ನಾಗರಹೊಳೆ, ಬಂಡೀಪುರ ಅಭಯಾರಣ್ಯದ ಹುಲಿ ಸಂತತಿಯಲ್ಲಿ ಭಾರೀ ಏರಿಕೆ!
ಮೈಸೂರು, ಜುಲೈ 31: ಶನಿವಾರವಷ್ಟೇ ಅಂತರರಾಷ್ಟ್ರೀಯ ಹುಲಿ ದಿನಾಚರಣೆ ನಡೆದ ಬೆನ್ನಲ್ಲೇ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ನಾಗರಹೊಳೆ ಹಾಗೂ ಬಂಡೀಪುರ ಅಭಯಾರಣ್ಯಗಳಲ್ಲಿ ಹುಲಿ ಸಂತತಿ ಹೆಚ್ಚಳವಾಗಿದೆ.
ಮೈಸೂರಲ್ಲಿ ರಸ್ತೆ ಮೇಲೆಯೇ ಬಂದಿತ್ತು ಹುಲಿ!
ಕಳೆದ 2014-15ನೇ ಸಾಲಿನಲ್ಲಿ ಪ್ರತಿ 100 ಕಿ.ಮೀ ಗೆ 8 ಹುಲಿಗಳಿದ್ದರೆ, ಇತ್ತೀಚಿನ ಅಧ್ಯಯನದ ಪ್ರಕಾರ ಪ್ರತಿ 100 ಕಿ.ಮೀ 27 ಹುಲಿಗಳಿರುವ ಬಗ್ಗೆ ಸುಳಿವು ಲಭ್ಯವಾಗಿದೆ. ಕ್ಯಾಮರಾ ಟ್ರಾಪಿಂಗ್ ಮೂಲಕ ನಡೆದಿರುವ ಹುಲಿಗಳ ಗಣತಿಯಲ್ಲಿ ನಾಗರಹೊಳೆಯ 643 ಚದರ ಕಿ.ಮೀ ವ್ಯಾಪ್ತಿಯಲ್ಲಿ 118 ವ್ಯಾಘ್ರಗಳಿರುವುದು ಪತ್ತೆಯಾಗಿದೆ.
ಅರಣ್ಯದಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಕೈಗೊಂಡಿದ್ದ ಜನಜಾಗೃತಿ ಕಾರ್ಯಕ್ರಮಗಳ ಫಲವಾಗಿ ಹುಲಿ ಸಂತತಿ ಹೆಚ್ಚಾಗಿದೆ. ಪರಿಸರಕ್ಕೆ ಪೂರಕವಾಗಿ ಅಗತ್ಯವಿರುವ ದಟ್ಟಾರಣ್ಯ, ಸಮೃದ್ದವಾಗಿ ದೊರಕುತ್ತಿರುವ ಆಹಾರದ ಪರಿಣಾಮ ಹುಲಿಗಳ ಸಂತತಿ ಹೆಚ್ಚಳವಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಹುಲಿರಾಯ ಅಂದ್ರೆ ಕ್ರೌರ್ಯತೆಗೂ ಮೀರಿದ ಆಕರ್ಷಣೆ!
ಹುಲಿಗಳ ಸಂತತಿ ಹೆಚ್ಚಳದಿಂದಾಗಿ ವನ್ಯಜೀವಿ ಪ್ರೇಮಿಗಳಲ್ಲಿ ಸಂತಸಗೊಂಡಿದ್ದಾರೆ. ಹುಲಿಗಳ ಸಾಂಪ್ರದಾಯಿಕ ಆಹಾರ ಪ್ರಾಣಿಗಳಾದ ಜಿಂಕೆ, ಸಾಂಬಾರ್, ಕಾಡೆಮ್ಮೆ ಸೇರಿದಂತೆ ಇತರ ಪ್ರಾಣಿಗಳ ಸಂಖ್ಯೆಯ ಹೆಚ್ಚಳದಿಂದಾಗಿ ಯಥೇಚ್ಛವಾಗಿ ದೊರಕುತ್ತಿರುವ ಆಹಾರ ಕೂಡ ಹುಲಿಗಳ ಸಂತತಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಈ ಮೂಲಕ ಹುಲಿಗಳ ಸಂರಕ್ಷಣೆಯಲ್ಲಿ ಇಡೀ ವಿಶ್ವದಲ್ಲೇ ನಾಗರಹೊಳೆ ಉದ್ಯಾನವನ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.