ಗ್ರಾಮೀಣ ಭಾಗದವರಿಗೆ ಮೈಸೂರು ದಸರೆ ನೋಡಲು ಫ್ರೀ ಬಸ್!
ಮೈಸೂರು, ಸೆಪ್ಟೆಂಬರ್ 6:"ನಾಡಹಬ್ಬ ದಸರಾ ನೋಡಲು ಬರುವ ಗ್ರಾಮೀಣ ಜನರಿಗೆ ಈ ಬಾರಿ ಉಚಿತವಾಗಿ ದಸರಾ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಘೋಷಿಸಿದ್ದಾರೆ.
ಈವರೆಗೂ ಸಾರಿಗೆ ಇಲಾಖೆಯೇ ಗ್ರಾಮೀಣ ಭಾಗದಿಂದ ಬರುವವರಿಗೆ ಬಸ್ ಸೌಕರ್ಯ ಒದಗಿಸುತ್ತಿತ್ತು. ಮೃಗಾಲಯ ಪ್ರವೇಶಕ್ಕೆ 40ರೂ ಹಾಗೂ ಒಂದು ಬಾಟಲ್ ಕುಡಿಯುವ ನೀರಿಗೆ 10 ರೂ ಸೇರಿದಂತೆ 50 ರೂಗಳನ್ನು ತಾಲ್ಲೂಕು ಆಡಳಿತದಿಂದ ಸಂಗ್ರಹಿಸಲಾಗುತ್ತಿತ್ತು. ಆದರೆ ಈ ಬಾರಿ ಆ ಹಣವನ್ನು ಗ್ರಾಮೀಣ ಭಾಗದಿಂದ ದಸರೆ ನೋಡಲು ಆಗಮಿಸುವ ಪ್ರವಾಸಿಗರು ಪಾವತಿಸಬೇಕಿಲ್ಲ.

ಗ್ರಾಮೀಣ ಭಾಗದಿಂದ ದಸರೆ ವೀಕ್ಷಣೆಗೆ ಬರುವವರ ಸಂಪೂರ್ಣ ವೆಚ್ಚ 5.60 ಲಕ್ಷವಾಗಲಿದ್ದು, ಆ ಮೊತ್ತವನ್ನು ತಮ್ಮ ಫೌಂಡೇಷನ್ ನಿಂದ ನೀಡುವುದಾಗಿ ಸಚಿವ ಸೋಮಣ್ಣ ಘೋಷಿಸಿದ್ದಾರೆ. ಇದಕ್ಕೂ ಹೆಚ್ಚು ಖರ್ಚಾದರೆ ಸರ್ಕಾರದಿಂದ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಈ ಬಾರಿ ದಸರೆಯಲ್ಲಿ ಪಾಲ್ಗೊಳ್ಳುವ ಗ್ರಾಮೀಣ ಭಾಗದ ಪ್ರವಾಸಿಗರಿಗೆ ಉಚಿತ ಬಸ್ ವ್ಯವಸ್ಥೆ ನೀಡಲಾಗಿದೆ.

ಈ ಬಾರಿ ಗ್ರಾಮೀಣ ಭಾಗದಿಂದ ದಸರೆಗೆ ಬರುವವರಿಗೆ ಒಟ್ಟು 204 ಬಸ್ ಗಳನ್ನು ಬಳಸಲು ಸರ್ಕಾರ ಮುಂದಾಗಿದೆ. ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು ಜಿಲ್ಲೆಗಳ 34 ತಾಲ್ಲೂಕಿಗೆ ಸೆಪ್ಟೆಂಬರ್ 3,4,5ರಂದು ಈ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications