ಮೈಸೂರು ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ
ಮೈಸೂರು, ಸೆಪ್ಟೆಂಬರ್ 25: ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ಅಂಬಾವಿಲಾಸ ಅರಮನೆಯಲ್ಲಿ ಜೋಡಿಸಿರುವ ರತ್ನಖಚಿತ ಸಿಂಹಾಸನ ನೋಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಪ್ರತಿವರ್ಷ ದಸರಾ ಆರಂಭಕ್ಕೆ ಕೆಲವೇ ದಿನಗಳಿರುವಾಗ ಸಿಂಹಾಸನದ ಜೋಡಣೆ ನಡೆಯುತ್ತದೆ. ಈ ಬಾರಿ ಅಧಿಕ ಮಾಸದ ಕಾರಣ ಒಂದು ತಿಂಗಳು ಮುಂಚಿತವಾಗಿಯೇ ಜೋಡಣೆ ನಡೆದಿದ್ದು, ಅರಮನೆ ಪ್ರವೇಶಕ್ಕೆ 70 ರೂ.(ವಯಸ್ಕರು), ಮಕ್ಕಳಿಗೆ 35 ರೂ. ವಿಧಿಸಿದರೆ ಸಿಂಹಾಸನ ವೀಕ್ಷಣೆಗೆ 50 ರೂ.ಶುಲ್ಕ ವಿಧಿಸಲಾಗುತ್ತದೆ.
ಜಿಲ್ಲಾ ಖಜಾನೆಯಲ್ಲಿದ್ದ ಈ ಸಿಂಹಾಸನವನ್ನು ದರ್ಬಾರ್ ಹಾಲ್ ನಲ್ಲಿ ಜೋಡಿಸಿಡಲಾಗಿದೆ. ಸಿಂಹಾಸನದ ಛಾಯಾಚಿತ್ರ, ವಿಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ನಾಡಹಬ್ಬವನ್ನು ಚಾಮುಂಡಿ ಬೆಟ್ಟ ಮತ್ತು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದ್ದು, ದಸರಾ ಮಹೋತ್ಸವ ಅ.17 ರಂದು ಆರಂಭವಾಗಿ, ಅ.26 ರಂದು ಕೊನೆಗೊಳ್ಳಲಿದೆ.
ಇದೇ ಅವಧಿಯಲ್ಲಿ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಖಾಸಗಿ ದರ್ಬಾರ್ ನಡೆಯಲಿದೆ. ಅಕ್ಟೋಬರ್ 25 ರಂದು ಆಯುಧ ಪೂಜೆ, ಸಾಂಪ್ರದಾಯಿಕ ಜಟ್ಟಿ ಕಾಳಗ, 26 ರಂದು ಶಮೀಪೂಜೆ, ವಿಜಯದಶಮಿ ಮೆರವಣಿಗೆ ನಡೆಯಲಿದೆ.












Click it and Unblock the Notifications