ತೂಕದಲ್ಲಿ ವಂಚನೆ: ರಸಗೊಬ್ಬರ ಅಂಗಡಿ ಮಾಲೀಕನಿಗೆ ನೋಟಿಸ್
ಮೈಸೂರು, ಮೇ 10: ಕೊರೊನಾ ವೈರಸ್ ನಿಂದ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ರೈತರ ಉತ್ಪನ್ನಗಳಿಗೆ ಬೆಲೆ ಸಿಗುತ್ತಿಲ್ಲ. ಈ ಕಾರಣಕ್ಕೆ ಅನೇಕ ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ಬಡಪಾಯಿ ರೈತರನ್ನು ಈ ಸಮಯದಲ್ಲೂ ವಂಚಿಸುತ್ತಿದ್ದಾರೆ. ರಸಗೊಬ್ಬರ ಖರೀದಿಸುವಾಗ ತೂಕದಲ್ಲಿ ವಂಚಿಸುತ್ತಿದ್ದ ಅಂಗಡಿ ಮಾಲೀಕನೊಬ್ಬ ಮೈಸೂರು ಜಿಲ್ಲೆಯಲ್ಲಿ ಸಿಕ್ಕಿಬಿದ್ದಿದ್ದಾನೆ.
ರಸಗೊಬ್ಬರ ಅಂಗಡಿ ಮಾಲೀಕನ ವಂಚನೆಯನ್ನು ರೈತರೇ ಬೆಳಕಿಗೆ ತಂದಿದ್ದಾರೆ. ನಂಜನಗೂಡಿನ ಹುಲ್ಲಹಳ್ಳಿಯಲ್ಲಿ ಗ್ರೋಮೋರ್ ಟ್ರೇಡರ್ಸ್ ಎಂಬ ಅಂಗಡಿಯಲ್ಲಿ 50 ಕೆ.ಜಿ ತೂಕದ ಬದಲಾಗಿ 38.40 ಕೆ.ಜಿ ತೂಕದ ರಸಗೊಬ್ಬರದ ಮೂಟೆಗಳನ್ನು ಮಾರಾಟ ಮಾಡುತ್ತಿದ್ದರು.
ರೈತರೂ ಕೂಡ ಸಾಕಷ್ಟು ವರ್ಷಗಳಿಂದ ಇಲ್ಲಿ ಗೊಬ್ಬರ ಖರೀದಿಸುತ್ತಿದ್ದರು. ಆದರೆ ಕಳೆದ ಕೆಲ ದಿನಗಳಿಂದ ರಸಗೊಬ್ಬರ ಮೂಟೆಯ ತೂಕ ಕಡಿಮೆ ಅಗಿರುವ ಕುರಿತು ರೈತರಿಗೆ ಅನುಮಾನ ಬಂದಿತ್ತು. ಕಳೆದ ಶುಕ್ರವಾರ ತೂಕ ಮಾಡಿ ನೋಡಿದಾಗ ರೈತರಿಗೆ ಅಘಾತವಾಯಿತು.

ಪ್ರತಿ 50 ಕೆ.ಜಿ ಯ ಚೀಲದಲ್ಲಿ 11.50 ಕೆ.ಜಿ ಗೊಬ್ಬರ ಕಡಿಮೆ ಇತ್ತು. ಅಂದರೆ ರೈತರು ಪ್ರತಿ ಮೂಟೆ ಖರೀದಿಸಿದಾಗ 100 ರುಪಾಯಿಗಿಂತ ಹೆಚ್ಚು ನಷ್ಟವಾಗುತ್ತಿತ್ತು. ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದಾಗ, ಅಂಗಡಿ ಮೇಲೆ ಶನಿವಾರ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.
ತೂಕದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ್ದು, ರಸಗೊಬ್ಬರ ಮೂಟೆಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸುತಿದ್ದು, ಆರೋಪ ಸಾಬೀತಾದರೆ ಅಂಗಡಿಯ ಪರವಾನಗಿ ರದ್ದುಗೊಳಿಸುವುದಾಗಿ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ರಸಗೊಬ್ಬರ ಅಂಗಡಿ ಮಾಲೀಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.












Click it and Unblock the Notifications