್ಟಿ ಕಳುಹಿಸಲಾಗಿದೆ.
ಆಯ್ಕೆ ಮಾಡಿದ 14 ಎಲ್ಲಾ ಆನೆಗಳನ್ನು ಕರೆತರಲು ಅನುಮತಿ ಸಹ ದೊರೆತಿದೆ.
ಹೆಚ್ಚುವರಿಯಾಗಿ ಮತ್ತೆರಡು ಆನೆಗಳನ್ನು ಕರೆತರಲು ಸಮ್ಮತಿಸುವ ನಿರ್ಧಾರವನ್ನು ಮೈಸೂರಿನ ಡಿಸಿಎಫ್ ಅಲೆಗ್ಸಾಂಡರ್ ಹಾಗೂ ಪಶು ವೈದ್ಯಾಧಿಕಾರಿ ನಾಗರಾಜ್ ಅವರ ವಿವೇಚನೆಗೆ ಬಿಡಲಾಗಿದೆ. ಹದಿನಾಲ್ಕು ಅಥವಾ ಹನ್ನೆರಡು ಆನೆ ಕರೆತರಬೇಕೆ ಎನ್ನುವುದರ ಕುರಿತು ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಸಹ ಲಭ್ಯವಾಗಿದೆ.

ಎಂದಿನಿಂತೆ ಬಳ್ಳೆ ಶಿಬಿರದಿಂದ ಗಜಪಡೆಯ ನಾಯಕ 59 ವರ್ಷದ ಅರ್ಜುನ ಈ ಬಾರಿ ಅಂಬಾರಿ ಹೊರಲಿದ್ದಾನೆ. ಮತ್ತಿಗೂಡು ಶಿಬಿರದಿಂದ 61 ವರ್ಷದ ಬಲರಾಮ, 53 ವರ್ಷದ ಅಭಿಮನ್ಯು, 63ರ ಲಕ್ಷ್ಮಿ, ದುಬಾರೆ ಕ್ಯಾಂಪ್ ನಿಂದ 41ರ ಕಾವೇರಿ, 62 ವರ್ಷದ ವಿಜಯ, 46 ವರ್ಷದ ವಿಕ್ರಮ, 37 ವರ್ಷದ ಗೋಪಿ, 36 ವರ್ಷದ ಧನಂಜಯ, 49 ವರ್ಷದ ಈಶ್ವರ, ಕೆ ಗುಡಿ ಕ್ಯಾಂಪ್ ನಿಂದ 52ರ ದುರ್ಗಾಪರಮೇಶ್ವರಿ ಹಾಗೂ ಬಂಡೀಪುರದಿಂದ 57 ವರ್ಷದ ಜಯಪ್ರಕಾಶ್ ಆನೆಗಳು ಈಗಾಗಲೇ ಅಂತಿಮ 12 ಆನೆಗಳ ಸ್ಥಾನ ಗಿಟ್ಟಿಸಿಕೊಂಡಿವೆ. ಹೆಚ್ಚುವರಿಯಾಗಿ ಆನೆಗಾಗಿ ರಾಂಪುರ ಕ್ಯಾಂಪ್ ನಲ್ಲಿರುವ 17 ವರ್ಷದ ಲಕ್ಷ್ಮಿ, 19 ವರ್ಷದ ರೋಹಿತ್ ಆನೆಗಳನ್ನು ಕರೆತರಲಾಗುತ್ತದೆ. ಅಲ್ಲದೆ ಜಯಪ್ರಕಾಶ್ ಹಾಗೂ ಈಶ್ವರ ಆನೆ ಈ ಬಾರಿಯ ಜಂಬೂ ಸವಾರಿಯಲ್ಲಿ ಮೊಟ್ಟ ಮೊದಲಿಗೆ ಹೆಜ್ಜೆ ಹಾಕಲಿದ್ದಾರೆ.

ಈಶ್ವರ ಸೌಮ್ಯ ಸ್ವಭಾವಿಯಾಗಿದ್ದು, ದಷ್ಟ ಪುಷ್ಟನೂ ಆಗಿದ್ದಾನೆ. ಅಲ್ಲದೆ ರಾಂಪುರ ಕ್ಯಾಂಪ್ ನಲ್ಲಿರುವ ಜಯಪ್ರಕಾಶ ಆನೆ ಜೆಪಿ ಎಂದೇ ಹೆಸರು ಪಡೆದಿದ್ದು, ಕೆಲ ದಿನಗಳವರೆಗೆ ಆನೆ ಸಫಾರಿಗೆ ಬಳಸಲಾಗುತ್ತಿತ್ತು. ಲಕ್ಷ್ಮಿ ಹಾಗೂ ರೋಹಿತ್ ಸಹ ದಸರಾ ಮಹೋತ್ಸವಕ್ಕೆ ಹೊಸ ಆನೆಗಳೇ ಆಗಿದೆ.
ಒಟ್ಟಾರೆ 14 ಆನೆಗಳಲ್ಲಿ 9 ಗಂಡಾನೆ, 5 ಹೆಣ್ಣಾನೆಗಳಿವೆ. ಇವುಗಳಲ್ಲಿ ಬಲರಾಮನ ಹಿರಿಯ ಗಂಡಾನೆ 17ವರ್ಷದ ಲಕ್ಷ್ಮೀ ಕಿರಿಯ ಹೆಣ್ಣಾನೆಯಾಗಿದ್ದಾಳೆ. ಜಯಪ್ರಕಾಶ್ ಆನೆಯನ್ನು ಕಳೆದ ಬಾರಿಯೂ ಆಯ್ಕೆ ಮಾಡಿ ಶಿಫಾರಸು ಕಳಿಸಲಾಗಿತ್ತು. ಆದರೆ ಆಯ್ಕೆಯಾಗಿರಲಿಲ್ಲ. ಪ್ರತಿ ಬಾರಿಯೂ ಆನೆಗಳ ಆರೋಗ್ಯ ಸ್ಥಿತಿ, ದೈಹಿಕ, ಸದೃಢತೆ, ವಯಸ್ಸು, ದೃಷ್ಟಿ, ನಡವಳಿಕೆ ಹಾಗೂ ಹಿಂದೆ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅನುಭವ ಸೇರಿದಂತೆ ಇತರೆ ಅಗತ್ಯಗಳನ್ನು ನೋಡಿ ಆಯ್ಕೆ ಮಾಡಲಾಗುತ್ತದೆ.












Click it and Unblock the Notifications