ಮೈಸೂರಲ್ಲಿ ಅತ್ಯಾಚಾರ; ಪೊಲೀಸರಿಗೆ 34 ಸಾಕ್ಷ್ಯ ಸಿಕ್ಕಿದೆ
ಮೈಸೂರು, ಆಗಸ್ಟ್ 26; ಮೈಸೂರಿನಲ್ಲಿ ನಡೆದಿರುವ ಎಂಬಿಎ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈ ನಡುವೆ ಮೈಸೂರಿಗೆ ಭೇಟಿ ನೀಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು, ಸ್ಥಳೀಯ ಪೊಲೀಸರಿಂದ ಮಾಹಿತಿ ಕಲೆ ಹಾಕಿದರು.
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಗೀತಾ ಪ್ರಸನ್ನ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಮಿಳಾ ನಾಯ್ಡು, ನಂತರ ಘಟನೆ ನಡೆದ ಲಲಿತಾದ್ರಿಪುರ ಸಮೀಪದ ಚಾಮುಂಡಿಬೆಟ್ಟದ ತಪ್ಪಲಿಗೆ ತೆರಳಿ ಪರಿಶೀಲನೆ ನಡೆಸಿದರು.
ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ವಿದ್ಯಾರ್ಥಿನಿಯ ಗೆಳೆಯ ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಿರ್ಜನ ಪ್ರದೇಶದಲ್ಲಿ ಕುಡಿಯುತ್ತಾ ಕುಳಿತಿದ್ದವರು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾರೆ" ಎಂದರು.
ಮೈಸೂರಿನಲ್ಲಿ ಅತ್ಯಾಚಾರ; ಸರ್ಕಾರದ ಕಿವಿ ಹಿಂಡಿದ ಸಿದ್ದರಾಮಯ್ಯ!
"ಸದ್ಯ ಪೊಲೀಸರಿಗೆ ಸ್ಥಳದಲ್ಲಿ 34 ಸಾಕ್ಷ್ಯ ಸಿಕ್ಕಿದ್ದು, ಅದರ ಆಧಾರದ ಮೇಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕರ್ನಾಟಕ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಆಯೋಗದಲ್ಲಿ ಈ ಬಗ್ಗೆ ಸುಮೋಟೊ ಕೇಸ್ ದಾಖಲಾಗಿದೆ. ಇದು ಹೇಯ ಕೃತ್ಯವಾಗಿದ್ದು, ಇಂತಹ ಕೃತ್ಯಗಳು ನಡೆಯಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಿಎಂ ಸಹ ಸೂಚನೆ ನೀಡಿದ್ದಾರೆ" ಎಂದು ಪ್ರಮಿಳಾ ನಾಯ್ಡು ಹೇಳಿದರು.
ಮೈಸೂರಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಚುರುಕುಗೊಂಡ ತನಿಖೆ
ಬಾರ್ ಕೋಡ್ ಪರಿಶೀಲನೆ; ಘಟನೆ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ಸ್ಥಳದಲ್ಲಿ ಸಿಕ್ಕಿರುವ ಮದ್ಯದ ಬಾಟಲ್ ಸಂಗ್ರಹಿಸಿರುವ ಪೊಲೀಸರು ಅದರ ಬಾರ್ ಕೋಡ್ಗಳ ಪರಿಶೀಲನೆ ನಡೆಸಿ, ಮದ್ಯ ಖರೀದಿ ಮಾಡಿರುವ ಮದ್ಯದಂಗಡಿಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಮೈಸೂರು ವಕೀಲರ ಸಂಘ ಖಂಡಿಸಿದೆ. ಬಿಜೆಪಿ ಸರ್ಕಾರದಿಂದ ಜನರಿಗೆ ರಕ್ಷಣೆ ಕೊಡಲು ಆಗುತ್ತಿಲ್ಲ. ಇಂತಹ ಘಟನೆ ನಡೆದಿದೆ ಎಂದರೆ ಇದರಲ್ಲಿ ಅಧಿಕಾರಿಗಳ ವಿಫಲತೆ ಕಂಡು ಬರುತ್ತಿದೆ. ಪೊಲೀಸರು ತನಿಖೆಯ ಚುರುಕು ಮಾಡುವ ಮೂಲಕ ಕೃತ್ಯ ನಡೆಸಿರುವ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಬಿ. ಶಿವಣ್ಣ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಮೈಸೂರು ನಗರದ ರಾಮಸ್ವಾಮಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.#Mysuru @ABVPKarnataka #Protest pic.twitter.com/9pltUECXQy
— oneindiakannada (@OneindiaKannada) August 26, 2021
ಎಬಿವಿಪಿ ಪ್ರತಿಭಟನೆ; ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ರಾಮಸ್ವಾಮಿ ವೃತ್ತದ ಬಳಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಅತ್ಯಾಚಾರಿಗಳನ್ನು ಬಂಧಿಸುವಂತೆ ಆಗ್ರಹಿಸಿದರು, ನಗರದ ಹೊರ ವಲಯಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಹಾಗೂ ಹೆಣ್ಣು ಮಕ್ಕಳಿಗೆ ಪೊಲೀಸರು ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.